ಮೈಸೂರು, ಮೈಮುಲ್ ಚುನಾವಣೆ: ಜಿ.ಟಿ.ದೇವೇಗೌಡರ ಮುಂದೆ ಹೀನಾಯವಾಗಿ ಮುಗ್ಗರಿಸಿದ ಕುಮಾರಣ್ಣ ಪಡೆ
ಮೈಸೂರು, ಮಾರ್ಚ್ 16: ಜೆಡಿಎಸ್ ಟಿಕೆಟ್ ನಿಂದ ಅಸೆಂಬ್ಲಿ ಚುನಾವಣೆ ಗೆದ್ದು, ಪಕ್ಷದಲ್ಲಿ ಇದ್ದೂ ಇಲ್ಲದಂತಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ್ರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂಡ್ ತಂಡಕ್ಕೆ ಭರ್ಜರಿ ಶಾಕ್ ನೀಡಿದ್ದಾರೆ.
ಮೈಮುಲ್ ಚುನಾವಣೆಯಲ್ಲಿ ಕುಮಾರಸ್ವಾಮಿ ಬೆಂಬಲಿತ ಅಭ್ಯರ್ಥಿಗಳು ಸೋಲು ಅನುಭವಿಸಿದ್ದು, ಜಿಟಿಡಿ ಬೆಂಬಲಿತರು ಭರ್ಜರಿ ಜಯ ದಾಖಲಿಸುವ ಮೂಲಕ, ಎಚ್ಡಿಕೆಯವರ ಹಲವು ದಿನಗಳ ಪ್ರಯತ್ನ ನೀರು ಪಾಲಾಗಿದೆ.
"ಕುಮಾರಸ್ವಾಮಿಯವರೇ... ಶಕುನಿ, ಮಂಥರೆಯ ಮಾತು ಕೇಳಬೇಡಿ''
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದಾರೆ ಮತ್ತು ಪಕ್ಷಕ್ಕೆ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆಂದು ಕುಮಾರಸ್ವಾಮಿಯವರು, ಜಿಟಿಡಿ ಬಣಕ್ಕೆ ಈ ಚುನಾವಣೆಯಲ್ಲಿ ಸೋಲುಣಿಸಬೇಕು ಎಂದು ಪಣ ತೊಟ್ಟಿದ್ದರು.
ಮೈಮುಲ್ ಚುನಾವಣೆ; ಸಾ. ರಾ. ಮಹೇಶ್ v/s ಜಿ. ಟಿ. ದೇವೇಗೌಡ!
ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕುಮಾರಸ್ವಾಮಿ, ಮೈಸೂರಿನಲ್ಲೇ ವಾಸ್ತವ್ಯ ಹೂಡಿ ಪಕ್ಷದ ಇನ್ನೋರ್ವ ಶಾಸಕ ಸಾ.ರಾ.ಮಹೇಶ್ ಜೊತೆ ಕಾರ್ಯತಂತ್ರ ರೂಪಿಸಿದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆಗದೇ, ಎಚ್ಡಿಕೆ ಮುಖಭಂಗ ಅನುಭವಿಸಿದ್ದಾರೆ.
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
ಮೈಮುಲ್ (ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಚುನಾವಣೆ ಮಂಗಳವಾರ (ಮಾ 16) ನಡೆದಿತ್ತು. ಅಧ್ಯಕ್ಷರೂ ಸೇರಿ ಒಟ್ಟು ಹದಿನೈದು ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎಚ್.ಡಿ.ಕುಮಾರಸ್ವಾಮಿಯವರ ಬೆಂಬಲಿತರು ಕೇವಲ ಮೂರು ಸ್ಥಾನವನ್ನಷ್ಟೇ ಗೆಲ್ಲಲು ಶಕ್ತರಾಗಿದ್ದಾರೆ.
ಪಕ್ಷದಲ್ಲಿನ ಮಂಥರೆ, ಶಕುನಿಯ ಮಾತನ್ನು ಜಾಸ್ತಿ ಕೇಳಬೇಡಿ
ಪಕ್ಷದಲ್ಲಿನ ಮಂಥರೆ, ಶಕುನಿಯ ಮಾತನ್ನು ಜಾಸ್ತಿ ಕೇಳಬೇಡಿ ಎಂದು ಜಿ.ಟಿ.ದೇವೇಗೌಡ್ರು, ಕುಮಾರಸ್ವಾಮಿಯವರಿಗೆ ಒಂದು ದಿನದ ಹಿಂದೆ ಬುದ್ದಿಮಾತನ್ನು ಹೇಳಿದ್ದರು. ಪರೋಕ್ಷವಾಗಿ ಸಾ.ರಾ.ಮಹೇಶ್ ಅವರನ್ನು ಉಲ್ಲೇಖಿಸಿದ್ದ ಜಿಟಿಡಿ, ಮೈಸೂರು ಸಹಕಾರಿ ಧುರೀಣ ಎನ್ನುವುದನ್ನು ಮಗುದೊಮ್ಮೆ ಸಾಬೀತು ಪಡಿಸಿದ್ದಾರೆ. ಜಿಟಿಡಿ ಬಣ ಹನ್ನೆರಡು ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಎಚ್.ಡಿ.ರೇವಣ್ಣ ಅವರ ಸಂಬಂಧಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ
ಒಟ್ಟು ಚಲಾವಣೆಯ 1,052 ಮತಗಳ ಪೈಕಿ 1,051 ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಹುಣಸೂರು ವಿಭಾಗದ ಎಲ್ಲಾ ಎಂಟು ಸ್ಥಾನಗಳನ್ನು ಜಿಟಿಡಿ ಬಣ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ. ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ ಅವರ ಪುತ್ರ ಪ್ರಸನ್ನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರು, ಜಿಟಿಡಿ ಆಪ್ತ ಬಣದಲ್ಲಿ ಕಾಣಿಸಿಕೊಂಡವರು. ಇನ್ನು, ಎಚ್.ಡಿ.ರೇವಣ್ಣ ಅವರ ಸಂಬಂಧಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ.
ಸೋಲನ್ನು ಸಾ.ರಾ.ಮಹೇಶ್ ಈ ರೀತಿ ವ್ಯಾಖ್ಯಾನಿಸಿದ್ದಾರೆ
"ಮೈಸೂರಿನಲ್ಲಿ ಬದಲಾದ ಸನ್ನಿವೇಶದಲ್ಲಿ ಹದಿನೈದು ದಿನದಲ್ಲಿ ನಾವು ತಯಾರಿ ಮಾಡಿಕೊಂಡೆವು. ಅವರು ಆಲದ ಮರ ಅಂತ ಹೇಳಿಕೊಂಡಿದ್ದರು. ಅದರ ಅಡಿ ಯಾವ ಗಿಡವೂ ಬೆಳೆಯಲ್ಲ. ಹೀಗಾಗಿ ಹೊಸ ಗಿಡ ಬೆಳೆಯಲು ಅವಕಾಶ ನೀಡಿದ್ದೇವೆ, ಅದು ಮುಂದೆ ಬೆಳೆಯುತ್ತದೆ. ಕುಮಾರಸ್ವಾಮಿಗೂ ಎದುರಾಳಿ ಬಣ ಗೆಲ್ಲೋದು ಗೊತ್ತಿತ್ತು. ಆದರೂ ಒಂದು ಪ್ರಯತ್ನ ನಡೆಸಿದ್ದೆವು. ಸ್ವಲ್ಪ ಈ ಬಾರಿ ಪ್ರಯತ್ನ ಮಾಡಿದ್ದೆವು. ಮುಂದಿನ ಬಾರಿ ಫಲ ಕೊಡಲಿದೆ"ಎಂದು ಸೋಲನ್ನು ಸಾ.ರಾ.ಮಹೇಶ್ ಈ ರೀತಿ ವ್ಯಾಖ್ಯಾನಿಸಿದ್ದಾರೆ.