ಇದೀಗ ಕೊಚ್ಚಿ, ಗೋವಾಕ್ಕೂ ಮೈಸೂರಿನಿಂದ ವಿಮಾನಯಾನ ಸೇವೆ
ಮೈಸೂರು, ಜೂನ್ 4: ಕಳೆದ ವಾರವಷ್ಟೇ ಉಡಾನ್ -3 ಯೋಜನೆ ಹಿನ್ನೆಲೆ ಬೆಂಗಳೂರು - ಮೈಸೂರು ವಿಮಾನ ಆರಂಭಗೊಂಡಿತ್ತು. ಅದರಂತೆ ಇದೇ ಯೋಜನೆಯಡಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿ ಹಾಗೂ ಗೋವಾಕ್ಕೆ ಸದ್ಯದಲ್ಲೇ ವಿಮಾನಯಾನ ಸಂಪರ್ಕ ಆರಂಭವಾಗಲಿದೆ. ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆಯು ಕಡಿಮೆ ದರದಲ್ಲಿ ಈ ಸೇವೆ ಒದಗಿಸಲು ಮುಂದಾಗಿದೆ. ಈ ತಿಂಗಳ ಕಡೆ ಅಥವಾ ಜುಲೈ ಆರಂಭದಲ್ಲಿ 72 ಆಸನಗಳ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ಜೂ. 7ರಿಂದ ಮೈಸೂರು -ಬೆಂಗಳೂರು ವಿಮಾನಯಾನಕ್ಕೆ ಗ್ರೀನ್ ಸಿಗ್ನಲ್
ಇದರಿಂದಾಗಿ ಪ್ರವಾಸಿಗಳ ಸ್ವರ್ಗ ಕೇರಳ ಹಾಗೂ ಗೋವಾದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ವಾಯುಯಾನ ಸಂಪರ್ಕ ಏರ್ಪಡಲಿದೆ. ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಜನವರಿಯಲ್ಲಿ ಅನುಮತಿ ನೀಡಿತ್ತು. ಸಂಸದ ಪ್ರತಾಪಸಿಂಹ ಅವರು ವಿವಿಧ ವಿಮಾನಯಾನ ಕಂಪನಿಗಳ ಮುಖ್ಯಸ್ಥರು ಹಾಗೂ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಯೋಜನೆಯಡಿ ಈಗಾಗಲೇ 72 ಆಸನಗಳ ಟ್ರೂಜೆಟ್ ವಿಮಾನ ಚೆನ್ನೈ- ಮೈಸೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಹುತೇಕ ಸೀಟುಗಳು ಭರ್ತಿಯಾಗುತ್ತಿವೆ. ಉಡಾನ್-3 ಯೋಜನೆಯಡಿ ಮೈಸೂರಿನಿಂದ ಬೆಳಗಾವಿ, ಹೈದರಾಬಾದ್ ನಗರಕ್ಕೂ ಸದ್ಯದಲ್ಲೇ ವಿಮಾನಯಾನ ಸೇವೆ ಕಲ್ಪಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.