ಮುರಿದು ಬಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ; ಕುಮಾರಸ್ವಾಮಿ ಹೇಳಿದ್ದೇನು?
ಮೈಸೂರು, ಫೆಬ್ರವರಿ 24; ನಿರೀಕ್ಷೆಯಂತೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮುರಿದು ಬಿದ್ದಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, "ನಮ್ಮ ಶಕ್ತಿ ಏನೆಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕರಿಗೆ ನಮ್ಮ ಶಕ್ತಿ ತೋರಿಸಬೇಕೆಂಬುದು ನಮ್ಮ ಅಭಿಪ್ರಾಯ. ಮೈತ್ರಿ, ಹಿಂದಿನ ಒಪ್ಪಂದ ಮುರಿದು ಬೀಳಲು ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣ" ಎಂದು ಹೇಳಿದರು.
ಮೈಸೂರು ಮೇಯರ್ ಚುನಾವಣೆ: ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್
"ಜೆಡಿಎಸ್ ಪಕ್ಷವೇ ಅಲ್ಲ, ಅದಕ್ಕೆ ಶಕ್ತಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ಸಿಗಿಂತ ನಮ್ಮ ಪಕ್ಷದ ಶಕ್ತಿ ಏನೆಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ" ಎಂದು ತಿಳಿಸಿದರು.
ಮೈಸೂರು ಮೇಯರ್ ಚುನಾವಣೆ: ದಳಪತಿಗಳೇ ಕಿಂಗ್ ಮೇಕರ್!
"ಜೆಡಿಎಸ್ ಬಗ್ಗೆ ದ್ವೇಷದ ಮನೋಭಾವ ಹೊಂದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಿಗೆ ನಮ್ಮ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸಲೇಬೇಕಿದೆ. ಮೂರು ಪಕ್ಷಕ್ಕೂ ಸ್ವಂತ ಶಕ್ತಿ ಇಲ್ಲ, ಅವರು ಅವರ ಶಕ್ತಿ ತೋರಿಸಲು ಮುಂದಾಗಿದ್ದಾರೆ, ನಾವು ನಮ್ಮ ಶಕ್ತಿ ಮೇಲೆ ಈ ನಿರ್ಧಾರಕ್ಕೆ ಮಂದಾಗಿದ್ದೇವೆ" ಎಂದರು.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್
"ಕಾಂಗ್ರೆಸ್ ನಾಯಕರು ಮಾತನಾಡಲಿಲ್ಲ ಎಂಬುದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಪದೇ ಪದೇ ನಮ್ಮನ್ನು ಕೆಣಕುವ, ಅಗೌರವ ತೋರುವ ಹೇಳಿಕೆ ವಿರುದ್ಧ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಡಿಕೆಶಿ ಅವರ ಕೈಯನ್ನು ಸಹ ಸಿದ್ದರಾಮಯ್ಯ ಕಟ್ಟಿ ಹಾಕಿದ್ದಾರೆ. ಯಾರಿಗೂ ಪಾಠ ಕಲಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಸ್ಪಷ್ಟಪಡಿಸಿದರು.
"ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕವನ್ನು ಅತ್ಯಂತ ಲಘುವಾಗಿ ಪರಿಗಣಿಸಿದ್ದಾರೆ. ರಾಜ್ಯದ ಯಾವ ಸಮಸ್ಯೆಗಳಿಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ನಮ್ಮ ರಾಜ್ಯದ ನೆಲ-ಜಲದ ವಿಷಯದಲ್ಲಿ ಪಕ್ಷದ ತೀರ್ಮಾನ ಏನಿದೆ ಅದರ ಹಿನ್ನೆಲೆಯಲ್ಲಿ ಎರಡು ಪಕ್ಷದ ಮೈತ್ರಿ ಮಾತುಕತೆಯಿಂದ ಹಿಂದೆ ಸರಿದಿದ್ದೇವೆ" ಎಂದು ಕುಮಾರಸ್ವಾಮಿ ಹೇಳಿದರು.
"ಮುಂದಿನ ದಿನಗಳಲ್ಲಿ ರಾಜ್ಯದ 224 ಕ್ಷೇತ್ರದ ಜನರ ವಿಶ್ವಾಸ ಪಡೆದು, ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ಸ್ವತಂತ್ರ ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ತುಂಬಲು ಈ ತೀರ್ಮಾನ ಮಾಡಿದ್ದೇವೆ. ಈ ಚುನಾವಣೆಯಲ್ಲಿ ಸಹ ವಿರೋಧ ಪಕ್ಷದಲ್ಲಿ ಕೂತರೂ ಪರವಾಗಿಲ್ಲ, ಎರಡು ಪಕ್ಷದಿಂದ ದೂರವಿರುವಂತೆ ದೇವೇಗೌಡರು ಹೇಳಿದ್ದಾರೆ. ಎರಡೂ ಪಕ್ಷಕ್ಕೆ ಈ ಚುನಾವಣೆಯಿಂದಲೇ ಸಂದೇಶ ಹೋಗಲಿ" ಎಂದರು.
"ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಗಿದ ಅಧ್ಯಾಯವಾಗಿದೆ. ಸ್ವತಂತ್ರವಾಗಿ ಸ್ಪರ್ಧಿಸಲು ಜೆಡಿಎಸ್ ತೀರ್ಮಾನಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ದೂರ ಸರಿಯಲು ದೇವೇಗೌಡರು ಸಂದೇಶ ನೀಡಿದ್ದಾರೆ. ಹೀಗಾಗಿ ಎರಡೂ ಪಕ್ಷದಿಂದ ದೂರ ಇರುತ್ತೇವೆ" ಎಂದು ಕುಮಾರಸ್ವಾಮಿ ಘೋಷಿಸಿದರು.