ಪ್ರತಾಪ್ ಸಿಂಹ ಹೇಳಿಕೆ ಸತ್ಯಕ್ಕೆ ದೂರ: ಮೈಸೂರು ಮೇಯರ್
ಮೈಸೂರು, ಜೂನ್ 15: ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿರುವಂತೆ ಮಹಾನಗರ ಪಾಲಿಕೆಯಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಯಾವುದೇ ಮಾಫಿಯಾ ನಡೆದಿಲ್ಲ. ಎಲ್ಲೋ ನಿಂತು ಮಾತನಾಡುವ ಬದಲು ಅವರು ಕೌನ್ಸಿಲ್ ಸಭೆಗೆ ಹಾಜರಾಗಿ ವಾಸ್ತವ ಸಂಗತಿ ಅರಿಯಬೇಕು ಎಂದು ಮೈಸೂರು ಮಹಾಪೌರರಾದ ಪುಷ್ಪಲತಾ ಜಗನ್ನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯಲ್ಲಿ ಹಣಕಾಸು ಯೋಜನೆ ಅನುದಾನದ ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ನಡೆದಿಲ್ಲ .65 ಸದಸ್ಯರಿಗೂ ವಾರ್ಡ್ ಅಭಿವೃದ್ಧಿಗೆ ತಲಾ 75 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗಿದೆ. ಅದರಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ವಾರ್ಡ್ ಗಳಿಗೆ ಸ್ವಲ್ಪ ಮಟ್ಟಿಗಿನ ಹೆಚ್ಚು ಅನುದಾನ ನೀಡಿದೆ ಎಂದರು.
ಅನುದಾನದ ಹಣದಲ್ಲಿ ಮೋಸವಾಗುತ್ತಿದೆ; ಪ್ರತಾಪ್ ಸಿಂಹ
ಸೂಕ್ತ ಮಾಹಿತಿ ಪಡೆದುಕೊಳ್ಳದೇ ಪ್ರತಾಪ್ ಸಿಂಹ ಅವರು, ಪಾಲಿಕೆಯ ಅನುದಾನದಲ್ಲಿ ಮಾಫಿಯಾ ನಡೆದಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ವಾಸ್ತವವೆಂದರೆ, ಅನುದಾನ ಹಂಚಿಕೆಯಲ್ಲಿ ಬಿಜೆಪಿಯ ಕಾರ್ಪೊರೇಟರ್ ಗಳಿಗೆ ಹೆಚ್ಚಿನ ಅನುದಾನ ಹೋಗಿದೆ. ಈ ಕುರಿತು ಸಂಸದರು ದಾಖಲಾತಿ ಪರಿಶೀಲನೆ ನಡೆಸಲಿ ಎಂದು ತಿಳಿಸಿದರು.
ತಪ್ಪು ಮಾಹಿತಿಯಿಂದಾಗಿ ಸಂಸದ ಪ್ರತಾಪ್ ಸಿಂಹ ಅವರು ನಗರ ಪಾಲಿಕೆ ವಿರುದ್ಧ ಆರೋಪಿಸಿರಬಹುದು. ಅವರೂ ಕೌನ್ಸಿಲ್ ಸದಸ್ಯರಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿ ಪ್ರಶ್ನಿಸುವ ಅಧಿಕಾರ ಅವರಿಗಿದೆ. ಆದರೆ ಈವರೆಗಿನ ಏಳರಲ್ಲಿ ಒಂದೇ ಒಂದು ಕೌನ್ಸಿಲ್ ಸಭೆಯಲ್ಲೂ ಪಾಲ್ಗೊಂಡಿಲ್ಲ. ಹೀಗೆ ಸಮರ್ಪಕ ಮಾಹಿತಿಯಿಲ್ಲದೆ ಪಾಲಿಕೆ ವಿರುದ್ಧ ಆರೋಪಿಸುವುದು ಉಚಿತವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವಧಿಯಲ್ಲೇ ಹೆಚ್ಚು ಕನ್ನಡ ಶಾಲೆಗಳು ಮುಚ್ಚಿರುವುದು: ಸಿಂಹ
ಉಪ ಮೇಯರ್ ಶಫಿ ಅಹಮದ್ ಮಾತನಾಡಿ, ವಿವಿಧ ಕಾಮಗಾರಿಗಳಿಗೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ಸರ್ಕಾರವೇ ನಿಗದಿಪಡಿಸಿರುತ್ತದೆ. ಇದರಲ್ಲಿ ಪಾಲಿಕೆಯ ಪಾತ್ರವಿರುವುದಿಲ್ಲ. ಪಾಲಿಕೆಯ ಅನುದಾನ ಹಂಚಿಕೆ ಕುರಿತು ಸಂಸದರು ಆರೋಪ ಮಾಡಿರುವುದು ಸರಿಯಲ್ಲ. ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.