ಮೈಸೂರು: ನಂಜನಗೂಡಿನ ನಂಟು ಬಿಡದ ಕಾಡಾನೆಗಳು
ಮೈಸೂರು, ಡಿಸೆಂಬರ್. 08: ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮಗಳ ರೈತರ ಬದುಕು ಹಸನಾಗುವ ಲಕ್ಷಣ ಕಂಡು ಬರುತ್ತಿಲ್ಲ. ಹುಲಿ, ಚಿರತೆಯಿಂದ ಪ್ರಾಣ ಭಯ ಅನುಭವಿಸುತ್ತಿದ್ದವರಿಗೆ ಈಗ ಕಾಡಾನೆಗಳು ಜಮೀನಿಗೆ ಲಗ್ಗೆಯಿಡುವ ಮೂಲಕ ವರ್ಷದ ಕೂಳನ್ನೇ ಕಿತ್ತುಕೊಳ್ಳುತ್ತಿವೆ.
ತಾಲೂಕಿನ ಮಲ್ಕುಂಡಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಪ್ರದೇಶದಿಂದ ಹಿಂಡು ಹಿಂಡಾಗಿ ಬರುವ ಆನೆಗಳು ಒಂದೇ ರಾತ್ರಿಯಲ್ಲಿ ಜಮೀನಿಗೆ ನುಗ್ಗಿ ಬೆಳೆಗಳನ್ನೆಲ್ಲ ತಿಂದು ತುಳಿದು ನಾಶ ಮಾಡಿ ಹಿಂತಿರುಗುತ್ತಿವೆ. ಇದರಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಪಾಡು ಹೇಳತೀರದಂತಾಗಿದೆ.
ಸಾಲ ಮಾಡಿ ರಾತ್ರಿ ಹಗಲೆನ್ನದೆ ಶ್ರಮಪಟ್ಟು ಬೆಳೆ ಬೆಳೆದು ಇನ್ನೇನು ಫಸಲು ಬರಬೇಕೆನ್ನುವ ವೇಳೆಗೆ ಅಥವಾ ಕೊಯ್ಲಿಗೆ ಬಂದ ಫಸಲನ್ನೇ ತಿಂದು ಹಾಳು ಮಾಡುತ್ತಿರುವುದು ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕಿಗೆ ಬರೆ ಎಳೆದಂತಾಗಿದೆ.
ಗ್ರಾಮಕ್ಕೆ ಲಗ್ಗೆಯಿಡುವ ಆನೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಸಿಕ್ಕ ಸಿಕ್ಕ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡುತ್ತಾ ತೆರಳುತ್ತಿವೆ. ಕಳೆದ ಕೆಲ ದಿನಗಳಿಂದ ಆನೆಗಳ ಹಾವಳಿಯಿಲ್ಲದೆ ನೆಮ್ಮದಿಯಾಗಿದ್ದ ರೈತರಿಗೆ ಸೋಮವಾರ ರಾತ್ರಿ ಆನೆಗಳು ಶಾಕ್ ನೀಡಿವೆ.
ಮಲ್ಕುಂಡಿ ಗ್ರಾಮದ ಚನ್ನಬಸಪ್ಪ ಎಂಬುವರಿಗೆ ಸೇರಿದ ಜಮೀನನಿನ ಮೇಲೆ ದಾಳಿ ಮಾಡಿ ಬೆಳೆ ನಾಶ ಮಾಡಿವೆ. ಇನ್ನು ಚನ್ನಪಟ್ಟಣ ಗ್ರಾಮದ ಮಹದೇವಬೋವಿ ಎಂಬುವರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನ ಜೋಳ ನಾಶ ಮಾಡಿ ಕೊಳವೆ ಬಾವಿ ಜಖಂಗೊಳಿಸಿವೆ. ದಾಸಬೋವಿ ಎಂಬುವರಿಗೆ ಸೇರಿದ 2 ಎಕರೆ ಜಮೀನಿನಲ್ಲಿದ್ದ ಟೊಮೇಟೋವನ್ನು ನಾಶ ಮಾಡಿವೆ.
ರೈತರೇ ತಮ್ಮ ಬೆಳೆ ರಕ್ಷಣೆಗೆ ಕಾವಲು ಕಾತಯುವಂತಾಗಿದೆ. ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.