ಹುಣಸೂರು: ಜಮೀನು ನೋಡಲು ತೆರಳಿದ್ದವರ ಮೇಲೆ ಹಲ್ಲೆ
ಹುಣಸೂರು, ಜುಲೈ, 02: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಮೂವರು ಹಲ್ಲೆ ನಡೆಸಿದ ಘಟನೆ ತಾಲೂಕಿನ ಹೊದಕೆಕಟ್ಟೆಕಾವಲ್ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಮೈಸೂರು ಹೆಬ್ಬಾಳು ನಿವಾಸಿ ಪ್ರೇಮ್ ಕುಮಾರ್ ಎಂಬುವರು ಹಲ್ಲೆಗೊಳಗಾದವರು. ಇವರು ಹುಣಸೂರು ತಾಲೂಕಿನ ಹೊದಕೆಕಟ್ಟೆ ಕಾವಲ್ ನಲ್ಲಿ ಜಮೀನು ಹೊಂದಿದ್ದಾರೆ. ಜಮೀನು ನೋಡಿ ಬರಲೆಂದು ಜೂ. 27ರಂದು ಸಂಜೆ 5ಗಂಟೆ ಸಮಯದಲ್ಲಿ ತೆರಳಿದ್ದ ಸಂದರ್ಭ ಸಮೀಪದ ಜಮೀನಿನ ಬಳಿ ಬಿ.ಎನ್.ಬಾಲಚಂದ್ರ, ಅನಿಲ್ ಜಗಪತ್ ಮತ್ತು ಸುನೀಲ್ ಜಗಪತ್ ಎಂಬುವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾರೆ.[ಹುಣಸೂರಲ್ಲಿ ಮಳೆ ಅವಾಂತರ, ಕೊಚ್ಚಿ ಹೋದ ತಂಬಾಕು ಬೆಳೆ]
ಇಷ್ಟಕ್ಕೆ ಸುಮ್ಮನಾಗದೆ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರೇಮ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಪ್ರೇಮ್ ಕುಮಾರ್ ತಮ್ಮಮೇಲೆ ಹಲ್ಲೆಯಾಗುತ್ತಿರುವುದನ್ನು ಸೆರೆಹಿಡಿಯಲು ಮುಂದಾಗಿದ್ದು ಇದರಿಂದ ಇನ್ನಷ್ಟು ಆಕ್ರೋಶಗೊಂಡ ಆರೋಪಿಗಳು ಹಲ್ಲೆ ಮಾಡಿ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.[ಹುಣಸೂರು ಹೈರಿಗೆ ಕೆರೆಗೆ ಹೈಟೆಕ್ ತಂತ್ರಜ್ಞಾನ, ರೈತರಲ್ಲಿ ಸಂತಸ]
ಹಲ್ಲೆಗೊಳಗಾದ ಪ್ರೇಮ್ ಕುಮಾರ್ ಅವರು ಸಂಜೆ 7.30ರ ವೇಳೆಗೆ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.