ಪಾರಂಪರಿಕ ಕಟ್ಟಡಗಳ ನೆಲಸಮ ವಿಚಾರ:ಯದುವೀರ್ ಜೊತೆ ಮೈಸೂರು ಮೇಯರ್ ಚರ್ಚೆ
ಮೈಸೂರು, ಫೆಬ್ರವರಿ 10: ಮೈಸೂರಿನ ಪಾರಂಪರಿಕ ಕಟ್ಟಡವಾದ ಲಾನ್ಸ್ ಡೌನ್ ಬಿಲ್ಡಿಂಗ್ ಹಾಗೂ ಕೆ.ಆರ್. ಮಾರುಕಟ್ಟೆ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ರಾಜವಂಶಸ್ಥ ಯದುವೀರ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದೇನೆ ಎಂದು ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಲಾನ್ಸ್ ಡೌನ್ ಬಿಲ್ಡಿಂಗ್ ಹಾಗೂ ಕೆ ಆರ್ ಮಾರುಕಟ್ಟೆ ನೆಲಸಮ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾಜವಂಶಸ್ಥ ಯದುವೀರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಪಾರಂಪರಿಕ ಕಟ್ಟಡಗಳ ನೆಲಸಮ ವಿಚಾರ:ಅಸಮಾಧಾನ ವ್ಯಕ್ತಪಡಿಸಿದ ಯದುವೀರ್
ಈ ಕುರಿತಾಗಿ ಇಂದು ಮಾತನಾಡಿದ ಮೇಯರ್ ಪುಷ್ಪಲತಾ, ಖುದ್ದಾಗಿ ಯದುವೀರ್ ಭೇಟಿ ಮಾಡಿ, ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮಗೂ ಪಾರಂಪರಿಕ ಕಟ್ಟಡಗಳ ಉಳಿಸುವ ಆಸಕ್ತಿಯಿದೆ ಹಾಗೂ ಗೌರವವೂ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಯದುವೀರ್ ಅವರನ್ನ ಭೇಟಿ ಮಾಡುತ್ತೇವೆ. ಲಾನ್ಸ್ ಡೌನ್ ಕಟ್ಟಡವನ್ನು ಸ್ಮಾರಕವಾಗಿಡಬಹುದು. ಆದರೆ ಮತ್ತೆ ವಾಣಿಜ್ಯ ಕೆಲಸಗಳಿಗೆ ಬಳಸಲು ಸಾಧ್ಯವಾಗುವುದಿಲ್ಲ. ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆದಿದ್ದೇವೆ ಎಂದು ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಮೈಸೂರಿನ ಪಾರಂಪರಿಕ ಕಟ್ಟಡಗಳ ನೆಲಸಮಕ್ಕೆ ವಿರೋಧ
ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಮೈಸೂರು ಮಹಾನಗರ ಪಾಲಿಕೆಗೆ 150 ಕೋಟಿ ಅನುದಾನ ನೀಡಿದ ಹಿನ್ನೆಲೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿ, ನಾವು ಬಜೆಟ್ ಮುನ್ನ 300 ಕೋಟಿ ಅನುದಾನ ಬೇಡಿಕೆ ಇಟ್ಟಿದ್ದೆವು. ಆದರೆ 150 ಕೋಟಿ ದೊರೆತಿದೆ. ನೀಡಿರುವ 150 ಕೋಟಿ ಹಣವನ್ನು ಮೈಸೂರು ನಗರಾಭಿವೃದ್ಧಿಗೆ ಬಳಸಬೇಕಿದೆ. ಕೆಲವೆಡೆ ಸಾಕಷ್ಟು ಸಮಸ್ಯೆಗಳಿವೆ. ಈ ಹಿನ್ನೆಲೆಯಲ್ಲಿ ಬಜೆಟ್ ನಲ್ಲಿ ಘೋಷಣೆಯಾಗಿರುವ ಹಣ ವಿವಿಧ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗವಾಗಲಿದೆ ಎಂದರು.