ಮಕ್ಕಳಿಗೆ ಪುಷ್ಪವೃಷ್ಟಿ, ಸಿಹಿ ಹಂಚಿ ಸ್ವಾಗತಿಸಿದ ಮೈಸೂರು ಮೇಯರ್
ಮೈಸೂರು, ಮೇ 29 : ಇಂದಿನಿಂದ ರಾಜ್ಯದೆಲ್ಲೆಡೆ ಸರಕಾರಿ ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆ ಶಾಲಾ ಮಕ್ಕಳಿಗೆ ಮೈಸೂರಿನಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಹೂವಿನ ಸ್ವಾಗತ ಕೋರಿದರು.
ಮೈಸೂರಿನ ಅಕ್ಕನ ಬಳಗ ಸರ್ಕಾರಿ ಶಾಲೆಯಲ್ಲಿ ಪ್ರತಿ ವರ್ಷದಂತೆ ನಡೆದ ಈ ಕಾರ್ಯಕ್ರಮದಲ್ಲಿ ಗುಲಾಬಿ ಹೂ ಹಾಗೂ ಸಿಹಿ ನೀಡಿ ಆರತಿ ಎತ್ತುವ ಮೂಲಕ ಬೇಸಿಗೆ ರಜೆ ಮುಗಿಸಿ ಬಂದ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತ ಕೋರಲಾಯಿತು.
ನಾಳೆ ಶಾಲೆಗಳ ರೀ ಓಪನ್, ಸ್ವಾಗತಕ್ಕೆ ಸಜ್ಜಾದ ಶಿಕ್ಷಣ ಇಲಾಖೆ
ಇದೇ ವೇಳೆ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಬೆಳವಣಿಗೆ. ಹೆಚ್ಚಿನ ಸವಲತ್ತು ಹಾಗೂ ಉತ್ತಮ ಶಿಕ್ಷಣದೊಂದಿಗೆ ಸರ್ಕಾರಿ ಶಾಲೆ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ಅತ್ಯುನ್ನತ ಹುದ್ದೆಯಲ್ಲಿ ಇರುವುದು ಸಂತಸಕರ ವಿಚಾರ. ಅದೇ ರೀತಿ ಕೆಲ ಸಂಘ ಸಂಸ್ಥೆಗಳು ಸರ್ಕಾರಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ಇನ್ನಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಲು ಉತ್ಸುಕರಾಗುತ್ತಾರೆ ಎಂದು ತಿಳಿಸಿದ್ದರು.
ಇಂದಿನ ಮಕ್ಕಳಿಗೆ ದೈಹಿಕ ಬೆಳವಣಿಗೆಯತ್ತ ಗಮನ ಹರಿಸುತ್ತಿಲ್ಲ. ಮನೆಯಿಂದ ಶಾಲೆಗೆ ಹೊರಬರಲು ಬಸ್ ಅಥವಾ ಆಟೋ ವ್ಯವಸ್ಥೆ ಮಾಡಲಾಗುತ್ತದೆ. ಓದು, ಮನೆ, ಶಾಲೆ ಇಷ್ಟಕ್ಕೇ ಸೀಮಿತರಾಗುತ್ತಿದ್ದಾರೆ. ಸಮಯ ಸಿಕ್ಕರೆ ಮೊಬೈಲ್, ಟಿ.ವಿ ನೋಡುತ್ತಾ ಕಾಲ ಕಳೆಯುತ್ತಾರೆ. ಇದರಿಂದ ಅನೇಕ ಮಕ್ಕಳಲ್ಲಿ ಬೊಜ್ಜು ಬಂದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಯೋಗ ತರಗತಿಯನ್ನು ಆರಂಭಿಸಬೇಕು. ಇದರಿಂದ ಮಕ್ಕಳ ದೇಹ ಹಾಗೂ ಮನಸ್ಸಿಗೆ ಚೈತನ್ಯ ಸಿಗುತ್ತದೆ ಎಂದರು.