ಶಿವರಾಮೇಗೌಡ ಕ್ಷಮೆಯಾಚಿಸಲಿ:ಮೈಸೂರು ಜಿಲ್ಲಾ ನಾಯ್ಡು ಸಮಾಜ ಆಗ್ರಹ
ಮೈಸೂರು, ಏಪ್ರಿಲ್ 3:ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಜಾತಿ ಬಗ್ಗೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡ ವಿರುದ್ಧ ಮೈಸೂರು ಜಿಲ್ಲಾ ನಾಯ್ಡು ಸಮಾಜದಿಂದ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶಿವರಾಮೇಗೌಡ ಚುನಾವಣಾ ಸಭೆಯಲ್ಲಿ ಸುಮಲತಾ ಜಾತಿ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಶಿವರಾಮೇಗೌಡ ಸುಮಲತಾ ಹಾಗೂ ದರ್ಶನ್ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು. ಕ್ಷಮೆಯಾಚಿಸದಿದ್ದರೆ ಶಿವರಾಮೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಜಿಲ್ಲಾ ಬಲಿಜ ಸಮಾಜದ ಉಪಾಧ್ಯಕ್ಷ ಶ್ರೀನಿವಾಸನ್ ಆಗ್ರಹಿಸಿದ್ದಾರೆ.
ಶಿವರಾಮೇಗೌಡ ವಿರುದ್ಧ ಪ್ರತಿಭಟನೆ:ಉಪೇಂದ್ರ ಕೊಟ್ಟ ಪ್ರತಿಕ್ರಿಯೆ ಏನು?
ಮಂಡ್ಯದಲ್ಲಿ 7.5ಸಾವಿರ ಬಲಿಜ ಜನಾಂಗದ ಮತದಾರರಿದ್ದಾರೆ. ಸುಮಲತಾ ಹಾಗೂ ದರ್ಶನ್ ವಿರುದ್ಧ ಮಾತನಾಡಿರುವುದು ಅವರಿಗೆ ಅವಮಾನ ಮಾಡಿದಂತಾಗಿದೆ. ಇಂತಹ ಹೇಳಿಕೆಗಳಿಂದ ಜೆಡಿಎಸ್ ಪಕ್ಷ ಜಾತ್ಯಾತೀತ ಎಂಬ ಮಾತಿಗೆ ಅರ್ಥ ಇಲ್ಲದಂತಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಮ್ಮ ಜನಾಂಗದ 3.5ಲಕ್ಷ ಮತದಾರರಿದ್ದಾರೆ. ಇಲ್ಲಿ ಸಮಾಜದ ಬಗ್ಗೆ ಮಾತನಾಡುವುದು ಇತರ ಕ್ಷೇತ್ರದ ನಿಮ್ಮ ಅಭ್ಯರ್ಥಿಗಳ ಮೇಲೂ ಪರಿಣಾಮ ಬೀರುತ್ತದೆ. ಈ ರೀತಿಯ ಹೇಳಿಕೆ ನೀಡುವುದಾದರೆ ಮಂಡ್ಯವನ್ನು ಪ್ರತ್ಯೇಕ ರಾಜ್ಯ ಕೇಳಿಬಿಡಿ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಕೇಳುತ್ತಿರುವ ಉಮೇಶ್ ಕತ್ತಿಯಂತೆ ನೀವೂ ಪ್ರತ್ಯೇಕ ರಾಜ್ಯ ಕೇಳಿ ಎಂದು ಟೀಕಿಸಿದ್ದಾರೆ.
ಕೂಡಲೇ ಶಿವರಾಮೇಗೌಡರನ್ನ ಪಕ್ಷದಿಂದ ವಜಾ ಮಾಡಬೇಕು. ಇಲ್ಲವಾದರೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ: ಶಿವರಾಮೇಗೌಡ
ಮಂಡ್ಯದಲ್ಲಿ ನಿಖಿಲ್ ಪರವಾಗಿ ನಮ್ಮ ಸಮಾಜದ ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ನೀವು ಇದೇ ರೀತಿ ಹೇಳಿಕೆ ನೀಡಿದರೆ ಅದು ನಿಖಿಲ್ ಮತ ಗಳಿಕೆ ಮೇಲೂ ಪ್ರಭಾವ ಬೀರುತ್ತೆ. ದರ್ಶನ್ ಮತ್ತು ಯಶ್ ಅವರನ್ನ ಕಳ್ಳೆತ್ತು ಎಂದು ಅವಮಾನ ಮಾಡಿದ್ದೀರಿ. ನೀವು ಅವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.