ಮೈಸೂರಿನ ಮನಕಲುಕುವ ಘಟನೆ: ಜೀವವಿತ್ತ ತಾಯಿಯಿಂದ ಮರುಜೀವ ಪಡೆದ ಮಗ
ಮೈಸೂರು, ಫೆಬ್ರವರಿ 17: ಜೀವ ಕೊಟ್ಟ ತಾಯಿಯೇ, ಮೃತ್ಯುವಿನ ಸನಿಹದಲ್ಲಿರುವ ಮಗನಿಗೆ ಮರುಜೀವ ಕೊಟ್ಟಿರುವ ಮನಕಲುಕುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಖಾಯಿಲೆಯಿಂದ ವರ್ಷಗಳಿಂದ ನರಳುತ್ತಿರುವ ಮಗನಿಗೆ ಮರುಜೀವ ನೀಡಲು ತನ್ನ ಅಂಗವನ್ನೇ ದಾನ ಮಾಡಲು ತಾಯಿ ತಯಾರಾಗಿ ನಿಂತಿದ್ದಾಳೆ.
ಮೈಸೂರಿನ ದಾಸಪ್ಪನಕೊಪ್ಪಲಿನಲ್ಲಿ 38 ವರ್ಷದ ವಿನಯ್ ಎಂಬಾತ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಮೂರು ವರ್ಷದಿಂದ ಪ್ರತಿನಿತ್ಯ ನರಕ ಅನುಭವಿಸುತ್ತಿದ್ದಾರೆ. ಮಗನ ದಯನೀಯ ಸ್ಥಿತಿ ನೋಡಲಾಗದೆ ತಾಯಿ ಲಕ್ಷ್ಮಮ್ಮ ತನ್ನ ಕಿಡ್ನಿಯನ್ನು ಮಗನಿಗೆ ನೀಡಲು ಸಿದ್ಧಳಾಗಿದ್ದಾಳೆ.
ತೀವ್ರ ಬಡತನದಲ್ಲಿ ಬದುಕು ಸವೆಸುತ್ತಿರುವ ಲಕ್ಷ್ಮಮ್ಮ ಮತ್ತು ಕುಟುಂಬಕ್ಕೆ ಖಾಯಿಲೆ ಎಂಬುದು ಶಾಪವಾಗಿ ಎರಗಿದೆ. ಲಕ್ಷ್ಮಮ್ಮನ ಮಗ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರೆ. ಲಕ್ಷ್ಮಮ್ಮನ ಪತಿ ಸಕ್ಕರೆ ಖಾಯಿಲೆಗೆ ತುತ್ತಾಗಿ ಕಾಲನ್ನೇ ಕಳೆದುಕೊಂಡಿದ್ದಾರೆ.
ವಿನಯ್ ಅವರಿಗೆ ನಿಯಮಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಸರ್ಕಾರಿ ಯೋಜನೆಗಳನ್ನು ಬಳಸಿಕೊಂಡಿದ್ದರೂ ಸಹ ಆಸ್ಪತ್ರೆ ವೆಚ್ಚ ಇವರ ಕುಟುಂಬಕ್ಕೆ ಹೊರೆಯೇ ಆಗಿದೆ.
ಕೊನೆಗೆ ವೈದ್ಯರ ಸಲಹೆಯಂತೆ ಈಗ ತನ್ನ ಕಿಡ್ನಿಯನ್ನೇ ಮಗನಿಗೆ ನೀಡಲು ಲಕ್ಷ್ಮಮ್ಮ ಮುಂದಾಗಿದ್ದಾಳೆ. ಈಗ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸುವ ಮತ್ತೊಂದು ಸವಾಲು ಆಕೆಯ ಎದುರಿಗಿದೆ. ಸರ್ಕಾರದಿಂದ ಏನಾದರೂ ನೆರವು ಸಿಗಬಹುದಾ ಎಂದು ಕಾಯುತ್ತಿದ್ದಾಳೆ.