ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಮತ್ತಿಬ್ಬರ ಬಂಧನ
ಮೈಸೂರು, ಜೂನ್ 4: ಮೇ 6ರಂದು ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುವೆಂಪುನಗರ ಪೊಲೀಸರು ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದ ಇನ್ಸ್ ಪೆಕ್ಟರ್ ರಾಜು, ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಮೂವರ ಬಂಧನ
ಕಳೆದ ಗುರುವಾರವಷ್ಟೇ ಮೂವರನ್ನು ಬಂಧಿಸಿದ್ದ ಪೊಲೀಸರು, ಹೆಚ್ಚುವರಿಯಾಗಿ ವಿಚಾರಣೆ ನಡೆಸಿದರು. ಪ್ರಕರಣದಲ್ಲಿ ಒಟ್ಟು 8 ಮಂದಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ. ಹಣಕಾಸು ಹಾಗೂ ಇನ್ನಿತರ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಬಂದಿರುವ ಕಾರಣ ಶಿವಸಿದ್ದು ಎಂಬುವವರ ಮೇಲೆ ಹಲ್ಲೆ ನಡೆಸಿದ್ದು, ಅವರ ಜೊತೆಯಲ್ಲಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ 8 ಮಂದಿ ಯುವಕರು ಪರಾರಿಯಾಗಿದ್ದರು.
ಘಟನೆ ಹಿನ್ನೆಲೆ: ನಗರದ ಲಿಂಗಾಂಬುದಿ ಪಾಳ್ಯ ದೇವಸ್ಥಾನವೊಂದರ ಬಳಿ ಸ್ನೇಹಿತನ ಜೊತೆ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಕೆಲವು ಯುವಕರು ದಾಳಿ ನಡೆಸಿದ್ದರು. ಅವರಲ್ಲಿ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಜತೆಯಲ್ಲಿದ್ದ ಸ್ನೇಹಿತ ಶಿವಸಿದ್ದಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ಅವರು, ಕೆ.ಆರ್ ವಿಭಾಗದ ಎಸಿಪಿ ಜಿ ಟಿ ನಾಯಕ್, ಕುವೆಂಪು ನಗರ ಠಾಣೆ ಇನ್ಸ್ ಪೆಕ್ಟರ್ ರಾಜು, ಎಸ್ಐಗಳಾದ ಅರುಣ್, ರಘು ನೇತೃತ್ವದಲ್ಲಿ ಆರೋಪಿ ಪತ್ತೆಗೆ ಮೂರು ತಂಡಗಳನ್ನು ರಚಿಸಿದ್ದರು.