ಮೈಸೂರಿನಲ್ಲಿ ಆರಂಭಗೊಂಡ ಕೆಎಸ್ಆರ್ಟಿಸಿ ಮತ್ತು ನಗರ ಸಾರಿಗೆ
ಮೈಸೂರು, ಮೇ 19: ಲಾಕ್ ಡೌನ್ ಘೋಷಿಸಿದ 58 ದಿನಗಳ ಬಳಿಕ ಮೈಸೂರು ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿಇಂದಿನಿಂದ ಬಸ್ ಸಂಚಾರ ಆರಂಭಗೊಂಡಿದೆ.
ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಮೈಸೂರಿನಲ್ಲಿಯೂ 90 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೆಂಪು ವಲಯದಲ್ಲಿ ಗುರುತಿಸಿದ್ದರಿಂದ, ಯಾವುದೇ ವಾಹನ ಸಂಚಾರಕ್ಕೆ ಆಸ್ಪದವಿರಲಿಲ್ಲ.
ಮೈಸೂರು ಮಹಾನಗರ ಪಾಲಿಕೆ ಬಜೆಟ್; ಉಚಿತ ವೈಫೈ, ಮಲ್ಟಿಲೆವೆಲ್ ಪಾರ್ಕಿಂಗ್ ಗೆ ಒತ್ತು
ಇದೀಗ ಮೈಸೂರಿನಲ್ಲಿ ಹಳೆಯ 90 ಪಾಸಿಟಿವ್ ವ್ಯಕ್ತಿಗಳೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯ ಸರ್ಕಾರದ ಸೂಚನೆಯಂತೆ ಇಂದಿನಿಂದ ಮೈಸೂರಿನ ಪ್ರಮುಖ ನಗರಗಳಿಗೆ ಹಾಗೂ ಬಡಾವಣೆಗಳಿಗೆ ಕೆಎಸ್ಅರ್ಟಿಸಿ ಮತ್ತು ನಗರ ಬಸ್ ಸೇವೆ ಆರಂಭಗೊಂಡಿದೆ.
ಈ ಕುರಿತು ಮಾತನಾಡಿದ ಮೈಸೂರು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ ನಾಗರಾಜು, ""ಮೈಸೂರಿನಲ್ಲಿಂದು ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು ನಗರದಲ್ಲಿ 68 ಬಸ್ ಗಳು ಸಂಚರಿಸಲಿದೆ. ಪ್ರತಿ ಬಸ್ ನಲ್ಲಿ 30 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅವರು ಇಳಿಯುವ ಸ್ಥಳಗಳಲ್ಲಿಯೇ ಅವರನ್ನು ಇಳಿಸಲಾಗುವುದು'' ಎಂದರು.
ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಬಸ್ ನಿಲ್ದಾಣಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಅವರು ಮಾರ್ಕ್ ಮಾಡಿದ ಜಾಗಗಳಲ್ಲಿಯೇ ನಿಲ್ಲಬೇಕು. ಅವರ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುವುದು. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು, ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದರು.
ಒಂದು ನಗರಕ್ಕೆ ಬಸ್ ಹೋಗಿ ಬಂದ ನಂತರ ಸ್ಯಾನಿಟೈಸರ್ ಮಾಡಲಾಗುವುದಲ್ಲದೇ. ಓರ್ವ ಪ್ರಯಾಣಿಕರು ಇಳಿದಲ್ಲಿ, ಅಕಸ್ಮಾತ್ ಅಲ್ಲಿ ಮತ್ತೋರ್ವ ಪ್ರಯಾಣಿಕ ಬಸ್ ಹತ್ತಲು ಸಿದ್ಧರಿದ್ದಲ್ಲಿ ಅವರನ್ನು ಬಸ್ ನಲ್ಲಿ ಕರೆದೊಯ್ಯುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ""ಬಸ್ ನಲ್ಲಿ ಪ್ರಯಾಣಿಸುವವರಿಗೆ ಸೀಟ್ ಗಳನ್ನು ನಿಗದಿಪಡಿಸಲಾಗಿದೆ. ಸೀಟ್ ಇದ್ದಲ್ಲಿ ಮಾತ್ರ ಅವರನ್ನು ಕರೆದೊಯ್ಯಲಾಗುತ್ತದೆ. ಇಲ್ಲದಿದ್ದಲ್ಲಿ ಇಲ್ಲ'' ಎಂದು ಸ್ಪಷ್ಟಪಡಿಸಿದರು.
ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಮಾತನಾಡಿ, ""ಇಂದು 10 ರಿಂದ 12 ಬಸ್ ಗಳನ್ನು ಬೆಂಗಳೂರು ಸೇರಿದಂತೆ ಇತರೆಡೆಗೆ ಬಿಡಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಗಳನ್ನು ಬಿಡಲಾಗುವುದು. ಇಬ್ಬರು ಕುಳಿತುಕೊಳ್ಳುನ ಸೀಟ್ ನಲ್ಲಿ ಒಬ್ಬರು, ಮೂವರು ಕುಳಿತುಕೊಳ್ಳುವ ಸೀಟ್ ನಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದರು.
ಬಸ್ ಡಿಪೋದಿಂದ ಹೋಗುವ ಮುನ್ನ ಮತ್ತು ಬಸ್ ಸಾಯಂಕಾಲ ಮರಳಿದಾಗ ಬಸ್ ನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುವುದು ಎಂದು ತಿಳಿಸಿದರು.