ಮೈಸೂರು ಜೈಲಿನಲ್ಲಿ ಕೈದಿಗಳಿಗೆ ‘ಅಕ್ಷರ ಪಾಠ’
ಮೈಸೂರು, ನವೆಂಬರ್ 16; ಅವರೆಲ್ಲರೂ ಯಾವುದೋ ಕೆಟ್ಟ ಪರಿಸ್ಥಿತಿ, ಸನ್ನಿವೇಶಕ್ಕೆ ಕಟ್ಟು ಬಿದ್ದು ಅಪರಾಧ ಕೃತ್ಯ ಎಸಗಿ ಇದೀಗ ಜೈಲಿನಲ್ಲಿ ಕಾರಾಗೃಹವಾಸ ಅನುಭವಿಸುತ್ತಿದ್ದಾರೆ. ಆದರೆ ವ್ಯಕ್ತಿ ಎಲ್ಲೇ ಇರಲಿ ವಿದ್ಯೆ ಕಲಿಯುವುದು ಅವನ ಸಂವಿಧಾನ ಬದ್ಧ ಹಕ್ಕು.
ಈ ನಿಟ್ಟಿನಲ್ಲಿ ಮೈಸೂರು ಕಾರಾಗೃಹದಲ್ಲಿ 'ಅಕ್ಷರದ ಬೆಳಕು' ಗೋಚರಿಸಿದೆ. ಅನಕ್ಷರಸ್ಥ 36 ಮಹಿಳೆಯರು, 407 ಪುರುಷರು ಸೇರಿದಂತೆ 441 ಕಾರಾಗೃಹ ವಾಸಿಗಳಿಗೆ ಜೈಲಿನಲ್ಲಿಯೇ ಅಕ್ಷರ ಪಾಠ ಆರಂಭವಾಗಿದೆ.
ಧಾರವಾಡ ಜೈಲಿನಲ್ಲಿ 120 ಕೈದಿಗಳಿಗೆ ಅಕ್ಷರಾಭ್ಯಾಸ
ನಾನಾ ಕಾರಣಗಳಿಗಾಗಿ ಜೈಲು ಸೇರಿರುವ ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾಭ್ಯಾಸ ಕಲಿಸಿ ಬಿಡುಗಡೆ ವೇಳೆಗೆ ಉತ್ತಮ ನಾಗರಿಕರನ್ನಾಗಿ ಮಾಡಲು ರಾಜ್ಯ ಸರಕಾರ ರೂಪಿಸಿರುವ 'ಕಲಿಕೆಯಿಂದ ಬದಲಾವಣೆ' ಸಾಕ್ಷರತಾ ಕಾರ್ಯಕ್ರಮ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿಯೂ ಆರಂಭಗೊಂಡಿದೆ.
2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಪಟ್ಟಿ
ಏನಿದು ಯೋಜನೆ?: ಶಿಕ್ಷಣದಿಂದ ಯಾರೊಬ್ಬರು ವಂಚಿತರಾಗಬಾರದು ಎಂಬುದು ಸಂವಿಧಾನದ ಆಶಯ. ಈ ನಿಟ್ಟಿನಲ್ಲಿ ಈಗಾಗಲೇ ಬಂದಿಖಾನೆ ನಿವಾಸಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೂ ಶಿಕ್ಷಣ ಕೊಡುವ ವ್ಯವಸ್ಥೆ ಇದೆ. ಆದರೆ ಅನಕ್ಷರಸ್ಥರನ್ನು ಶಿಕ್ಷಿತರನ್ನಾಗಿಸುವ ಉದ್ದೇಶದಿಂದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಾಗೂ ಲೋಕ ಶಿಕ್ಷಣ ನಿರ್ದೇಶನಾಲಯ ಸಹಯೋಗದಲ್ಲಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಮೆರಿಕದ ಜಾರ್ಜಿಯಾದಲ್ಲಿ 'ಕನ್ನಡ ಭಾಷಾ ದಿನ ಮತ್ತು ರಾಜ್ಯೋತ್ಸವ ದಿನ'
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನದಿಂದ ಈ ಅಕ್ಷರ ಕಲಿಸುವ ಕಾರ್ಯ ಆರಂಭಗೊಂಡಿದೆ. ಇವರಿಗೆ ಸುಶಿಕ್ಷಿತ ಕೈದಿಗಳೇ ಮೇಷ್ಟ್ರು. ಅನಕ್ಷರಸ್ಥರು ಮತ್ತು ಅರೆ ಅನಕ್ಷರಸ್ಥರು ಎಂಬ ವಿಭಾಗ ಮಾಡಿಕೊಂಡು ಪಾಠ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಇವರಿಗೆ ಪಾಠ ಮಾಡಲು ಶಿಕ್ಷಿತ ಕೈದಿಗಳಿಗೆ ತರಬೇತಿ ನೀಡಲಾಗಿದೆ. ಮೈಸೂರು ಕೇಂದ್ರ ಕಾರಾಗೃಹದಲ್ಲಿ 23 ಮಹಿಳೆಯರು, 192 ಪುರುಷರು ಸೇರಿ 215 ಅನಕ್ಷರಸ್ಥರು. 13 ಮಹಿಳೆಯರು, 213 ಪುರುಷರು ಸೇರಿ 226 ಅರೆ ಅಕ್ಷರಸ್ಥರು ಇದ್ದಾರೆ.
ಬಾಳಿಗೆ ಬೆಳಕು ಪಠ್ಯ; ನಿತ್ಯ 2 ಗಂಟೆ ವಿದ್ಯಾಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿದೆ. ವ್ಯಾಸಂಗಕ್ಕೆ ಅನುಕೂಲ ಆಗುವಂತೆ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ಕಲಿಕಾ ಸಾಮಗ್ರಿ ವಿತರಿಸಲಾಗಿದೆ. 24 ಅಧ್ಯಾಯ ಒಳಗೊಂಡಿರುವ 'ಬಾಳಿಗೆ ಬೆಳಕು' ಪುಸ್ತಕದಲ್ಲಿ ಪಠ್ಯವನ್ನು ಬೋಧಿಸಲಾಗುತ್ತದೆ. ಬರವಣಿಗೆ, ಓದು ಮತ್ತು ಸಾಮಾನ್ಯ ಲೆಕ್ಕಾಚಾರ ಹಾಗೂ ಸಾಮಾನ್ಯ ಜ್ಞಾನ ಕಲಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.
ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ. ಸಿ. ದಿವ್ಯಶ್ರೀ ಹೇಳುವಂತೆ, "ಸಾಕ್ಷರತಾ ಕಾರ್ಯಕ್ರಮದಲ್ಲಿ ಕಲಿಯುವ ಕೈದಿಗಳಿಗೆ ಮಾರ್ಚ್ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸಾದವರು ನ್ಯಾಷನಲ್ ಓಪನ್ ಸ್ಕೂಲ್ ಮೂಲಕ ಎಸ್ಸೆಸ್ಸೆಲ್ಸಿಗೆ ದಾಖಲಾಗಬಹುದು. ಬಳಿಕ ಕೆಎಸ್ಒಯು (ಕರ್ನಾಟಕ ರಾಜ್ಯ ಮುಕ್ತ ವಿವಿ) ಮತ್ತು ಇಗ್ನೊ ಶಾಖೆ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ ಮಾಡಬಹುದು" ಎಂದರು.
ಕಾಯಂ ಕಲಿಕಾ ಕೇಂದ್ರ ಆರಂಭ; ಕಾರಾಗೃಹ ವಾಸಿಗಳಿಗೆ ಶಿಕ್ಷಣ ನೀಡುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಅಕ್ಷರಸ್ಥರು ಪಾಠ ಮಾಡುವ ಹಾಗೂ ಕಾಯಂ ಕಲಿಕಾ ಕೇಂದ್ರ ಆರಂಭವಾಗಿರುವುದು ಈ ವರ್ಷದ ವಿಶೇಷ.
ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಎಡಿಜಿಪಿ ಡಾ. ಅಲೋಕ್ ಮೋಹನ್ ಅವರ 'ನವಚೇತನ' ಪರಿಕಲ್ಪನೆಯಡಿ ಕೌಶಲ್ಯ ಮತ್ತು ಶಿಕ್ಷಣದ ಮೂಲಕ ಕೈದಿಗಳ ಮನಃ ಪರಿವರ್ತನೆ ಹಾಗೂ ಸುಧಾರಣೆಗೆ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಜೈಲಿನಿಂದ ಬಿಡುಗಡೆಯಾದವರು ಮತ್ತೆ ತಪ್ಪು ಮಾಡದೇ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾಡುವುದು ಇದರ ಉದ್ದೇಶ.
ಗೃಹ ಸಚಿವ ಆರಗ ಜ್ಞಾನೇಂದ್ರ ಈ ಕುರಿತು ಮಾತನಾಡಿದ್ದಾರೆ. "ರಾಜ್ಯದ ವಿವಿಧ ಜೈಲುಗಳಲ್ಲಿ ಒಟ್ಟು 16 ಸಾವಿರ ಕೈದಿಗಳಿದ್ದು, ಆರು ಸಾವಿರಕ್ಕೂ ಅಧಿಕ ಕೈದಿಗಳು ಅನಕ್ಷರಸ್ಥರಾಗಿದ್ದಾರೆ. ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದ ಕೈದಿಗಳಿಗೆ ಅಕ್ಷರ ಕಲಿಸಿ ಅವರು ಬಿಡುಗಡೆ ಹೊಂದುವ ವೇಳೆ ಸಹಿ ಮಾಡುವ ಮಟ್ಟಿಗೆ ಅಕ್ಷರಗಳನ್ನು ಕಲಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.