ರಾಜ್ಯ ಬಜೆಟ್ ಗೆ ಮೈಸೂರಿನ ಕೆಲ ಮುಖಂಡರು ಹೇಳುವುದೇನು ?
ಮೈಸೂರು, ಫೆಬ್ರವರಿ 9 : ಮೈಸೂರಿನ ಹಲವು ಮುಖಂಡರು ರಾಜ್ಯ ಬಜೆಟ್ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಪತ್ರಿಕಾ ಪ್ರಕಟಣೆ ಮೂಲಕ ಹಂಚಿಕೊಂಡಿದ್ದಾರೆ, ಅದರ ಸಾರಾಂಶ ಹೀಗಿದೆ.
ಬಜೆಟ್ನಲ್ಲಿ ವಿವಿಧ ಜನೋಪಯೋಗಿ ಯೋಜನೆಗಳನ್ನು ಘೋಷಣೆ ಮಾಡಿರುವುದು ಸ್ವಾಗತಾರ್ಹ.
ಮೈಸೂರಿನ ಪಾಲಿಗೆ ನಿರಾಸೆ
ರಾಜ್ಯದ ಮಟ್ಟಿಗೆ ಪರವಾಗಿಲ್ಲ. ಆದರೆ ಮೈಸೂರಿಗೆ ನಿರಾಸೆ ಉಂಟಾಗಿದೆ. ನಗರದ ಅಭಿವೃದ್ಧಿಗಾಗಿ 150 ಕೋಟಿ ಬಿಟ್ಟರೆ ಬೇರೆ ಯಾವುದೇ ದೊಡ್ಡ ಯೋಜನೆ ಪ್ರಕಟಿಸಿಲ್ಲ. ದಸರಾ ಪ್ರಾಧಿಕಾರ ಮತ್ತು ಮೈಸೂರು ಸೇರಿದಂತೆ ಏಳು ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಪ್ರಾಧಿಕಾರ ಸ್ಥಾಪಿಸುವಂತೆ ಕೋರಿದ್ದೆವು. ನಮ್ಮ ಕೋರಿಕೆಗೆ ಸರ್ಕಾರ ಬೆಲೆಕೊಟ್ಟಿಲ್ಲ. ಲ್ಯಾನ್ಸ್ಡೌನ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಹಾಲಿ ಇರುವಂತೆಯೇ ದುರಸ್ತಿ ಮಾಡಬೇಕು ಎಂಬ ಬೇಡಿಕೆಯನ್ನೂ ಪರಿಗಣಿಸಿಲ್ಲ. ಮೈಸೂರು ಹೋಟೆಲ್ ಮಾಲೀಕರ ಸಂಘದ ಸಿ. ನಾರಾಯಣಗೌಡರ ಅಭಿಪ್ರಾಯ
ಕುಮಾರಸ್ವಾಮಿ ಬಜೆಟ್ನಲ್ಲಿ ಯಾವ ಜಿಲ್ಲೆಗೆ ಎಷ್ಟು ಅನುದಾನ?
ಕಾರ್ಮಿಕ, ಉದ್ಯಮ ವಲಯಕ್ಕೆ ಪೂರಕ
ರೈತರು, ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು ಉದ್ಯಮ ವಲಯಕ್ಕೆ ಪೂರಕ ಬಜೆಟ್ ಇದಾಗಿದೆ. ರೆಡಿಮೇಡ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಸೌಲಭ್ಯಕ್ಕೆ ಯೋಜನೆಗಳನ್ನು ರೂಪಿಸಿರುವುದು ಸ್ವಾಗತಾರ್ಹ. ಮೈಸೂರಿಗೆ ಯಾವುದೇ ನಿರ್ದಿಷ್ಟ ಯೋಜನೆಗಳು ಇಲ್ಲದಿರುವುದು ನಿರಾಸೆ ಉಂಟುಮಾಡಿದೆ. ಚಾಮರಾಜನಗರ ಜಿಲ್ಲೆಯ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನಿರೀಕ್ಷಿಸಲಾಗಿತ್ತು. ಆ ಬಗ್ಗೆ ಯಾವುದೇ ಪ್ರಕಟಣೆ ಇಲ್ಲ.
- ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸುರವರ ಅಭಿಮತ
ಕನ್ನಡ ದಿನಪತ್ರಿಕೆಗಳು ಕಂಡಂತೆ ಕುಮಾರಸ್ವಾಮಿ ಬಜೆಟ್
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸ್ವಾಗತಾರ್ಹ
ಕಬಿನಿ ನದಿಯಿಂದ ಕುಡಿಯುವ ನೀರಿಗಾಗಿ ನುಗು ಜಲಾಶಯದ ಮೂಲಕ ನಂಜನಗೂಡು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು 80 ಕೋಟಿ, ಪಿರಿಯಾಪಟ್ಟಣ ತಾಲ್ಲೂಕಿನ ಮೂಲಸೌಕರ್ಯ ಅಭಿವೃದ್ಧಿಗೆ 40 ಕೋಟಿ, ತಿ.ನರಸೀಪುರ ತಾಲ್ಲೂಕಿನ ಬೆಟ್ಟಗಳ್ಳಿ ಗ್ರಾಮಕ್ಕೆ ನೀರಾವರಿ ಯೋಜನೆಗೆ 40 ಕೋಟಿ, ಹಾರಂಗಿ ಬಲದಂಡೆ ನಾಲೆಯ ಕೆ.ಆರ್.ನಗರ ಶಾಖಾ ನಾಲೆಯ ಲೈನಿಂಗ್ ಕಾಮಗಾರಿಗೆ 40 ಕೋಟಿ ಮೀಸಲಿರಿಸಲಾಗಿದೆ. ಈ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸ್ವಾಗತಾರ್ಹವಾಗಿದೆ - ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ.
ಕುಮಾರಸ್ವಾಮಿ ಬಜೆಟ್: ಯಾರಿಗೆ ಸಿಹಿ? ಯಾರಿಗೆ ಕಹಿ?
ಅಭಿವೃದ್ಧಿಪರ ಬಜೆಟ್
ಎಲ್ಲ ಕ್ಷೇತ್ರಗಳ ಏಳಿಗೆಗೆ ಸಮನಾದ ಅವಕಾಶ ನೀಡಿರುವ ಈ ಬಜೆಟ್ ನಾಡಿನ ಅಭಿವೃದ್ದಿಗೆ ಪೂರಕವಾಗಿದೆ. ರೈತರ ಅಭಿವೃದ್ಧಿಗೆ ಯೋಜನೆಗಳನ್ನು ಪ್ರಕಟಿಸಿರುವುದು ಅಭಿನಂದನಾರ್ಹ. ನಾಟಿಕೋಳಿ ಸಾಕಣೆಗೆ ಪ್ರೋತ್ಸಾಹ ಹಾಗೂ ಇದೇ ರೀತಿಯ ಇತರ ಕಾರ್ಯಕ್ರಮಗಳು ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ನೆರವಾಗಲಿವೆ. ಸಮಾಜಸೇವೆಯಲ್ಲಿ ತೊಡಗಿರುವ ಸಂಘ ಸಂಸ್ಥೆಗಳಿಗೆ ಅನುದಾನ ನೀಡಿರುವುದರಿಂದ ಅವುಗಳ ಕಾರ್ಯವನ್ನು ಗುರುತಿಸಿ ಪ್ರೋತ್ಸಾಹಿಸಿದಂತಾಗಿದೆ. ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮಾತು.
ದೂರದೃಷ್ಟಿಯೇ ಇಲ್ಲ
ಬಜೆಟ್ ಗಾತ್ರವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಮಿಗತೆ ಬಜೆಟ್ ಮಂಡಿಸುವುದೇ ಒಂದು ಸಾಧನೆಯಲ್ಲ. ಯೋಜನೆಗಳ ಜಾರಿಗೆ ಹಣ ಎಲ್ಲಿಂದ ತರುವುದು ಎಂಬ ಬಗ್ಗೆ ಸರ್ಕಾರ ಯೋಚಿಸಬೇಕು. ಸರ್ಕಾರದ ಬೊಕ್ಕಸ ಬರಿದು ಮಾಡಿ, ಸಾಲ ಮಾಡಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬದಲು ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿದ್ದರೆ ಬಜೆಟ್ ಬಗ್ಗೆ ವಿಶ್ವಾಸ ಮೂಡುತ್ತಿತ್ತು. ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರ, ಉದ್ಯೋಗ ಸೃಷ್ಟಿ, ಉದ್ಯಮಶೀಲತೆಗೆ ಒತ್ತು ನೀಡುವ ಬಜೆಟ್ ನಿರೀಕ್ಷಿಸಿದ್ದೆವು. ಆದರೆ ದೂರದೃಷ್ಟಿಯೇ ಇಲ್ಲದ ಬಜೆಟ್ ಇದಾಗಿದೆ - ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಅಭಿಮತ
ಸರ್ವರ ಅಭಿವೃದ್ಧಿಗೆ ಒತ್ತು
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಜೆಟ್ನಲ್ಲಿ ಯಾರನ್ನೂ ಕಡೆಗಣಿಸಿಲ್ಲ. ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಅವರು ಬಜೆಟ್ ಮೂಲಕ ಈಡೇರಿಸುತ್ತಿದ್ದಾರೆ. ಹಲವು ಯೋಜನೆಗಳ ಮೂಲಕ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಪ್ರವಾಸೋದ್ಯಮ, ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಸರ್ವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ - ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ, ಎನ್.ನರಸಿಂಹಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ