ಮೈಸೂರು ಪೊಲೀಸರು ನಡೆಸಿದ ಆಪರೇಷನ್ ಸಕ್ಸಸ್: ಕುಖ್ಯಾತ ಮನೆಗಳ್ಳರ ಬಂಧನ
ಮೈಸೂರು, ಫೆಬ್ರವರಿ 25: ಮನೆಗಳ್ಳರ ಪತ್ತೆಗಾಗಿ ಸಾಂಸ್ಕೃತಿಕ ನಗರಿ ಮೈಸೂರು ಪೊಲೀಸರು ನಡೆಸಿದ ಆಪರೇಷನ್ ಸಕ್ಸಸ್ ಆಗಿದೆ. ಖಾಕಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕುಖ್ಯಾತ ಚೋರರು ಬಂಧಿತರಾಗಿದ್ದಾರೆ.
ತಡರಾತ್ರಿ ವೇಳೆ ಮನೆಗೆ ಕನ್ನಹಾಕುತ್ತಿದ್ದ ಖತರ್ನಾಕ್ಗಳು ಕಂಬಿ ಹಿಂದೆ ಬಿದ್ದಿದ್ದಾರೆ. ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಕುಖ್ಯಾತ ಮನೆಗಳ್ಳರನ್ನ ಬಂಧಿಸಿ ಚಿನ್ನಾಭರಣ, ಕಾರು ಮತ್ತು ರಿವಾಲ್ವಾರ್ ವಶಕ್ಕೆ ಪಡೆದಿದ್ದಾರೆ.
ಹೋಟೆಲ್ ನಲ್ಲಿ ವೇಶ್ಯಾವಾಟಿಕೆ: ಓರ್ವ ಯುವತಿಯ ರಕ್ಷಣೆ; ಈರ್ವರ ಬಂಧನ
ದಿಲೀಪ್ ಕುಮಾರ್ (38), ಮಂಜ (35), ರಾಜೇಂದ್ರ (29) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 21,47,500 ಮೌಲ್ಯದ 391 ಗ್ರಾಂ ತೂಕದ ಚಿನ್ನಾಭರಣ, ಒಂದು ಕಾರು ಮತ್ತು ವಿದೇಶಿ ನಿರ್ಮಿತ ರಿವಾಲ್ವರ್ ಜೊತೆ 6 ಸಜೀವ ಗುಂಡುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮ್ಮ ಬಳಿ ಇದ್ದ ರಿವಾಲ್ವರ್ ಮಾರಾಟ ಮಾಡುವ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆರೋಪಿಗಳ ವಿಚಾರಣೆ ಬಳಿಕ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಮೈಸೂರಿನ ಕುವೆಂಪು ನಗರ, ವಿಜಯನಗರ, ಅಶೋಕಪುರಂ, ಬೆಂಗಳೂರಿನ ಬಾಣಸವಾಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸರು ಖತರ್ನಾಕ್ ಕಳ್ಳರ ಬೇಟೆಗಾಗಿ ಬಲೆ ಬೀಸಿದರು. ನಿರಂತರವಾಗಿ ಬ್ಲೂ ಪ್ರಿಂಟ್ ಸಿದ್ಧಪಡಿಸಿ ಚೋರರ ಬಂಧನಕ್ಕೆ ಸಿದ್ಧತೆ ನಡೆಸಿದ್ದರು. ಇದೀಗ ಪೊಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮನೆಗಳ್ಳರು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮತ್ತಷ್ಟು ಸತ್ಯ ಹೊರಬೀಳುವ ಸಾಧ್ಯತೆ ಇದೆ. ಕಾರ್ಯಾಚರಣೆಯಲ್ಲಿ ಡಿಸಿಪಿ ಗೀತಾ ಪ್ರಸನ್ನ ಹಾಗೂ ಕೃಷ್ಣರಾಜ ವಿಭಾಗ ಎಸಿಪಿ ಎಂ. ಎಸ್.ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯ ನಡೆದಿದ್ದು, ಕಾರ್ಯಾಚರಣೆಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಜಿ.ಸಿ.ರಾಜು, ಪಿಎಸ್ಐ ಮಹಾವೀರ್ ಬಿಳಗಿ, ಎಎಸ್ಐ ದೇವಯ್ಯ ಸೇರಿದಂತೆ ಠಾಣಾ ಸಿಬ್ಬಂದಿ ಭಾಗಿಯಾಗಿದ್ದರು.