ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಹದೇವಪ್ಪ ಚಿತ್ತ ನಂಜನಗೂಡಿನ ಮೇಲೆ?!
ಮೈಸೂರು, ಸೆಪ್ಟೆಂಬರ್ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ತಮ್ಮ ಪುತ್ರರನ್ನು ರಾಜಕೀಯಕ್ಕೆ ಎಳೆದು ತಂದಿರುವ ಬೆನ್ನಲ್ಲೇ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರಗಳನ್ನು ಕೂಡ ವ್ಯವಸ್ಥೆ ಮಾಡಿಕೊಡುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ.
ಸಿದ್ದರಾಮಯ್ಯ ಅವರು ತಾವು ಈ ಹಿಂದೆ ಸ್ಪರ್ಧಿಸಿದ್ದ ವರುಣಾ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು, ಇನ್ನು ಸಚಿವ ಮಹದೇವಪ್ಪ ಅವರು ತಿ.ನರಸೀಪುರ ಕ್ಷೇತ್ರವನ್ನು ಮಗ ಸುನೀಲ್ ಬೋಸ್ ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ವರುಣಾದಲ್ಲಿ ತಮ್ಮ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿದ್ದರೆ, ತಿ.ನರಸೀಪುರ ಕ್ಷೇತ್ರದಲ್ಲಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರು ಠಿಕಾಣಿ ಹೂಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಮುಂದಿನ ಅಭ್ಯರ್ಥಿ ನಾವೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಅವರಿಗೆ ವಿವಿಧ ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಅಂಬೇಡ್ಕರ್ ವಸತಿ ಯೋಜನೆಯ ಅಧ್ಯಕ್ಷ ಸ್ಥಾನವನ್ನು ಕರುಣಿಸಲಾಗಿದೆ.
ಹಾಗೆನೋಡಿದರೆ ಸುನೀಲ್ ಬೋಸ್ ಅವರನ್ನು ಈ ಹಿಂದೆ ನಡೆದ ನಂಜನಗೂಡು ಉಪಚುನಾವಣೆಗೆ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ವಿರುದ್ಧ ಕಣಕ್ಕಿಳಿಸಲು ತಂತ್ರಗಳು ನಡೆದಿದ್ದವು. ಇದಕ್ಕೆ ಬೇಕಾದ ಸಿದ್ಧತೆಗಳು ಕೂಡ ಆಗಿದ್ದವು. ಆದರೆ ಕೆಲವು ಸಮಸ್ಯೆಗಳಿಂದಾಗಿ ಅವರನ್ನು ಕೈಬಿಟ್ಟು ಕಳಲೆ ಕೇಶವಮೂರ್ತಿ ಅವರಿಗೆ ಗಾಳ ಹಾಕಲಾಗಿತ್ತು. ಜೆಡಿಎಸ್ ನಲ್ಲಿದ್ದ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ಶ್ರೀನಿವಾಸಪ್ರಸಾದ್ ಅವರ ವಿರುದ್ಧ ನಿಲ್ಲಿಸಿ ಗೆಲ್ಲಿಸುವಲ್ಲಿಯೂ ಯಶಸ್ವಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ?
ಕಳಲೆ ಕೇಶವಮೂರ್ತಿ ನಿಮಿತ್ತ ಮಾತ್ರ
ಬಹುಶಃ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಲ್ಲದೆ ಹೋಗಿದ್ದರೆ ಮತ್ತು ಶ್ರೀನಿವಾಸಪ್ರಸಾದ್ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಸಿಎಂ ಸಿದ್ದರಾಮಯ್ಯ ಬೀಳದೆ ಹೋಗಿದ್ದರೆ ಬಹುಶಃ ಕಳಲೆ ಕೇಶವಮೂರ್ತಿ ಗೆದ್ದು ಶಾಸಕರಾಗುತ್ತಿರಲಿಲ್ಲ. ಉಪಚುನಾವಣೆ ಸಿದ್ದರಾಮಯ್ಯ ಮತ್ತು ಶ್ರೀನಿವಾಸಪ್ರಸಾದ್ ಅವರ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿತ್ತಲ್ಲದೆ, ಕೇಶವಮೂರ್ತಿ ನಿಮಿತ್ತ ಮಾತ್ರವಾಗಿದ್ದರು.
ಮಹದೇವಪ್ಪ ಕಣ್ಣು ನಂಜನಗೂಡಿನ ಮೇಲೆ?!
ಈಗ ಸಚಿವ ಮಹದೇವಪ್ಪ ಅವರು ತಮ್ಮ ಕ್ಷೇತ್ರ ತಿ.ನರಸೀಪುರವನ್ನು ಮಗ ಸುನೀಲ್ ಬೋಸ್ ಗೆ ಬಿಟ್ಟುಕೊಟ್ಟಿರುವುದನ್ನು ನೋಡಿದರೆ, ಅವರ ಕಣ್ಣು ನಂಜನಗೂಡು ಕ್ಷೇತ್ರದ ಮೇಲೆ ಬಿದ್ದಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹಾಗೇನಾದರೂ ಆದರೆ ಕಳಲೆ ಕೇಶವ ಮೂರ್ತಿ ಅವರಿಗೆ ಟಾಂಗ್ ನೀಡಿದರೂ ಅಚ್ಚರಿಯಿಲ್ಲ. ಒಟ್ಟಾರೆ ಚುನಾವಣೆ ಬರುತ್ತಿದ್ದಂತೆಯೇ ಹತ್ತು ಹಲವು ಬದಲಾವಣೆಗಳಾಗುತ್ತಿದ್ದು ಒಂದಷ್ಟು ಗೊಂದಲಗಳು ಏರ್ಪಟ್ಟಿವೆ.
ಪಕ್ಷಕ್ಕಾಗಿ ಮಣ್ಣುಹೊತ್ತವರಿಗೆ ಟಾಂಗ್!
ತಮ್ಮ ಪುತ್ರರಿಗೆ ಮಣೆ ಹಾಕುವ ಭರದಲ್ಲಿ ಇದುವರೆಗೆ ಪಕ್ಷಕ್ಕಾಗಿ ಮಣ್ಣುಹೊತ್ತವರಿಗೆ ಟಾಂಗ್ ಕೊಡೋದು ಗ್ಯಾರಂಟಿಯಾಗುತ್ತಿದೆ. ಮಹದೇವಪ್ಪ ಅವರು ತಿ.ನರಸೀಪುರವನ್ನು ಮಗನಿಗೆ ಬಿಟ್ಟುಕೊಡುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಮಹದೇವಪ್ಪ ನಡೆ ಇನ್ನೂ ನಿಗೂಢ
ಆದರೆ ಅವರು ಯಾವ ಕ್ಷೇತ್ರದತ್ತ ಹೋಗುತ್ತಾರೆ ಎಂಬುದು ಮಾತ್ರ ಸದ್ಯಕ್ಕೆ ಗೌಪ್ಯವಾಗಿಯೇ ಉಳಿದಿದೆ. ಮೂಲಗಳ ಪ್ರಕಾರ ಅವರು ನಂಜನಗೂಡು ಕ್ಷೇತ್ರದತ್ತ ಒಲವು ತೋರುತ್ತಿದ್ದಾರೆ ಎನ್ನಲಾಗುತ್ತಿದೆ.