ಮೈಸೂರು ಸಂಪೂರ್ಣ ಲಾಕ್ ಔಟ್; ಏನಿದೆ, ಏನೇನಿಲ್ಲ?
ಮೈಸೂರು, ಮಾರ್ಚ್ 23: ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರು ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಆಗಿದೆ.
ಇಂದಿನಿಂದ ಮಾರ್ಚ್ 31ರವರೆಗೆ ಜಿಲ್ಲೆಯಲ್ಲಿ ಅಗತ್ಯ ವಸ್ತು ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಇತರ ಎಲ್ಲಾ ವಾಣಿಜ್ಯ, ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಲಾಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ವಿಧದ ಅಂಗಡಿ ಮಳಿಗೆಗಳು ಬಂದ್ ಆಗಿವೆ. ಕಾರ್ಖಾನೆಗಳಲ್ಲಿ ಶೇಕಡ 50ರಷ್ಟು ಕಾರ್ಮಿಕರು ಮಾತ್ರ ಕೆಲಸ ಮಾಡಬೇಕು. ಐಟಿ ಬಿಟಿ ಕಂಪನಿಯವರು ಮನೆಯಿಂದಲೇ ಕೆಲಸ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸಾರಿಗೆ ಸಂಪರ್ಕಕ್ಕೆ ನಿರ್ಬಂಧ
ಖಾಸಗಿ ಎಸಿ ವಾಹನಗಳಿಗೆ, ಅಂತರರಾಜ್ಯ ಸಾರಿಗೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆಹಾರ ಪದಾರ್ಥಗಳು, ಪಡಿತರ ಅಂಗಡಿ, ತರಕಾರಿ, ಹಣ್ಣುಗಳು ಮಾರಾಟಕ್ಕೆ ಯಾವುದೇ ತಡೆ ಇಲ್ಲ. ಇವುಗಳ ಸಾಗಾಟಕ್ಕೂ ಯಾವುದೇ ನಿರ್ಬಂಧ ಇಲ್ಲ. ಸರ್ಕಾರಿ ಕಚೇರಿಗಳು, ಜಿಲ್ಲಾ ಪಂಚಾಯತಿ, ಅಂಚೆ ಕಚೇರಿ, ವಿದ್ಯುತ್ ಇಲಾಖೆ ಮಹಾನಗರಪಾಲಿಕೆ, ನೀರು ಸರಬರಾಜು ಕೇಂದ್ರ, ಬ್ಯಾಂಕ್, ಎಟಿಎಂ, ಔಷಧಿ ವೈದ್ಯಕೀಯ ಸಲಕರಣೆ, ಕೃಷಿಗೆ ಸಂಬಂಧಿಸಿದ ಚಟುವಟಿಕೆ, ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಸಂಬಂಧಿಸಿದಂತೆ ವ್ಯವಸ್ಥೆಗಳು ಲಭ್ಯವಿದೆ.
Lockdown ಸಂದರ್ಭದಲ್ಲಿ ಏನೇನು Open ಇರುತ್ತೆ?
ಇಂದೂ ಜನ ಸಂಚಾರ ಇಲ್ಲ
ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದೂ ಜನ ಸಂಚಾರ ಬಂದ್ ಆಗಿದೆ. ನಗರದ ಪ್ರಮುಖ ಹೋಟೆಲ್ ಗಳು ಬಂದ್ ಆಗಿದ್ದು, ಪಾರ್ಸಲ್ ವ್ಯವಸ್ಥೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಹೋಟೆಲ್ ನಲ್ಲಿ ಕುಳಿತು ಆಹಾರ ಸೇವನೆಗೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿದೆ.
ಪಾರ್ಸಲ್ ಊಟಕ್ಕೆ ಮಾತ್ರ ಅವಕಾಶ
ಬಳ್ಳಾಲ್ ವೃತ್ತದಲ್ಲಿರುವ ಹೋಟೆಲ್ ಅಮೃತ್ ವೆಜ್ ನಲ್ಲಿ ಹೋಟೆಲ್ ಎದುರಿಗೆ ಫಲಕ ಹಾಕಲಾಗಿದ್ದು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೋಟೆಲ್ ನಲ್ಲಿ ಕುಳಿತು ಊಟ ಮಾಡುವ ಸೌಲಭ್ಯವನ್ನು ಸರ್ಕಾರ ನಿರ್ಬಂಧಿಸಿದೆ. ಹಾಗಾಗಿ ಪಾರ್ಸಲ್ ಮಾತ್ರ ಲಭ್ಯವಿದ್ದು ಪಾರ್ಸೆಲ್ ಪಡೆಯುವಾಗ ಒಬ್ಬರಿಂದ ಒಬ್ಬರಿಗೆ 6 ಅಡಿ ದೂರ ನಿಂತು ಪಡೆಯುವ ಮೂಲಕ ಕೊರೊನಾ ವಿರುದ್ಧ ಹೋರಾಡೋಣ ಎಂದು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ನಾಟಕದ 9 ಜಿಲ್ಲೆಗಳು ಸೇರಿ ಭಾರತದ 75 ಜಿಲ್ಲೆಗಳ ಲಾಕ್!
ಸಿಟಿ ಬಸ್ ಸಂಚಾರ ಆರಂಭ
ಮೈಸೂರು ಸಿಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಬಸ್ ಸಂಚಾರ ಆರಂಭವಾಗಿದ್ದು, ಬೆಳಗ್ಗೆಯಿಂದಲೂ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ದಿಢೀರ್ ಆಗಮಿಸಿದ ಬಸ್ಗಳು ಸೇವೆಗೆ ಸಜ್ಜುಗೊಂಡವು. ಮೈಸೂರು ನಗರದ ವಿವಿಧೆಡೆಗೆ ಸಂಚರಿಸಲು ನಗರ ಸಾರಿಗೆ ಬಸ್ಗಳು ಸಜ್ಜಾಗಿವೆ. ಬಸ್ ಸಂಚಾರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಬಸ್ಸುಗಳು ಸಂಚರಿಸಲಿದ್ದು, ಪ್ರಯಾಣಿಕರಿಲ್ಲದಿದ್ದಲ್ಲಿ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ.