ಮೈಸೂರು ಮೇಯರ್ ಚುನಾವಣೆ: ದೋಸ್ತಿಗೆ 'ಕೈ' ನಾಯಕರ ಭಿನ್ನರಾಗ!
ಮೈಸೂರು, ಫೆಬ್ರವರಿ 26: ಭಾರೀ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮೂಲಕ ಉಪಮೇಯರ್ ಸ್ಥಾನಕ್ಕೇರಿರುವ ಕಾಂಗ್ರೆಸ್ನಲ್ಲಿ ಇದೀಗ ಅಸಮಾಧಾನ ಭುಗಿಲೆದ್ದಿದೆ.
ಪಾಲಿಕೆ ಆಡಳಿತದಿಂದ ಬಿಜೆಪಿಯನ್ನು ದೂರವಿಡುವ ಲೆಕ್ಕಾಚಾರದೊಂದಿಗೆ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ತೀರ್ಮಾನ ತೆಗೆದುಕೊಂಡ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಆ ಮೂಲಕ ಪಾಲಿಕೆ ಆಡಳಿತದಲ್ಲಿ ಈ ಹಿಂದಿನ ಒಪ್ಪಂದದಂತೆ ದೋಸ್ತಿ ಮುಂದುವರಿಯುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದರು.
ಮೈಸೂರು ಮೇಯರ್ ಚುನಾವಣೆ; ಬಿಜೆಪಿಯ ಸುನಂದಾ ಪಾಲನೇತ್ರ ರಾಜೀನಾಮೆ?
ಆದರೆ, ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಸ್ಥಳೀಯ ಕಾಂಗ್ರೆಸ್ ನಾಯಕರ ನಿರ್ಧಾರ, ಇದೀಗ ರಾಜ್ಯ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಪೋಟಕ್ಕೆ ಕಾರಣವಾಗಿದೆ. ಈ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, "ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ಕಾರಣದಿಂದ ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟಾಗಿದೆ. ಒಂದು ಉಪಮೇಯರ್ ಸ್ಥಾನಕ್ಕಾಗಿ ನಮ್ಮ ನಾಯಕನಿಗೆ ಮುಜುಗರ ಉಂಟು ಮಾಡಬಾರದಿತ್ತು" ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಈ ಕುರಿತು ಮೈಸೂರು ಭಾಗದ ನಾಯಕರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಮೈಸೂರು ಪಾಲಿಕೆ ನೂತನ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ ಆಯ್ಕೆ; ಬಿಜೆಪಿಗೆ ಮುಖಭಂಗ
ಸ್ಥಳೀಯರಿಗೆ ಕೆಪಿಸಿಸಿ ನೋಟಿಸ್; ಈ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಮಾತು ಮೀರಿದವರಿಗೆ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಪ್ರಮುಖವಾಗಿ ಶಾಸಕ ತನ್ವೀರ್ ಸೇಠ್ ಸೇರಿದಂತೆ ಚುನಾವಣೆ ಜವಾಬ್ದಾರಿ ಹೊತ್ತ ಎಲ್ಲಾ ನಾಯಕರಿಗೂ ಕೆಪಿಸಿಸಿ ವತಿಯಿಂದ ನೋಟೀಸ್ ನೀಡುವ ಸಾಧ್ಯತೆ ಇದೆ.
ಇಂದು ಪ್ರತಿಭಟನೆ; ಮತ್ತೊಂದೆಡೆ, ಪಾಲಿಕೆಯಲ್ಲಿ ನಡೆದ ಮೈತ್ರಿ ಬಗ್ಗೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿರುದ್ಧ ಶಾಸಕ ತನ್ವೀರ್ ಸೇಠ್ ಬೆಂಬಲಿಗರು ಕಿಡಿಕಾರಿದ್ದಾರೆ.
ಮೈಸೂರು ಮೇಯರ್ ಚುನಾವಣೆ; ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲ?
ತನ್ವೀರ್ ಸೇಠ್ ಅವರ ತೀರ್ಮಾನವನ್ನು ಸಹಿಸಲಾಗದೆ ರಮೇಶ್ ಕುಮಾರ್ ಅವರು, ತನ್ವೀರ್ ಸೇಠ್ ಅವರಿಗೆ ನೋಟಿಸ್ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಖಂಡಿಸಿ, ಇಂದು ಪ್ರತಿಭಟನೆ ನಡೆಸಲು ಸಹ ಮುಂದಾಗಿದ್ದಾರೆ.
ಆದರೆ, ಮೈತ್ರಿ ವಿಚಾರದಲ್ಲಿ ತಾವು ತೆಗೆದುಕೊಂಡ ನಿರ್ಧಾರದ ಬಗ್ಗೆ ವಿಶ್ವಾಸ ಹೊಂದಿರುವ ಶಾಸಕ ತನ್ವೀರ್ ಸೇಠ್, ಪಕ್ಷ ತಮಗೆ ನೀಡಿದ ಜವಾಬ್ದಾರಿಯಂತೆ ಸ್ಥಳೀಯವಾಗಿ ಅಗತ್ಯವಿದ್ದ ರೀತಿಯಲ್ಲಿ ಸರಿಯಾದ ನಿರ್ಧಾರ ಕೈಗೊಂಡಿದ್ದೇನೆ, ಈ ಸಂಬಂಧ ಹೈಕಮಾಂಡ್ಗೆ ಸ್ಪಷ್ಟನೆ ನೀಡಲು ಸಿದ್ಧವಿರುವುದಾಗಿ ಈಗಾಗಲೇ ತಿಳಿಸಿದ್ದಾರೆ.
ಒಟ್ಟಾರೆ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್, ನಿರೀಕ್ಷೆಯಂತೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಯಶಸ್ವಿಯಾಗಿದೆ. ಆದರೆ ಜೆಡಿಎಸ್ ಜೊತೆಗೆ ದೋಸ್ತಿ ಮಾಡಿಕೊಂಡ ನಂತರದಲ್ಲಿ ಕೈ ಪಾಳಯದಲ್ಲಿ ಉದ್ಭವಿಸಿರುವ ಅಸಮಾಧಾನಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಲಿದೆ?.