ಇಂದು ಮೈಸೂರಿಗೆ ಗಜಪಯಣ; ದಸರಾ ಗಜಪಡೆ ಸ್ವಾಗತಿಸುವವರು ಯಾರು?
ಮೈಸೂರು, ಆಗಸ್ಟ್ 22: ಸೆ.29ರಿಂದ ಅ.8ವರೆಗೆ ನಡೆಯಲಿರುವ ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಸ್ವಾಗತಿಸಲು ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ನಾಡಹಬ್ಬದಲ್ಲಿ ಭಾಗವಹಿಸಲಿರುವ 14 ಆನೆಗಳ ಪೈಕಿ ಆರು ಆನೆಗಳು ಮಾತ್ರ ಮೊದಲ ಹಂತದಲ್ಲಿ ಇಂದು ಮೈಸೂರಿಗೆ ಬರಲಿವೆ. ಅವುಗಳಲ್ಲಿ ನಾಲ್ಕು ಗಂಡಾನೆ, ಎರಡು ಹೆಣ್ಣಾನೆಗಳು ಸೇರಿವೆ.
ಉಸ್ತುವಾರಿಯಿಲ್ಲದೇ ಮಂಕಾಗುವುದೇ ಈ ಬಾರಿಯ ಮೈಸೂರು ದಸರಾ?
ಈ ಬಾರಿ ಅಂಬಾರಿ ಸಾರಥಿ ಅರ್ಜುನ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ್ ಹಾಗೂ ವಿಜಯ ಆನೆಗಳು ಮೈಸೂರಿಗೆ ಆಗಮಿಸಲಿವೆ. ಲಾರಿಗಳಲ್ಲಿ ಈ ಆನೆಗಳನ್ನು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣಕ್ಕೆ ಸಂಜೆ ವೇಳೆಗೆ ಕರೆ ತರಲಾಗುತ್ತದೆ. ಆ. 26ರವರೆಗೆ ಇವು ಇಲ್ಲಿಯೇ ಇರಲಿವೆ. ನಂತರ ಅರಮನೆಯ ಆವರಣಕ್ಕೆ ತೆರಳುತ್ತವೆ.
ದಸರೆಯಲ್ಲಿ ಭಾಗವಹಿಸಲಿವೆ 14 ಆನೆಗಳು
ನಾಡಹಬ್ಬದಲ್ಲಿ ನಾಗರಹೊಳೆ ಹುಲಿ ಯೋಜನೆ ವಿಭಾಗದ ಬಳ್ಳೆ ಆನೆ ಶಿಬಿರದ ಅರ್ಜುನ (59 ವರ್ಷ), ಮತ್ತಿಗೋಡು ಆನೆ ಶಿಬಿರದ ಬಲರಾಮ (61), ಅಭಿಮನ್ಯು (53), ವರಲಕ್ಷ್ಮಿ (63), ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಕಾವೇರಿ (41), ವಿಜಯ (62), ವಿಕ್ರಮ (46), ಗೋಪಿ (37), ಧನಂಜಯ (36), ಈಶ್ವರ (49), ಬಿಆರ್ಟಿ ವಿಭಾಗದ ಕೆ.ಗುಡಿ ಆನೆ ಶಿಬಿರದ ದುರ್ಗಪರಮೇಶ್ವರಿ (52), ಬಂಡೀಪುರ ವಿಭಾಗದ ರಾಂಪುರ ಆನೆ ಶಿಬಿರದ ಜಯಪ್ರಕಾಶ್ (57) ಭಾಗವಹಿಸಲಿವೆ. ಹೆಚ್ಚುವರಿಯಾಗಿ ರಾಂಪುರ ಆನೆ ಶಿಬಿರದ ಲಕ್ಷ್ಮಿ (17), ರೋಹಿತ್ (19) ಬರಲಿವೆ. ಈಶ್ವರ ಕೂಡ ಹೊಸ ಆನೆಯಾಗಿ ಸೇರ್ಪಡೆಗೊಳ್ಳಲಿದೆ.
ಆನೆಗಳ ವಾಸ್ತವ್ಯಕ್ಕೆ ಸುಸಜ್ಜಿತ ಶೆಡ್ ನಿರ್ಮಾಣ
ಗಜಪಡೆ ವಾಸ್ತವ್ಯಕ್ಕೆ ಮೈಸೂರು ಅರಮನೆ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಅದಕ್ಕಾಗಿ ಶೆಡ್ ಗಳನ್ನು ನಿರ್ಮಿಸಲಾಗುತ್ತಿದೆ. ಮಾವುತರು, ಕಾವಾಡಿಗರ ಕುಟುಂಬದ ವಾಸ್ತವ್ಯಕ್ಕೆ ಶೆಡ್ ನಿರ್ಮಾಣ ಕಾರ್ಯ ನಡೆದಿದೆ. ಸ್ವಚ್ಛತೆ ಕೆಲಸ, ಸುಣ್ಣ ಬಣ್ಣ ಬಳಿಯುವ ಕೆಲಸ ಭರದಿಂದ ಸಾಗಿದೆ. ಆ.26ರಂದು ಆನೆಗಳು ಅರಮನೆ ಆವರಣಕ್ಕೆ ಬರಲಿವೆ. ಹುಣಸೂರು ಕ್ಷೇತ್ರದಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತಿದೆ. ಆದರೆ, ಸ್ಥಳೀಯ ಶಾಸಕರೇ ಇಲ್ಲ. ಶಾಸಕ ಸ್ಥಾನದಿಂದ ಅಡಗೂರು ಎಚ್.ವಿಶ್ವನಾಥ್ ಅನರ್ಹಗೊಂಡಿರುವುದು ಇದಕ್ಕೆ ಕಾರಣ. ಅಲ್ಲದೇ, ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಇರುವುದಿಲ್ಲ. ಆಹ್ವಾನ ಪತ್ರಿಕೆ ಕೂಡ ಮುದ್ರಿಸಿಲ್ಲ.
ಚಲನವಲನ ಗಮನಿಸಲು ನಿಗಾ ವಹಿಸಿದ ಅರಣ್ಯ ಇಲಾಖೆ
ಕಾಡಿನಿಂದ ನಾಡಿಗೆ ಬರುವ ಆನೆಗಳು ನಗರದ ಹೊರವಲಯದ ಅಲೋಕದಲ್ಲಿ ವಾಸ್ತವ್ಯ ಹೂಡಲಿವೆ. ನಂತರ ಅಂಬಾರಿ ಹೊರುವ ಅರ್ಜುನ ಆನೆ ನೇತೃತ್ವದಲ್ಲಿ ಅವುಗಳು ಅರಮನೆ ಆವರಣಕ್ಕೆ ಪ್ರವೇಶಿಸಲಿವೆ. ಇವುಗಳೊಂದಿಗೆ ಮಾವುತರ ಮತ್ತು ಕಾವಾಡಿಗಳ ಕುಟುಂಬವು ಬರಲಿದೆ. ಈ ಕುಟುಂಬಗಳು ವಾಸ್ತವ್ಯ ಹೂಡಲು ಟೆಂಟ್, ಮಕ್ಕಳಿಗೆ ಟೆಂಟ್ ಶಾಲೆಯನ್ನೂ ನಿರ್ಮಾಣ ಮಾಡಲಾಗುತ್ತದೆ.
ಈಗಾಗಲೇ ಮಾವುತರಿಗೆ ಮತ್ತು ಕಾವಾಡಿಗಳಿಗೆ ಶೆಡ್ ನಿರ್ಮಾಣ ಮತ್ತು ಆನೆಗಳನ್ನು ಕಟ್ಟಿ ಹಾಕುವ ಸ್ಥಳಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಗಜಪಡೆ ಅರಮನೆ ಆವರಣಕ್ಕೆ ಪ್ರವೇಶಿಸಿದ ಬಳಿಕ ಇವುಗಳನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಪುಂಡಾಟಿಕೆ ನಡೆಸುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಆನೆಗಳು ಬೀಡುಬಿಡುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ಸಜ್ಜಾಗುತ್ತಿದೆ.
ಚಾಲನೆ ವಿಚಾರವಾಗಿ ಗೊಂದಲ
ಹುಣಸೂರಿನ ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಗಜಪಯಣದ ಸ್ವಾಗತ ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅಥವಾ ಸಚಿವ ವಿ. ಸೋಮಣ್ಣ ಭಾಗವಹಿಸಲಿದ್ದಾರೆ. ಆದರೆ ಇವರಿಬ್ಬರಲ್ಲಿ ಯಾರು ಚಾಲನೆ ನೀಡಲಿದ್ದಾರೆ ಎಂಬ ಗೊಂದಲ ಎದುರಾಗಿದೆ. ಯಾರು ಚಾಲನೆ ನೀಡುವರು ಎಂಬುದರ ಮೇಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗುವ ಮುನ್ಸೂಚನೆಯೂ ದೊರೆಯಲಿದೆ. ಇಂದು ಬೆಳಿಗ್ಗೆ ಸಚಿವ ಸೋಮಣ್ಣರಿಗೆ ಸಿಎಂ ಯಡಿಯೂರಪ್ಪರವರೇ ಖುದ್ದು ಫೋನಾಯಿಸಿ ಗಜಪಯಣಕ್ಕೆ ಚಾಲನೆ ನೀಡುವಂತೆ ತಿಳಿಸಿದ್ದಾರೆ ಎಂಬ ಊಹಾಪೋಹಗಳು ಸಹ ಹರಿದಾಡುತ್ತಿವೆ.