ಸಾವಿರಾರು ವಿದ್ಯಾರ್ಥಿಗಳ ಕನಸು ನುಚ್ಚುನೂರು: ಮುಕ್ತ ವಿವಿಗೆ ಬೀಗ?
ಮೈಸೂರು, ಅಕ್ಟೋಬರ್ 13: ಕೆಎಸ್ ಒಯು ನ ಸಾವಿರಾರು ವಿದ್ಯಾರ್ಥಿಗಳ ಕನಸು ಕಮರಿದೆ. ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಲವು ಸಮಸ್ಯೆಗಳಿಂದಾಗಿ ಅದಕ್ಕೆ ಬೀಗ ಜಡಿಯಲು ಉನ್ನತ ಮಟ್ಟದ ತನಿಖಾ ತಂಡ ರಚಿಸಿ ಸದ್ಯ ಆದೇಶ ಹೊರಡಿಸಲಾಗಿದೆ.
ಕೆಎಸ್ಒಯುಗೆ ಮರಳಿ ಮಾನ್ಯತೆ ನೀಡುವಂತೆ ರಾಯರೆಡ್ಡಿ ಮನವಿ
ಇದರಿಂದ ನೂರಾರು ಉದ್ಯೋಗಿಗಳು, ಲಕ್ಷಾಂತರ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಬೀಗ ಬೀಲುವ ಲಕ್ಷಣಗಳಿವೆ ಎನ್ನಲಾಗುತ್ತಿದೆ. ಕರಾಮುವಿ ಸಮಸ್ಯೆಗಳ ಕುರಿತು ಅಧ್ಯಯನಕ್ಕೆ ತಂಡ ರಚನೆ ಮಾಡಲಾಗಿದೆ. ಉನ್ನತ ಮಟ್ಟದ ತನಿಖಾ ತಂಡ ರಚಿಸಲಾಗಿದ್ದು, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉನ್ನತ ಶಿಕ್ಷಣ ಸಚಿವರ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಮಾನ್ಯತೆ ಸಿಗುವವರೆಗೆ ಬೋಧಕ, ಬೋಧಕೇತರರ ಹುದ್ದೆಗೆ ಕೊಕ್ಕೆ ಬಿದ್ದಿದೆ. ತಾತ್ಕಾಲಿಕ ನೌಕರರನ್ನು ತೆಗೆಯಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಇದನ್ನೇ ನಂಬಿಕೊಂಡಿರುವ ನೂರಾರು ಕುಟುಂಬಗಳು ಬೀದಿಗೆ ಬೀಳಲಿವೆ. ನೂರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಕೆಎಸ್ ಒಯು ಹಣವನ್ನು ಕಾಲೇಜು ಶಿಕ್ಷಣ ಇಲಾಖೆ ಬಳಕೆಗೆ ಬಳಸಿಕೊಳ್ಳಲು ಹಾಗೂ ವಿವಿಗಳ ಕಟ್ಟಡ ಕಾಮಗಾರಿಗೆ ಬಳಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗುತ್ತಿದೆ. ಬೇರೆ ವಿವಿಗಳಿಗೆ ಬೋಧಕ/ ಬೋಧಕೇತರರ ನೇಮಕಕ್ಕೆ ಚಿಂತನೆ ನಡೆಸಲಾಗಿದೆ.
ತಾತ್ಕಾಲಿಕ ಸಿಬ್ಬಂದಿಗಳನ್ನು ಸೇವೆಯಿಂದ ಕಡಿತಗೊಳಿಸಲು ಚಿಂತನೆ ನಡೆದಿದೆ. ಕೆಎಸ್ಓಯು ಹಣ ತಾಂತ್ರಿಕ ಶಿಕ್ಷಣ ಇಲಾಖೆ, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಟ್ಟಣ ನಿರ್ಮಾಣ ಬಳಕೆಗೆ ಚಿಂತನೆ ನಡೆಸಲಾಗಿದ್ದು, ಅಧ್ಯಯನ ನಡೆಸಿ ತಿಂಗಳ ಒಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದ್ದು, ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ.ವಿ.ಬಿ.ಕುಟಿನ್ಹೋ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್.ಎ.ಕೋರಿ, ಶ್ರೀಕಾಂತ್ ಎಸ್ ವನವಳ್ಳಿ , ಆರ್ಥಿಕ ಅಧ್ಯಯನಕೇಂದ್ರದ ಪ್ರೊ. ಕೃಷ್ಣರಾಜ್ , ಬೆಂಗಳೂರು ವಿವಿ ಕುಲಸಚಿವ ಬಿ.ಕೆ.ರವಿ ನೇತೃತ್ವದ ತಂಡ ಅಧ್ಯಯನ ನಡೆಸಲಿದೆ.
ಕರಾಮುವಿ ಮುಚ್ಚಲ್ಲ ಎಂದು ಸಚಿವರು, ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಗುರುವಾರ ಸಂಜೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಹಾಕಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ.