ಆಹಾರ ಕಿಟ್ ಲೆಕ್ಕ ಕೇಳಿ ಮುಜುಗರಕ್ಕೀಡಾದ ಮೈಸೂರು ಮೇಯರ್
ಮೈಸೂರು, ಮೇ 14: ಮೈಸೂರು ನಗರದ ಬಡವರಿಗೆ ವಿತರಿಸಲು ವಿವಿಧ ಸಂಘ-ಸಂಸ್ಥೆಗಳು ನೀಡಿದ ಪಡಿತರ ಕಿಟ್ ಗಳ ಸಮಗ್ರ ಮಾಹಿತಿ ನೀಡುವಂತೆ ಮೇಯರ್ ಕೇಳಿದರು. ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತೀವ್ರ ತರಾಟೆಗೆ ಒಳಗಾದ ಮೇಯರ್ ತಸ್ನೀಂ ಮುಜುಗರಕ್ಕೀಡಾಗಿದ್ದಾರೆ.
ನಗರ ಪಾಲಿಕೆಯಲ್ಲಿ ಬುಧವಾರ ಕೊರೊನಾ ಸೋಂಕು ನಿವಾರಣೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಕಿಟ್ ನ ಮಾಹಿತಿ ನೀಡುವಂತೆ ಮೇಯರ್ ತಸ್ನೀಂ ಅವರು, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರಿಗೆ ಸೂಚಿಸಿದರು. ಈ ಸಂದರ್ಭ ಬಿಜೆಪಿ ಸದಸ್ಯರು ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಆಡಳಿತಾರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಕೂಡ ಮೇಯರ್ ಬೆಂಬಲಕ್ಕೆ ಬರಲಿಲ್ಲ.
ಜಿಲ್ಲಾಧಿಕಾರಿಯಿಂದ ರಾಜ್ಯ -ಕೇರಳ ಗಡಿ ಚೆಕ್ ಪೋಸ್ಟ್ ಪರಿಶೀಲನೆ
ಕಿಟ್ ಗಳ ಮಾಹಿತಿ ನೀಡುವಂತೆ ಒತ್ತಾಯಿಸಿಲ್ಲ
ಬಿಜೆಪಿ ಸದಸ್ಯ ಶಿವಕುಮಾರ್ ಮಾತನಾಡಿ, ""ಕಿಟ್ ಗಳ ಮಾಹಿತಿ ನೀಡುವಂತೆ ಪಾಲಿಕೆಯ 65 ಸದಸ್ಯರು ಒತ್ತಾಯಿಸುತ್ತಿದ್ದಾರೆಂದು ನೀವು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೀರಿ, ಆದರೆ ಸದಸ್ಯರು ಎಂದೂ ಕಿಟ್ ಗಳ ಮಾಹಿತಿ ನೀಡುವಂತೆ ಒತ್ತಾಯಿಸಿಲ್ಲ. ಕೊರೋನಾ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳ ಪರಿಶ್ರಮ ಅಪಾರವಾದದ್ದು. ಅವರ ಬಳಿ ಲೆಕ್ಕ ಕೇಳಿ ಅಪಮಾನ ಮಾಡುವುದು ಸರಿಯಲ್ಲ'' ಎಂದರು.
""ಪಾಲಿಕೆ ಆಯುಕ್ತರು ಬಿಜೆಪಿ ಸದಸ್ಯರು ಹೇಳಿದಂತೆ ಕೇಳುತ್ತಾರೆಂಬ ಗಂಭೀರ ಆರೋಪ ಮಾಡಿದ್ದೀರಿ, ಈ ಕುರಿತು ಕ್ಷಮೆಯಾಚಿಸಿ ಎಂದು ಅವರು ಪಟ್ಟು ಹಿಡಿದರು. ಆಗ ಮೇಯರ್ ತಾವು ಹೇಳಿದ ಮಾತನ್ನು ಹಿಂಪಡೆದರು. ಕೇವಲ ಆಯುಕ್ತರ ಬಳಿ ಲೆಕ್ಕ ಕೇಳುವುದು ಸರಿಯಲ್ಲ.
ಮೇಯರ್ ನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು
ನಿಮಗೂ ಕೆಲವು ಸಂಘ-ಸಂಸ್ಥೆಗಳು ಕಿಟ್ ಗಳನ್ನು ನೀಡಿದ್ದಾರೆ. ಅವುಗಳ ಕುರಿತೂ ನೀವು ಮಾಹಿತಿ ನೀಡುತ್ತೀರಾ? ಅದರ ಮಾಹಿತಿ ನೀಡಿ'' ಎಂದು ಪಟ್ಟು ಹಿಡಿದಾಗ, ಒಟ್ಟು 150 ಕಿಟ್ ಗಳು ಬಂದಿತ್ತು. ನನ್ನ ವಾರ್ಡ್ ಸೇರಿದಂತೆ ಮೂರು ವಾರ್ಡ್ ಗೆ ಹಂಚಿಕೆ ಮಾಡಿದ್ದೇನೆ ಎಂದು ಮೇಯರ್ ತಸ್ನೀಂ ತಿಳಿಸಿದರು.
ಸದಸ್ಯರನ್ನು ಕೇಳದೆ ನಿಮಗೆ ಬೇಕಾದ ವಾರ್ಡ್ ಗೆ ಮಾತ್ರ ಯಾವ ರೀತಿ ಕಿಟ್ ಹಂಚಿಕೆ ಮಾಡಿದ್ದೀರೆಂದು ತರಾಟೆಗೆ ತೆಗೆದುಕೊಂಡರು. ಕೊರೊನಾ ಸಂದರ್ಭದಲ್ಲಿ ಮೇಯರ್ ಮನೆಯಲ್ಲಿ ಕುಳಿತು ಲೆಕ್ಕ ಕೇಳುವುದು ಸರಿಯಲ್ಲ.
ಕೊರೊನಾ ನಿಯಂತ್ರಣವಾಗಲು ಅಧಿಕಾರಿಗಳ ಪರಿಶ್ರಮ ಕಾರಣ
ನಗರದ ವಿವಿಧ ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ಹೆಚ್ಚಿನ ಪ್ರಮಾಣದಲ್ಲಿ ನೆರವು ಬರುವಂತೆ ಮಾಡಬೇಕು. ಆದರೆ ಮೇಯರ್ ತಮ್ಮ ಕರ್ತವ್ಯವನ್ನು ಮರೆತಿದ್ದಾರೆಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯವೇ ಮೆಚ್ಚುವ ರೀತಿಯಲ್ಲಿ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಅಧಿಕಾರಿಗಳ ಪರಿಶ್ರಮವೇ ಕಾರಣ. ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಲೆಕ್ಕ ಕೇಳುವುದು ಸರಿಯಲ್ಲ ಎಂದು ಆಡಳಿತ ಪಕ್ಷದ ನಾಯಕ ಅಯೂಬ್ ಖಾನ್ ಅಭಿಪ್ರಾಯಪಟ್ಟರು.
ಅಭಿವೃದ್ಧಿ ಕುರಿತು ಚರ್ಚಿಸಲು ಸದಸ್ಯರ ಒಲವು
ಈ ಘಟನೆಯಿಂದ ಅಸಮಾಧಾನಗೊಂಡ ಮೇಯರ್, ನಿಮಗ್ಯಾರಿಗೂ ಲೆಕ್ಕ ಬೇಡದಿದ್ದಲ್ಲಿ ಸಭೆ ಮುಗಿಸೋಣ, ಎಂದು ಸಭೆ ಮುಕ್ತಾಯಗೊಳಿಸಿ ಹೊರಡಲು ಸಜ್ಜಾಗುತ್ತಿದ್ದಂತೆ, ಸದಸ್ಯರು ಯಾರೂ ಹೊರಡದೇ ನಗರದ ಅಭಿವೃದ್ಧಿ ಕುರಿತು ಚರ್ಚಿಸಲು ಮುಂದಾದರು. ಆಗ ಅನಿವಾರ್ಯವಿಲ್ಲದೇ ಮೇಯರ್ ಸಭೆ ಮುಂದುವರಿಸಬೇಕಾಗಿ ಬಂತು.