ಮೈಸೂರು ಎಸ್ಪಿ ಅಮಿತ್ ಸಿಂಗ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ
ಮೈಸೂರು, ಜನವರಿ 26: ಜಿಲ್ಲಾ ಪೊಲೀಸ್ ಅಧಿಕಾರಿಗಳೇ ಅವಾಚ್ಯ ಪದಗಳಿಂದ ನಿಂದಿಸಿದ್ದರೆಂದು ಆರೋಪಿಸಿ ಮೈಸೂರು ದಕ್ಷಿಣ ವಲಯ ಐಜಿಪಿಗೆ ಪೊಲೀಸ್ ಇನ್ಸ್ ಪೆಕ್ಟರ್ ಗೆ ದೂರು ನೀಡಿದ ಘಟನೆ ನಡೆದಿದೆ. ಮೈಸೂರು ನಗರದ ವಿವಿ ಪುರಂ ಸಂಚಾರಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ದೂರು ನೀಡಿದ್ದಾರೆ.
ವಿವಿ ಪುರಂ ಸಂಚಾರಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ರವಿ ಅವರಿಗೆ ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. ಜ.15 ರಂದು ಚಾರ್ಜ್ ತೆಗೆದುಕೊಳ್ಳಲು ಎಸ್ಪಿ ಕಚೇರಿಗೆ ತೆರಳಿದ್ದರು. ಆಗ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ಕಚೇರಿಯಲ್ಲಿ ಇರಲಿಲ್ಲ.
4 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಮೈಸೂರಿಗೆ ಹೊಸ ಆಯುಕ್ತರು
ಬಳಿಕ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ಬಂದಿರುವ ವಿಷಯ ತಿಳಿಸಿದೆ. ಆಗ ಕೆಲ ನಿಮಿಷ ಕಾಯುವಂತೆ ಸೂಚಿಸಿದರು. ಅದರಂತೆ ನಾನು ಕಚೇರಿ ಹೊರಗಡೆ ಕಾಯುತ್ತಿದ್ದೆ. ಈ ನಡುವೆ ದೂರವಾಣಿ ಮೂಲಕ ಕರೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನನ್ನ ವಿರುದ್ಧ ಏಕಾಏಕಿ ಹರಿಹಾಯ್ದರು.
ಏಕ ವಚನ ಪದ ಬಳಕೆ ಮಾಡಿ ನನಗೆ ಅವಮಾನ ಮಾಡಿದರು. ಇದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿ ದಕ್ಷಿಣ ವಲಯ ಐಜಿಪಿಗೆ ನೀಡಿರುವ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.
ಈ ನಡುವೆ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ಇನ್ಸ್ ಪೆಕ್ಟರ್ ರವಿ ಅವರಿಗೆ ಫೋನ್ ನಲ್ಲಿ ಬಯ್ದಿರುವ ಆಡಿಯೋ ವೈರಲ್ ಆಗಿದೆ. ಈ ಸಂಭಾಷಣೆಯ ಸಾರಾಂಶ ಏನೆಂದರೆ, ಪೋಸ್ಟಿಂಗ್ ಗಾಗಿ ಇನ್ಸ್ ಪೆಕ್ಟರ್ ರವಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಮೂಲಕ ಕರೆ ಮಾಡಿಸಿ ಪ್ರಭಾವ ಬೀರಿಸಿದ್ದು ಎಸ್ಪಿ ಅಮಿತ್ ಸಿಂಗ್ ಸಿಟ್ಟಿಗೆ ಕಾರಣವಾಗಿದೆ.
ಮಧ್ಯಪ್ರದೇಶದ ಕಳ್ಳರ ಗ್ಯಾಂಗ್ ಅಂದರ್: ಬೆಳಕಿಗೆ ಬಂತು 28 ಮನೆಗಳ್ಳತನ ಪ್ರಕರಣ
ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದರು ಅದನ್ನು ಲೆಕ್ಕಿಸದೆ ಚಾರ್ಜ್ ವಹಿಸಿಕೊಳ್ಳಲು ಆತುರಪಟ್ಟು ಸಚಿವರಿಂದ ಕರೆ ಮಾಡಿಸಿದ್ದು ಅಧಿಕಾರಿಯ ಕಣ್ಣು ಕೆಂಪಗಾಗಿಸಿದೆ. ಈ ಸಲುವಾಗಿಯೇ ಅವರು ಇನ್ಸ್ ಪೆಕ್ಟರ್ ರವಿ ವಿರುದ್ಧ ಹರಿಹಾಯ್ದಿರುವುದು ಆಡಿಯೋ ಸಂಭಾಷಣೆ ಕೇಳಿದರೆ ಸ್ಪಷ್ಟವಾಗುತ್ತದೆ.
ಇನ್ನು ಈ ಕುರಿತಾಗಿ ರವಿಯವರು ಸದರಿ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲು ಅನುಮತಿ ನೀಡಬೇಕೆಂದೂ ರವಿ ಅವರು ಐಜಿಪಿ ಅವರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರಲ್ಲದೆ ಎಸ್ಪಿ ತಮ್ಮೊಂದಿಗೆ ನಡೆಸಿರುವ ಆಡಿಯೋ ಸಂಭಾಷಣೆಯ ಸಿಡಿಯನ್ನು ದೂರಿನೊಂದಿಗೆ ಲಗತ್ತಿಸಿದ್ದಾರೆ.