ಮೈಸೂರು: ಕಸದ ತೊಟ್ಟಿಯಲ್ಲಿ ವ್ಯಕ್ತಿಯ ಕಾಲು, ಶವ ಅಂದುಕೊಂಡವರು ಬೆಸ್ತು
ಮೈಸೂರು, ಡಿಸೆಂಬರ್ 25: ಕಸದ ತೊಟ್ಟಿಯಲ್ಲಿ ವ್ಯಕ್ತಿಯ ಕಾಲು ಕಂಡ ಮೈಸೂರಿನ ಜನ ಹೌಹಾರಿ ಹೋಗಿದ್ದಾರೆ. ಆದರೆ ಸತ್ಯ ಗೊತ್ತಾದ ನಂತರ 'ಛೇ..' ಎಂದು ನಗುತ್ತಾ ತಿಳಿಯಾಗಿದ್ದಾರೆ.
ಇಂದು ಬೆಳಿಗ್ಗೆ ಮಂಡಿ ಮೊಹಲ್ಲಾದ ಆರ್ ಎಂಸಿ ಬಳಿ ಮಾಮೂಲಿನಂತೆ ಪೌರ ಕಾರ್ಮಿಕರು ಕಸ ಒಯ್ಯಲು ಗಾಡಿ ತಂದಿದ್ದಾರೆ. ಕಸ ತುಂಬಿದ್ದ ತೊಟ್ಟಿಯನ್ನು ಆಟೋಮ್ಯಾಟಿಕ್ ಯಂತ್ರಕ್ಕೆ ಕಟ್ಟಿ ವಾಹನದ ಒಳಕ್ಕೆ ಹಾಕಿಕೊಳ್ಳುವಾಗ ವ್ಯಕ್ತಿಯೊಬ್ಬನ ಕಾಲುಗಳು ಕಸದ ತೊಟ್ಟಿಯ ಅಡಿಯಲ್ಲಿ ಕಣ್ಣಿಗೆ ಬಿದ್ದಿದೆ.
ಕುಡಿದ ಮತ್ತಿನಲ್ಲಿ ಪೊಲೀಸ್ ಕೆನ್ನೆಗೆ ಮುತ್ತಿಟ್ಟ ಕುಡುಕ, ಮುಂದೇನಾಯ್ತು?
ಕಸದ ತೊಟ್ಟಿಯಲ್ಲಿ ವ್ಯಕ್ತಿಯ ಕಾಲುಗಳು ನೋಡಿ ಸುತ್ತ-ಮುತ್ತ ಇದ್ದ ಜನ ಗಾಬರಿಗೊಂಡು, 'ಶವವೇ ಇರಬೇಕು' ಎಂದು ಅನುಮಾನ ಗೊಂಡಿದ್ದಾರೆ. ಕೂಡಲೇ ಗಾಡಿಗೆ ಏರಿಸಲಾಗಿದ್ದ ತೊಟ್ಟಿಯನ್ನು ಕೆಳಕ್ಕೆ ಇಳಿಸಿ ಕಸವನ್ನು ಕೆಳಗೆ ಹಾಕಿದರೆ ತೊಟ್ಟಿಯ ಒಳಗಿಂದ ವ್ಯಕ್ತಿಯೊಬ್ಬ ಕೆಳಕ್ಕೆ ಉದುರಿದ್ದಾನೆ.
ಕೆಳಕ್ಕೆ ಉದುರಿದ ವ್ಯಕ್ತಿ ಬದುಕಿದ್ದು, ಸಾರಾಯಿ ಅಮಲಿನಲ್ಲಿ ರಾತ್ರಿ ಬಂದು ತೊಟ್ಟಿಯಲ್ಲಿ ಮಲಗಿದ್ದನಂತೆ. ಆತ ಮಲಗಿರುವುದು ನೋಡದೇ ಜನ ಆತನ ಮೇಲೆಯೇ ಕಸ ಸುರಿದು ಹೋಗಿದ್ದಾರೆ. ಪೌರ ಕಾರ್ಮಿಕರೂ ಕಸದ ತೊಟ್ಟಿ ತಳದಲ್ಲಿ ವ್ಯಕ್ತಿ ಇರುವುದು ನೋಡದೇ ವಾಹನಕ್ಕೆ ತುಂಬಿಸಿದ್ದಾರೆ.
ನಕ್ಕುಬಿಡಿ: ಕುಡಿದು ವಾಹನ ಓಡಿಸಿದ್ದಕ್ಕೆ ಸರ್ಕಾರವೇ ದಂಡ ಕಟ್ಟಲಿ ಅಂದ ಕುಡುಕ
ಕಸದ ತೊಟ್ಟಿಯಿಂದ ಕೆಳಕ್ಕೆ ಬಿದ್ದ ಕುಡುಕನನ್ನು ಕೂಡಲೇ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಕಸದ ಜೊತೆ ಡಂಪಿಂಗ್ ಯಾರ್ಡ್ ಗೆ ಸೇರಬೇಕಿದ್ದ ಕುಡುಕ ಜನರ ಸಹಾಯದಿಂದ ಆಸ್ಪತ್ರೆ ಬೆಡ್ ಮೇಲಿದ್ದಾನೆ. ಆತನ ವೈಯಕ್ತಿಕ ಮಾಹಿತಿ ಲಭ್ಯವಾಗಿಲ್ಲ. ಆತ ಅಲೆಮಾರಿ ಇರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.