ಉಸ್ತುವಾರಿ ಸಚಿವರ ವೈಫಲ್ಯವೇ, ರೋಹಿಣಿ vs ಶಿಲ್ಪಾನಾಗ್ ಜಟಾಪಟಿಗೆ ಕಾರಣ!?
ಮೈಸೂರು, ಜೂನ್ 5: ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತೆ ನಡುವಿನ ಕಿತ್ತಾಟ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ಆದರೆ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಜಟಾಪಟಿಯ ಹಿಂದಿರುವ ಅಸಲಿ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿಯದಿದ್ದರೂ, ರೋಹಿಣಿ ಸಿಂಧೂರಿ vs ಶಿಲ್ಪಾನಾಗ್ ನಡುವಿನ ಗುದ್ದಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ.
ಯಾವುದೇ ಜಿಲ್ಲೆಯ ಅಭಿವೃದ್ಧಿ ಜೊತೆಗೆ ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ನಿಗಾವಹಿಸುವುದು, ಅಧಿಕಾರಿಗಳ ಆಟಾಟೋಪಕ್ಕೆ ಕಡಿವಾಣ ಹಾಕುವುದು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ. ಆದರೆ ಇದನ್ನು ನಿರ್ವಹಿಸುವಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಎಡವಿದ್ದು, ಜಿಲ್ಲೆಯ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಿರುವುದರ ಪರಿಣಾಮ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ಉಸ್ತುವಾರಿ ಸಚಿವರು ಎಡವಿದ್ರಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಆಗೊಮ್ಮೆ-ಈಗೊಮ್ಮೆ ಭೇಟಿ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್.ಟಿ ಸೋಮಶೇಖರ್, ಬಹುತೇಕ ಸಂದರ್ಭದಲ್ಲಿ ಜಿಲ್ಲೆಯಿಂದ ಹೊರಗಿದ್ದು, ಆಗೊಮ್ಮೆ-ಈಗೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಜೊತೆಗೆ ಜಿಲ್ಲೆಯ ಅಧಿವೃದ್ಧಿ ವಿಷಯದ ಬಗ್ಗೆ ಆರಂಭಿಕ ದಿನಗಳಲ್ಲಿ ತೋರುತ್ತಿದ್ದ ಉತ್ಸಾಹ ನಂತರದ ದಿನಗಳಲ್ಲಿ ಕಡಿಮೆ ಆಗಿತ್ತು. ಹೀಗಾಗಿ ಮೈಸೂರಿಗೆ ಹೆಚ್ಚಾಗಿ ವೀಕೆಂಡ್ ವಿಸಿಟ್ ಮಾಡುತ್ತಿದ್ದ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಅಧಿಕಾರಿಗಳ ಕಾರ್ಯವೈಖರಿ ಗಮನಿಸಲು ಹಾಗೂ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಯಾವಾಗ ಸಚಿವರ ಒತ್ತಡ ಕಡಿಮೆಯಾಯಿತು, ಅಧಿಕಾರಿಗಳು ಸಹ ಯಾವ ಭಯ ಅಥವಾ ಸಲಹೆ, ಸೂಚನೆಗಳಿಲ್ಲದೆ ಮನಬಂದಂತೆ ಕೆಲಸ ಮಾಡಬೇಕಾಯಿತು.
ಕೊರೊನಾ ಇದ್ರೂ ಡೋಂಟ್ಕೇರ್
ಈ ನಡುವೆ ಆಕಸ್ಮಿಕವಾಗಿ ಎದುರಾದ ಕೊರೊನಾ ಸಂಕಷ್ಟದಲ್ಲೂ ಉಸ್ತುವಾರಿ ಜವಾಬ್ದಾರಿಯಿಂದ ಕೆಲಸ ಮಾಡುವ ಆಸಕ್ತಿ ತೋರಲಿಲ್ಲ. ಪ್ರಮುಖವಾಗಿ 2ನೇ ಅಲೆ ಹೆಚ್ಚಾದ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಸಭೆಗಳನ್ನು ಮಾಡಿದ್ದು ಬಿಟ್ಟರೇ, ಮೈಸೂರಿನಲ್ಲೇ ವಾಸ್ತವ್ಯ ಹೂಡಿ, ಜಿಲ್ಲೆಯ ಸ್ಥಿತಿ-ಗತಿಗಳ ಬಗ್ಗೆಯೂ ಸಮರ್ಪಕವಾಗಿ ನಿಗಾವಹಿಸಲಿಲ್ಲ. ಹೀಗಾಗಿ ಸಂಪೂರ್ಣ ಜವಾಬ್ದಾರಿ ಇಲ್ಲಿನ ಅಧಿಕಾರಿಗಳು ಹಾಗೂ ಇತರೆ ಜನಪ್ರತಿನಿಧಿಗಳ ಬೆನ್ನಿಗೆ ಬಿತ್ತು.
ಅಧಿಕಾರಿಗಳಲ್ಲಿ ಸಾಮರಸ್ಯದ ಕೊರತೆ
ಯಾವಾಗ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳನ್ನು ನಂಬಿ ಜವಾಬ್ದಾರಿ ನೀಡಿ ನಿರ್ಲಕ್ಷ್ಯ ಮಾಡಿದರೋ, ಕೋವಿಡ್ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾತ್ರವೇ ಹೆಚ್ಚಾಯಿತು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಅಧಿಕಾರಿಗಳ ನಡುವೆ ಸಾಮರಸ್ಯದ ಕೊರತೆ ಸಹ ಶುರುವಾಯಿತು. ಜಿಲ್ಲೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆದು ಅಧಿಕಾರಿಗಳ ನಡುವೆ ಕಿತ್ತಾಟ ನಡೆದರೂ, ಅದರ ಸುಳಿವು ಸಹ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಗಲಿಲ್ಲ. ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಮ್ಮ ಪಕ್ಷದವರು ಅಥವಾ ಇತರೆ ಜನಪ್ರತಿನಿಧಿಗಳು ನೀಡಿದ ಮಾಹಿತಿ ಪಡೆದು ಜಿಲ್ಲಾಧಿಕಾರಿ ಸೇರಿದಂತೆ ಕೆಲವೊಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಮಸ್ಯೆ ಬಗೆಹರಿಸುವ ಆಸಕ್ತಿ ತೋರಲಿಲ್ಲ
ಸಚಿವ ಎಸ್.ಟಿ ಸೋಮಶೇಖರ್ರ ಈ ನಡೆಯಿಂದಾಗಿ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳ ನಡುವೆ ಸದ್ದಿಲ್ಲದೆ ಜಟಾಪಟಿ ಶುರುವಾಯಿತು. ತಿಂಗಳ ಹಿಂದೆ ಮೈಸೂರಿಗೆ ಆಗಮಿಸಿದ್ದ ವೇಳೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪರವಾಗಿ ಒಲವು ತೋರಿದ್ದ ಎಸ್ಟಿಎಸ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆಯೂ ಚರ್ಚಿಸಿದ್ದರು. ಈ ನಡುವೆ ಕಳೆದ 15 ದಿನಗಳಿಂದ ಜಿಲ್ಲಾಧಿಕಾರಿಗಳಿಂದ ದೂರ ಇದ್ದ ಸಚಿವ ಸೋಮಶೇಖರ್, ಜಿಲ್ಲೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ, ತಮ್ಮ ಪಕ್ಷದ ಸಂಸದರು ಹಾಗೂ ಇತರೆ ಪಕ್ಷದ ಶಾಸಕರು ಡಿಸಿ ವಿರುದ್ಧ ಸಾಲು-ಸಾಲು ಆರೋಪ ಮಾಡುತ್ತಿದ್ದರೂ, ಸಚಿವ ಸೋಮಶೇಖರ್ ಮಾತ್ರ ಈ ಬಗ್ಗೆ ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ. ಸಚಿವ ಈ ನಿರ್ಲಕ್ಷ್ಯ ಡಿಸಿ ಹಾಗೂ ಪಾಲಿಕೆ ಆಯುಕ್ತರ ತಿಕ್ಕಾಟ ಇದೀಗ ಬೀದಿಗೆ ಬಂದು ನಿಂತಿದೆ.
ಬದಲಾಗ್ತಾರಾ ಜಿಲ್ಲಾ ಮಂತ್ರಿ?
ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ವಿಚಾರದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ತೋರಿದ ನಿರ್ಲಕ್ಷ್ಯತನ ಸದ್ಯ ಶಿಲ್ಪಾನಾಗ್ ರಾಜೀನಾಮೆ ಹಂತಕ್ಕೆ ಬಂದಿದೆ. ಜಿಲ್ಲೆಯಲ್ಲಿ ಇಷ್ಟೊಂದು ಮಹತ್ವದ ಬೆಳವಣಿಗೆ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಪರಿಸ್ಥಿತಿ ಕೈಮೀರಿ ಹೋಗಿದೆ ಎಂಬ ಹೇಳಿಕೆ ನೀಡುವ ಮೂಲಕ ತಮ್ಮ ಅಸಹಾಯಕತೆ ತೋರಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಅಂಗಳ ತಲುಪಿರುವ ಐಎಎಸ್ ಅಧಿಕಾರಿಗಳ ಜಟಾಪಟಿ, ಬಗೆಹರಿಯದೆ ಇದ್ದರೆ ಉಸ್ತುವಾರಿ ಸಚಿವರ ಬದಲಾವಣೆ ಆಗುವ ಸಾಧ್ಯತೆ ಸಹ ಹೆಚ್ಚಾಗಿದೆ.