ಡಿಕೆಶಿ,ಎಚ್ಡಿಕೆ ಕೊನೇ ಕ್ಷಣದ ಆಟಕ್ಕೆ ಬಿಜೆಪಿ ಮತ್ತು ಸಿದ್ದರಾಮಯ್ಯ ಬೇಸ್ತು!
ಮೈಸೂರು, ಫೆ 25: ಇನ್ನೇನು ಮೇಯರ್ ಆಗುವುದು ಪಕ್ಕಾ ಎಂದು ಭಾವಿಸಿದ್ದ ಅಭ್ಯರ್ಥಿಗೆ ನಿರಾಸೆ, ಯಾವುದೇ ನಿರೀಕ್ಷೆ ಇಟ್ಟುಕೊಳ್ಳದ ಅಭ್ಯರ್ಥಿಗೆ ಜಾಕ್ ಪಾಟ್. ಇದು, ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನಡೆದ ರಾಜಕೀಯ ಮೇಲಾಟದ ಪರಾಕಾಷ್ಥೆ.
ಜೆಡಿಎಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಇತ್ತೀಚಿನ ಟಾರ್ಗೆಟ್ ಅಂದರೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಆದರೆ, ಕೊನೆಯ ಕ್ಷಣದ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಬಿಜೆಪಿ ತಮ್ಮ ವಿರೋಧಿಗಳ ಮರ್ಮವನ್ನು ಅರಿಯದೇ ಹೋದರು.
ತನ್ವೀರ್ ಸೇಠ್ ಮಾಸ್ಟರ್ ಪ್ಲಾನ್: ಪಾಲಿಕೆಯಲ್ಲಿ ಅರಳುವ ಮೊದಲೇ ಮುದುಡಿದ 'ಕಮಲ'
ಇಲ್ಲಿ ಜೆಡಿಎಸ್ ಅಭ್ಯರ್ಥಿ ಮೇಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉಪಮೇಯರ್ ಆದರೂ, ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರು ಹೂಡಿದ ರಾಜಕೀಯ ದಾಳ ಪ್ರಮುಖವಾಗಿ ಸಿದ್ದರಾಮಯ್ಯನವರನ್ನು ಬೆಚ್ಚಿಬೀಳಿಸಿದೆ.
"ಹುಲಿ ಅಂತ ಅಬ್ಬರಿಸುತ್ತಿದ್ದ ಸಿದ್ದರಾಮಯ್ಯರನ್ನು ಬೋನಿಗೆ ಹಾಕಿದ ಕುಮಾರಸ್ವಾಮಿ''
ಒಂದು ರಾತ್ರಿಯ ಹಿಂದೆ ಬಿಜೆಪಿ ಜೊತೆ ಹೋಗುವ ಮುನ್ಸೂಚನೆಯನ್ನು ನೀಡುತ್ತಲೇ ಇದ್ದ ಜೆಡಿಎಸ್ ಮುಖಂಡರು, ಬೆಳಗ್ಗೆ ಎದ್ದಾಗ ಬದಲಾಗಿದ್ದರು. ಮುಂದೆ ನಡೆದೆದ್ದೆಲ್ಲಾ ಜೆಡಿಎಸ್ ವರಿಷ್ಠ ದೇವೇಗೌಡ್ರು ಮೊದಲೇ ಹೂಡಿದ್ದ ರಣತಂತ್ರ.
ಸಿದ್ದರಾಮಯ್ಯನವರಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗುವುದು ಇಷ್ಟ ಇರಲಿಲ್ಲ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗುವುದು ಇಷ್ಟ ಇರಲಿಲ್ಲ. ಹಾಗಾಗಿ, ಕಾಂಗ್ರೆಸ್ ಪಕ್ಷ ಮೇಯರ್ ಮತ್ತು ಉಪಮೇಯರ್ ಹುದ್ದೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರು ನಾಮಪತ್ರವನ್ನೂ ಸಲ್ಲಿಸಿಯಾಗಿತ್ತು. ಆದರೆ, ಡಿಕೆಶಿ ಮತ್ತು ಎಚ್ಡಿಕೆ ನಡುವೆ ನಡೆದ ದೂರವಾಣಿ ಸಂಭಾಷಣೆ ಮೈಸೂರು ಪಾಲಿಕೆ ಚುನಾವಣೆಯ ದಿಕ್ಕನ್ನೇ ಬದಲಾಯಿಸಿತು.
ಕುಮಾರಸ್ವಾಮಿಯವರು ಮೈಸೂರು ಹೊರವಲಯದ ರೆಸಾರ್ಟಿನಲ್ಲಿ
ಚುನಾವಣೆ ನಡೆಯುವ ಒಂದು ದಿನದ ಮುನ್ನ ಕುಮಾರಸ್ವಾಮಿಯವರು ಮೈಸೂರು ಹೊರವಲಯದ ರೆಸಾರ್ಟಿನಲ್ಲಿ ತಂಗಿದ್ದರು. ಜೆಡಿಎಸ್ ಮುಖಂಡರನ್ನೂ ಭೇಟಿಯಾಗಿದ್ದರು. ಇತ್ತ ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಅವರು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರನ್ನು ಭೇಟಿಯಾದರು. ಇನ್ನೊಂದೆಡೆ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಕುಮಾರಸ್ವಾಮಿಯವರನ್ನು ಭೇಟಿಯಾದರು.
ಮೈಸೂರು ಪಾಲಿಕೆ ಚುನಾವಣೆ
ಮೈಸೂರು ಪಾಲಿಕೆ ಚುನಾವಣೆಯಲ್ಲಿ ನನ್ನದೇನೂ ಇಲ್ಲ, ಎಲ್ಲಾ ಸ್ಥಳೀಯ ಮುಖಂಡರದ್ದು ಎಂದು ಕುಮಾರಸ್ವಾಮಿ ಹೇಳಿದ್ದರೂ, ಎರಡು ಪಕ್ಷಗಳ ನಡುವೆ ಮೈತ್ರಿಯಾಗಿದ್ದು ಕುಮಾರಸ್ವಾಮಿಯವರು ಡಿ.ಕೆ.ಶಿವಕುಮಾರ್ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ನಂತರ. ಇಲ್ಲಿ, ಈ ಎರಡೂ ಮುಖಂಡರೂ ಒಂದು ಸ್ಪಷ್ಟವಾದ ಉದ್ದೇಶವನ್ನು ಇಟ್ಟುಕೊಂಡೇ ಮೈತ್ರಿ ಮಾಡಿಕೊಂಡಿರುವುದು ಗೌಪ್ಯವಾಗಿ ಉಳಿದಿರಲಿಲ್ಲ.
ಮೇಯರ್ ಸ್ಥಾನ
ಒಂದು ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನವನ್ನು ಗಿಟ್ಟಿಸಿಕೊಂಡರೆ, ತವರೂರಿನಲ್ಲೇ ಸಿದ್ದರಾಮಯ್ಯನವರಿಗೆ ಹಿನ್ನಡೆ ತರುವುದು, ಇನ್ನೊಂದು, ಬಿಜೆಪಿ ಜೊತೆ ಕೈಜೋಡಿಸಿದರೆ ಅಲ್ಪಸಂಖ್ಯಾತರು ದೂರವಾಗಬಹುದು ಎನ್ನುವ ಮಾತಿನಿಂದ ಬಚಾವ್ ಆಗುವುದು ಕುಮಾರಸ್ವಾಮಿಯವರ ಉದ್ದೇಶ.
ಕರ್ನಾಟಕ ಕಾಂಗ್ರೆಸ್ ನಲ್ಲಿ ಮೇಲುಗೈ
ಇನ್ನೊಂದು ಕಡೆ, ಕರ್ನಾಟಕ ಕಾಂಗ್ರೆಸ್ ನಲ್ಲಿ ಮೇಲುಗೈ ಸಾಧಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಈ ಚುನಾವಣೆ ಉಪಯೋಗವಾಗುವ ಸಾಧ್ಯತೆಯಿದೆ. ಯಾಕೆಂದರೆ, ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಂಡು ಬರುತ್ತಿದ್ದರು ಮತ್ತು ಅದು ನಡೆಯದೇ ಹೋಯಿತು.