ಚಾಮುಂಡಿ ಬೆಟ್ಟದಲ್ಲಿ ಸಂತೆ ಮಾಡಬೇಕಾ? ಭೈರಪ್ಪ ಪ್ರಶ್ನೆ
ಮೈಸೂರು, ಮೇ 30: ಮೈಸೂರಿನ ಚಾಮುಂಡಿ ಬೆಟ್ಟ ಉಳಿವಿಗೆ ಕನ್ನಡಿಗರೇ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಮಾಲ್ ನಿರ್ಮಾಣ ಮಾಡಲು ಹೊರಟಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಪ್ರತಿಭಟನೆಗೆ ಇಳಿದಿದ್ದಾರೆ.
ಕೋಟ್ಯಂತರ ರು. ವೆಚ್ಚಮಾಡಿ ಚಾಮುಂಡಿ ಬೆಟ್ಟ ಅಭಿವೃದ್ಧಿಗೊಳಿಸಬೇಕಾದ ಅನಿವಾರ್ಯತೆ ಏನಿದೆ? ಅಭಿವೃದ್ಧಿ ಕಾರ್ಯಗಳಿಗಾಗಿ ಬೆಟ್ಟಕ್ಕೆ ಡೈನಮೈಟ್ ಇಟ್ಟು ಒಡೆದು ಪರಿಸರವನ್ನು ನಾಶಮಾಡಬೇಕಾ? ಬೆಟ್ಟದಲ್ಲಿ ಕಟ್ಟಡಗಳನ್ನು ಕಟ್ಟಿ ಸಂತೆ ಮಾಡಬೇಕಾ? ಎಂದು ಡಾ. ಎಸ್.ಎಲ್. ಭೈರಪ್ಪ ಪ್ರಶ್ನೆ ಮಾಡಿದ್ದಾರೆ.[ಮೈಸೂರು ಅರಮನೆ ಫೋಟೋಶೂಟ್ ವಿವಾದ : ಏನು, ಎತ್ತ?]
ಹಿರಿಯ ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಮಾತನಾಡಿ, ಮೈಸೂರಿಗೆ ಕಳಸ ಪ್ರಾಯದಂತಿರುವ ಚಾಮುಂಡಿ ಬೆಟ್ಟವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ, ಸಾವಿರಾರು ವರ್ಷಗಳಿಂದ ಪ್ರವಾಸಿಗರನ್ನು ಆರ್ಕಷಿಸುತ್ತಾ ಯಾಂತ್ರಿಕ ಸ್ಥಳದ ಮಹತ್ವವನ್ನು ಹಾಳುಮಾಡಲು ಸರ್ಕಾರ ಮುಂದಾಗಿದೆ.
ತಿರುಪತಿ ಮಾದರಿಯಲ್ಲಿ ಚಾಮುಂಡಿ ಬೆಟ್ಟವನ್ನು ಅಭಿವೃದ್ಧಿ ಪಡಿಸುವ ಅನಿವಾರ್ಯತೆ ಏನಿದೆ? ತಿರುಪತಿ ತಿರುಪತಿಯಾಗಿಯೇ ಇರಲಿ. ಚಾಮುಂಡಿ ಬೆಟ್ಟ ಬೆಟ್ಟವಾಗಿಯೇ ಇರಲಿ. ಅವುಗಳನ್ನು ಒಟ್ಟುಗೂಡಿಸುವ ಹಠ ರಾಜ್ಯ ಸರ್ಕಾರಕ್ಕೆ ಬೇಡ ಎಂದು ಹೇಳಿದರು.[ಚಾಮುಂಡಿ ಬೆಟ್ಟ ಉಳಿಸಲು ಹೋರಾಟದ ಹಾದಿ]
ಭಾನುವಾರ ಹಮ್ಮಿಕೊಂಡಿದ್ದ 'ಚಾಮುಂಡಿ ಬೆಟ್ಟ ಉಳಿಸಿ' ಹೋರಾಟಕ್ಕೆ ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮೋದಾ ದೇವಿ ಒಡೆಯರ್ ಸಹ ಬೆಂಬಲ ಸೂಚಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಇದರಂತೆ ಬೆಟ್ಟದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಬಹು ಹಂತದ ಉದ್ಯಾನ ಕಟ್ಟಡಗಳು, ವಿಐಪಿ ಅತಿಥಿ ಗೃಹ, ವಿಶ್ರಾಂತಿ ನಿಲಯ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಆರಂಭದಿಂದಲೇ ನಾಗರಿಕರಿಂದ ವಿರೋಧ ವ್ಯಕ್ತವಾಗಿತ್ತು.[ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ]
ಅರಿವು ಸಂಸ್ಥೆ ನಾಲ್ಕೈದು ದಿನಗಳಿಂದ ವಿಭಿನ್ನ ರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದರೆ, ಲೆಟ್ಸ್ ಡೂ ಇಟ್ ಮೈಸೂರು ಸೇರಿದಂತೆ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರ ಈ ಕೂಡಲೇ ತನ್ನ ಅಭಿವೃದ್ಧಿ ಕಾರ್ಯಗಳನ್ನು ಹಿಂಪಡೆಯುವ ಮೂಲಕ 'ಚಾಮುಂಡಿ ಬೆಟ್ಟವನ್ನು ಉಳಿಸಬೇಕು' ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದೆ. ಗ್ರಾಹಕ ಪರಿಷತ್ ನ ಡಾ.ಭಾಮಿಶೆಣೈ, ಪ್ರಶಾಂತ್ ಹೋರಾಟದಲ್ಲಿ ಭಾಗವಹಿಸಿದ್ದರು.