ಮೈಸೂರು : ಪ್ಯಾಕೆಟ್ ಒಡೆದು ಹಾಲು ಪೋಲಾದರೆ ವ್ಯಾಪಾರಸ್ಥರೇಕೆ ಹೊಣೆ?
ಮೈಸೂರು, ಫೆ. 6: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ 100ಕ್ಕೂ ಹೆಚ್ಚು ಹಾಲು ಮಾರಾಟಗಾರರು ಬೇಡಿಕೆ ಈಡೇರಿಸಲು ಆಗ್ರಹಿಸಿ ಶುಕ್ರವಾರ ಬೆಳಗ್ಗೆ ಟಿ. ನರಸೀಪುರ ರಸ್ತೆಯಲ್ಲಿರುವ ಹಾಲಿನ ಡೈರಿ ಎದುರು ಹಾಲು ಚೆಲ್ಲಿ ಪ್ರತಿಭಟಿಸಿದರು.
ನಂದಿನಿ ಹಾಲು ಸಂಸ್ಥೆಯು ಇನ್ನು ಮುಂದೆ ಒಡೆದುಹೋದ ಹಾಲು ಹಾಗೂ ಮಜ್ಜಿಗೆ ಪ್ಯಾಕೆಟ್ಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದೆ. ಈ ಕ್ರಮದಿಂದ ಪ್ರತಿದಿನ 2.5 ಲಕ್ಷ ಲೀ. ಗಿಂತ ಹೆಚ್ಚು ಹಾಲು ಮಾರುತ್ತಿರುವ ಸುಮಾರು 1,280 ವ್ಯಾಪಾರಸ್ಥರಿಗೆ ತೀವ್ರ ನಷ್ಟವಾಗುತ್ತಿದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. [ಟಿಂಟೆಡ್ ಗ್ಲಾಸಿ ಇದ್ದರೆ ದಂಡ]
ಪ್ಯಾಕೆಟ್ ಒಡೆದಿದ್ದಕ್ಕೆ ಹಾಲು ಮಾರಾಟಗಾರರು ಹಾಗೂ ಲಾರಿ ಸಾಗಾಟಗಾರರು ಒಬ್ಬರ ಮೇಲೊಬ್ಬರು ಕೈತೋರಿಸುತ್ತಿದ್ದಾರೆ. ಆದ್ದರಿಂದ ನಂದಿನಿ ಸಂಸ್ಥೆ ಒಡೆದ ಹಾಲಿನ ಪ್ಯಾಕೆಟ್ ವಾಪಸ್ ಪಡೆಯದಿರಲು ತೀರ್ಮಾನಿಸಿದೆ. [150 ಉಪನ್ಯಾಸಕರ ನೇಮಕಕ್ಕೆ ಒಪ್ಪಿಗೆ]
ಕಮಿಶನ್ ಹೆಚ್ಚಿಸಿ : ಅಲ್ಲದೆ, ವ್ಯಾಪಾರಸ್ಥರು ತಮಗೆ ನೀಡುತ್ತಿರುವ ಕಮಿಶನ್ ಪ್ರಮಾಣ ಹೆಚ್ಚಿಸಬೇಕು, ಹಾಲಿನ ಕವರ್ ದಪ್ಪ ಹೆಚ್ಚಿಸಬೇಕು. ಹೊಸ ಹಾಲು ಮಾರಾಟ ಮಳಿಗೆಗೆ ಒಪ್ಪಿಗೆ ನೀಡಬಾರದು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಸೀತಾರಾಮ್, ಕಾರ್ಯದರ್ಶಿ ಸತೀಶ್, ದಿನೇಶ್, ನಾರಾಯಣ್ ಹಾಗೂ ಇತರರು ಪ್ರತಿಭಟನೆ ನಡೆಸಿದರು.