ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು
ಮೈಸೂರು,ಫೆಬ್ರವರಿ,19: ನಮ್ಮ ತಾತಮುತ್ತಾತನ ಕಾಲದಿಂದಲೂ ಕಾಡಿನಲ್ಲೇ ಬದುಕಿದ್ದೇವೆ. ನಮಗೆ ಕಾಡಿನಲ್ಲಿ ಗುಡಿಸಲು ಹಾಕಿಕೊಂಡು ಬದುಕೋದಕ್ಕೆ ಅವಕಾಶ ಮಾಡಿಕೊಡಿ. ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಸಮೀಪದ ಕರಡಿಬೊಕ್ಕೆ ಗಿರಿಜನ ಹಾಡಿಯ ಜನ ಕಣ್ಣೀರಿಡುತ್ತಿದ್ದಾರೆ.
ಗಿರಿಜನರನ್ನು ಕಾಡಿನಿಂದ ಒಕ್ಕಲೆಬ್ಬಿಸಿ ಅವರಿಗೆ ಸೂರು ನೀಡಿ, ಕೃಷಿಗೆ ಜಮೀನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಗಳಾಗುತ್ತಿವೆ. ಕೆಲವರಷ್ಟೇ ಹಾಡಿ ಬಿಟ್ಟು ಬಂದು ಜೀವನ ಸಾಗಿಸುತ್ತಿದ್ದಾರೆ. ಮತ್ತೆ ಕೆಲವರು ಕಾಡಿನಲ್ಲೇ ಗುಡಿಸಲು ಹಾಕಿಕೊಂಡು ಇಲ್ಲಿಯೇ ಬದುಕುತ್ತೇವೆ. ಇಲ್ಲಿಂದ ಕದಲುವುದಿಲ್ಲ ಎಂದು ಹಠ ಮಾಡುತ್ತಾರೆ. ಆದರೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಲೇ ಬರುತ್ತಿದೆ.[ಅಳಿವಿನಂಚಿನಲ್ಲಿರುವ ಕೊಡಗಿನ 'ಕೆಂಬಟ್ಟಿ' ಜನಾಂಗ ಮರೆಯಾಗದಿರಲಿ]
ಇತರೆ ಹಾಡಿಗಳ ಜನರದ್ದೇ ಒಂದು ಕಥೆಯಾದರೆ ಕರಡಿಬೊಕ್ಕೆ ಹಾಡಿಜನರದ್ದೇ ಮತ್ತೊಂದು ಕಥೆ. ಇವರು ಪ್ರಾಣ ಬಿಟ್ಟೇವು ಆದರೆ ಜಮೀನು ಬಿಡುವುದಿಲ್ಲ ಎಂದು ಅರಣ್ಯ ಇಲಾಖೆಯ ಮುಂದೆ ಪಟ್ಟು ಹಿಡಿಯುತ್ತಿದ್ದಾರೆ.
ಕರಡಿಬೊಕ್ಕೆ ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮಂದಿ ನೂತನವಾಗಿ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ರೀತಿ ಗುಡಿಸಲನ್ನು ಅರಣ್ಯದಲ್ಲಿ ನಿರ್ಮಿಸುವುದು ಅಪರಾಧ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಆದರೆ ಅದಕ್ಕೆ ಸೊಪ್ಪು ಹಾಕದ ಇವರು ತೆರವುಗೊಳಿಸುವಂತೆ ಸೂಚಿಸಲು ಬಂದ ಅರಣ್ಯಾಧಿಕಾರಿ ಗಣೇಶ್ ಎಂಬುವರಿಗೆ ನಾವು ತೆರವುಗೊಳಿಸಲ್ಲ ಎನ್ನುತ್ತಿದ್ದಾರೆ.
ಕರಡಿಬೊಕ್ಕೆ ಗಿರಿಜನರು ಹೇಳುವುದೇನು?
ಗಿರಿಜನರು ಸರ್ವೇ ನಂ.245ರಲ್ಲಿ ಜಾಗದಲ್ಲಿ ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರು ಕೂಲಿಗೆ ಹೋದ ಸಮಯದಲ್ಲಿ ಶಿವಮೂರ್ತಿ ಎಂಬ ವನಪಾಲಕ ನಮ್ಮ ಜಮೀನನ್ನು ಆವರಿಸಿಕೊಂಡು ಕಂದಕ ನಿರ್ಮಿಸಿದ್ದಾರೆ.
ಈ ಬಗ್ಗೆ ಸಾಕಷ್ಟು ಹೋರಾಟ ನಡೆಸಿದ್ದೆವು. ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಜಮೀನನ್ನು ಬಿಡಿಸಿಕೊಡುತ್ತೇವೆ ಎಂದು 10-15 ವರ್ಷಗಳಿಂದ ಸತಾಯಿಸುತ್ತಾ ಬಂದಿದ್ದಾರೆ. ನಮಗೆ ಇರುವ 8 ಕುಂಟೆ ವಿಸ್ತೀರ್ಣದ ಜಾಗದಲ್ಲಿನ ಗುಡಿಸಲಿನಲ್ಲಿ ನಮ್ಮ ಸಂಸಾರದೊಂದಿಗೆ ಜೀವನ ನಡೆಸುತ್ತಿದ್ದೇವೆ. ಇದರಲ್ಲಿ ಇರುವ ಮನೆಗಳು ಮಳೆ ಬಂದಾಗ ಸೋರುತ್ತಿದ್ದು ಗೋಡೆಗಳು ಶಿಥಿಲಗೊಂಡಿವೆ. ವಾಸಕ್ಕೆ ಪೂರಕವಾಗಿಲ್ಲ.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]
ಕೂಲಿಗಾಗಿ ಪಕ್ಕದ ಬೈಲುಕುಪ್ಪೆಯ ಟಿಬೆಟಿಯನ್ನರ ಮನೆಗಳಲ್ಲಿ ಮತ್ತು ಕೊಡಗಿಗೆ ಹೋಗುತ್ತೇವೆ. ಅದರಿಂದ ಬಂದ ಹಣದಲ್ಲಿ ಜೀವನ ನಡೆಸಬೇಕು. ಇಂತಹ ಪರಿಸ್ಥಿತಿಯಲ್ಲಿ ಒಂದು ಕಡೆ ಅರಣ್ಯ ಇಲಾಖೆಯ ಕಂದಕ ನಿರ್ಮಿಸಿದ್ದಾರೆ.
ಇನ್ನೊಂದೆಡೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ದೊಡ್ಡ ಕಾಲುವೆ ತೋಡಲಾಗಿದೆ. ಇದರ ಮಧ್ಯದಲ್ಲಿರುವ 10 ಮನೆಗಳಲ್ಲಿ 21 ಕುಟುಂಬಗಳಿದ್ದು ನೂತನವಾಗಿ ಗುಡಿಸಲು ನಿರ್ಮಿಸಿಕೊಳ್ಳಲು ಸಹ ಜಾಗವಿಲ್ಲದಂತಾಗಿದೆ.[ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]
ಅರಣ್ಯ ಇಲಾಖೆಯ ಅಧಿಕಾರಿಗಳು ನಮಗೆ ಇದ್ದ ಗೊಮಾಳದ ಜಮೀನನ್ನು ವಶಪಡಿಸಿಕೊಂಡು ಒಕ್ಕಲೆಬ್ಬಿಸಿದ್ದಾರೆ. ಇದರಿಂದ ತಾವುಗಳು ನೆಲೆ ಕಳೆದುಕೊಂಡು ಅತಂತ್ರದಲ್ಲಿದ್ದೇವೆ. ಆದ್ದರಿಂದ ಹುಣಸೂರು ಉಪ ವಿಭಾಗಾಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಹಿಂದೆ ಇದ್ದ ಜಮೀನಿನಲ್ಲಿ ಗುಡಿಸಲುಗಳನ್ನು ನಿರ್ಮಿಸಿ ಕೊಂಡಿರುವುದಾಗಿ ಹೇಳುತ್ತಿದ್ದಾರೆ.[ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]
ಈ ನಡುವೆ ಗಿರಿಜನರನ್ನು ಮನವೊಲಿಸುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದು ಕೂಡಲೇ ಅಕ್ರಮ ಗುಡಿಸಲುಗಳನ್ನು ತೆರವುಗೊಳಿಸದಿದ್ದರೆ ಕಾನೂನು ಕ್ರಮ ಕೈಗೊಂಡು ಗುಡಿಸಲುಗಳನ್ನು ತೆರವು ಮಾಡಿಸಲಾಗುವುದು ಎಂದು ಪಿರಿಯಾಪಟ್ಟಣ ವಲಯದ ಅರಣ್ಯಾಧಿಕಾರಿ ಗಿರೀಶ್ ಗಿರಿಜನರಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ಗಿರಿಜನರ ಪಾಡು ಮಾತ್ರ ನಾಯಿಪಾಡಾಗಿದೆ.