ನಂಜನಗೂಡು ಕೋವಿಡ್ ಕೇಂದ್ರದಲ್ಲಿ ಸಾಮಾಜಿಕ ಅಂತರ ಮಾಯ!
ಮೈಸೂರು, ಮೇ 22: ಈಗಾಗಲೇ ಶೀಘ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ.
ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಮತ್ತು ಸಾಮಾಜಿಕ ಅಂತರ ಕಾಪಾಡುವ ಕುರಿತಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದರೂ, ಇದ್ಯಾವುದು ಕೂಡ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಪಾಲನೆಯಾಗದಿರುವುದು ಮಾತ್ರ ದುರಂತದ ಸಂಗತಿಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡದಿದ್ದರೆ ಬೊಬ್ಬೆ ಹೊಡೆಯುವ ಅಧಿಕಾರಿಗಳು, ಕೋವಿಡ್ ಪರೀಕ್ಷಾ ಕೇಂದ್ರದಲ್ಲಿಯೇ ಜನ ಜಾತ್ರೆ ಸೇರಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದರೂ ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ, ಇದು ಕೊರೊನಾ ಮಹಾಮಾರಿ ಇನ್ನಷ್ಟು ಹರಡಲು ರಹದಾರಿ ಮಾಡಿಕೊಟ್ಟಂತಾಗಿದೆ.
ಲಾಕ್ಡೌನ್ ಮಾಡಿರುವ ಉದ್ದೇಶವೇ ಜನ ಜಾತ್ರೆಯಂತೆ ಸೇರಬಾರದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ. ಆದರೆ ನಂಜನಗೂಡಿನ ಕೋವಿಡ್ ಪರೀಕ್ಷಾ ಕೇಂದ್ರ ಬರೀ ತಪಾಸಣಾ ಕೇಂದ್ರವಾಗದೆ ಕೊರೊನಾ ಸೋಂಕು ಹರಡುವ ಕೇಂದ್ರವಾಗಿದೆ ಎಂದರೂ ತಪ್ಪಾಗಲಾರದು.
ಇಲ್ಲಿ ಪ್ರತಿದಿನ ಸುಮಾರು ೨೦೦ ಮಂದಿಗೆ ಪರೀಕ್ಷೆ ಮಾಡಲಾಗುತ್ತದೆ. ಆದರೆ ಪರೀಕ್ಷೆ ಮಾಡಿಸಬೇಕಾದರೆ ಒಂದು ದಿನ ಮೊದಲೇ ಟೋಕನ್ ಪಡೆದುಕೊಳ್ಳಬೇಕು. ಆದರೆ ಈ ಟೋಕನ್ ಪಡೆಯಲು ಜನ ಮುಗಿಬೀಳುವುದು ಸಾಮಾನ್ಯ ದೃಶ್ಯವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆಯಬೇಕು. ಆದರೆ ಜನ ಟೋಕನ್ಗಾಗಿ ಸಾಮಾಜಿಕ ಅಂತರ ಮರೆತು ಮುಗಿಬೀಳುತ್ತಿದ್ದಾರೆ.
ಇಲ್ಲಿ ಪೊಲೀಸರನ್ನು ನಿಯೋಜಿಸಿ ಜನರನ್ನು ನಿಯಂತ್ರಿಸಬೇಕು. ಆದರೆ ಅದ್ಯಾವುದು ಮಾಡದ ಕಾರಣದಿಂದ ಕೊರೊನಾ ಸೋಂಕಿತರು, ಸೋಂಕಿತರಲ್ಲದವರು ಒಂದೆಡೆ ಜಮಾವಣೆಯಾಗುತ್ತಿದ್ದಾರೆ. ಇದರಿಂದ ಕೊರೊನಾ ವೈರಸ್ಗೆ ಆಹ್ವಾನ ನೀಡಿದಂತಾಗಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಟೋಕನ್ ಪಡೆಯಲು ಸೋಂಕು ಇರುವವರು, ಇಲ್ಲದವರು ಎಲ್ಲರೂ ಬರುತ್ತಾರೆ. ಹೀಗೆ ಬಂದವರು ಸಾಮಾಜಿಕ ಅಂತರ ಕಾಪಾಡದೆ ಒಬ್ಬರ ಮೇಲೆ ಒಬ್ಬರು ಬಿದ್ದು ಟೋಕನ್ ಪಡೆಯುತ್ತಾರೆ. ಬಂದ ತಕ್ಷಣವೇ ಟೋಕನ್ ನೀಡುವುದಿಲ್ಲ. ಹೀಗಾಗಿ ಜನ ಗುಂಪು ಗುಂಪಾಗಿ ಒಂದೇ ಕಡೆ ನಿಲ್ಲುವುದರಿಂದ ಸೋಂಕು ಇಲ್ಲದವರಿಗೂ ಸೋಂಕು ಹರಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸಿದ್ದಾರೆ.