ಸಹಿಷ್ಣುತೆ ಪಾಠ ಹೇಳುವ ಕಾರ್ನಾಡ್, ಭಗವಾನ್ ಈಗೆಲ್ಲಿ?: ಪ್ರತಾಪ್ ಸಿಂಹ
ಸುಹಾನ್ ಸೈಯ್ಯದ್ ಎಂಬ ಗಾಯಕಿ ಹಿಂದೂ ದೇವರ ಹಾಡನ್ನು ಹಾಡಿದ್ದಕ್ಕೆ ಮುಸ್ಲಿಂ ಮೂಲಭೂತವಾದಿಗಳ ಬೆದರಿಕೆ ಬಂದಿರುವುದನ್ನು ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದಾರೆ. ಬುದ್ಧಿಜೀವಿಗಳು ಈಗೆಲ್ಲಿದ್ದಾರೆ, ಏಕೆ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ
ಮೈಸೂರು, ಮಾರ್ಚ್ 8: ಜೀ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಹಿಂದೂ ದೇವರ ಹಾಡು ಹಾಡಿದರು ಎಂಬ ಕಾರಣಕ್ಕೆ ಸುಹಾನ ಸೈಯ್ಯದ್ ಎಂಬ ಗಾಯಕಿ ಹಾಗೂ ಆಕೆ ಕುಟುಂಬಕ್ಕೆ ಇಸ್ಲಾಂ ಮೂಲಭೂತವಾದಿಗಳಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬುಧವಾರ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಆ ಯುವತಿ ಹಿಂದೂ ದೇವರ ಹಾಡೊಂದನ್ನು ಹಾಡಿದರು ಎಂಬುದನ್ನೇ ಸಹಿಸಿಕೊಳ್ಳಲು ಆಗುತ್ತಿಲ್ಲ. ಇಂಥಹವರಿಂದ ನಾವು ಸಹಿಷ್ಣುತೆ ಹಾಗೂ ಶಾಂತಿಯನ್ನು ಹೇಗೆ ನಿರಿಕ್ಷಿಸಲು ಸಾಧ್ಯ? ಬೇರೆ ಸಮಯದಲ್ಲಿ ಚಿಂತಕರು ಎಂದು ಬಾಯಿ ಬಡಿದುಕೊಳ್ಳುವವರು ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.[ಪ್ರತಾಪ್ ವೃಥಾ ಕಾಲಹರಣ ಮಾಡುತ್ತಿದ್ದಾರೆ : ಬ್ರಿಜೇಶ್ ಕಾಳಪ್ಪ]
ಸಾಹಿತಿಗಳಾದ ಪ್ರೊ.ಕೆ.ಎಸ್.ಭಗವಾನ್, ಜಿ.ಕೆ.ಗೋವಿಂದರಾವ್, ಗಿರೀಶ್ ಕಾರ್ನಾಡ್ ಎಲ್ಲಿ? ಇಂಥವರೇ ಇನ್ನೊಂದಷ್ಟು ಜನ ಇದ್ದಾರೆ. ಅದರೆ ಅವರ ಹೆಸರು ಹೇಳುವಷ್ಟು ಕೂಡ ಯೋಗ್ಯರಲ್ಲ. ಅಂಥ ಯೋಗ್ಯರಲ್ಲದ ವ್ಯಕ್ತಿಗಳು ಈಗ ಸುಮ್ಮನೆ ಏಕೆ ಕುಳಿತಿದ್ದಾರೆ? ಎಂದು ಪ್ರಶ್ನಿಸಿದರು.
ಸುಹಾನ ಒಂದೇ ಒಂದು ಹಾಡಿನಿಂದ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾಳೆ. ಆಕೆಯನ್ನು ವಿರೋಧಿಸುವ ಚಳವಳಿ ಟ್ವಿಟ್ಟರ್, ಫೇಸ್ಬುಕ್ ನಲ್ಲೂ ನಡೆಯುತ್ತಿದೆ. ಅಲ್ಲಿರುವ ಕೆಲವು ಲದ್ದಿಜೀವಿಗಳಿಗೆ ಸಂಗೀತದ ಮಹತ್ವ ಗೊತ್ತಿಲ್ಲ. ಸಂಗೀತದಲ್ಲಿ ಸಾಧನೆ ಮಾಡಿದ ಅನ್ಯ ಸಮುದಾಯದ ವ್ಯಕ್ತಿಗಳನ್ನು ನಾವು ಒಪ್ಪಿ, ಆದರಿಸಿದ್ದೇವೆ. ಆದರೆ ಆಕೆಗೆ ಬಹಿರಂಗ ಬೆದರಿಕೆ ಒಡ್ಡಿ, ವಿರೋಧಿಸುತ್ತಿರುವವರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದರು.[ತಂದೆಯ ತ್ಯಾಗವನ್ನು ದುರ್ಬಳಕೆ ಮಾಡಿಕೊಂಡ ಗುರ್ಮೆಹರ್: ಪ್ರತಾಪ್ ಸಿಂಹ]
ಸುಹಾನರಿಗೆ ನನ್ನ ಬೆಂಬಲ ಇದೆ. ಆಕೆ ಹಾಡು ಹಾಡಿದ್ದನ್ನು ನೋಡಿ ಫೇಸ್ ಬುಕ್ ನಲ್ಲಿ ಷೇರ್ ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ನೀಡಿದರು.