ಕ್ವಾರಂಟೈನ್ ವಾಸಿಗಳೇ ನಿಮ್ಮ ಬೇಸರ ನಿವಾರಣೆಗೆ ಇಲ್ಲಿದೆ ಸ್ಫೂರ್ತಿದಾಯಕ ಭಾಷಣ
ಮೈಸೂರು, ಏಪ್ರಿಲ್ 06: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿ ಎಲ್ಲರೂ ಮನೆಯಲ್ಲೇ ಇರುವಂತಾದ ಮೇಲೆ ಸಮಯದೂಗಿಸುವುದೇ ಬಹುತೇಕರ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಇದ್ದು, ಸಮಯ ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಸಮಾಜದ ವಿವಿಧ ಗಣ್ಯರಿಂದ ಸ್ಫೂರ್ತಿದಾಯಕ ಸಂದೇಶ ನೀಡುವ, ಈ ಸಂದೇಶವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಪ್ರಸಾರ ಮಾಡುವ ವಿನೂತನ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾಡಳಿತ ಆರಂಭಿಸಿದೆ.
Recommended Video
ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಸಾವಿರಾರು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮುಖ್ಯವಾಗಿ ಇವರಿಗೆ ಉತ್ತಮ ವಾಗ್ಮಿಗಳ ಮೂಲಕ ಸ್ಫೂರ್ತಿದಾಯಕ ಸಂದೇಶವನ್ನು ರವಾನಿಸುವುದು ಈ ಕಾರ್ಯಕ್ರಮ ಉದ್ದೇಶ.
ಮನೆಯಲ್ಲಿ ಇದ್ದು ಬೇಸರವೇ?; ಈ ವೃದ್ಧನ ಕಥೆ ಕೇಳಿ!
ದೀರ್ಘಕಾಲ ಮನೆಯಲ್ಲೇ ಇರಬೇಕಾದ ಸಂದರ್ಭದಲ್ಲಿ ಒತ್ತಡ ನಿವಾರಣೆ ಹಾಗೂ ಸಮಯ ಸದ್ಬಳಕೆ ಬಗ್ಗೆ ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಅವರು ಮೊದಲ ಭಾಷಣಕಾರರಾಗಿ ಇಂದು ಬೆಳಿಗ್ಗೆ 11:30 ಗಂಟೆಗೆ ಮಾತನಾಡುವರು. ಮೈಸೂರು ಜಿಲ್ಲೆಯಲ್ಲಿ ಸಾವಿರಾರು ಜನ ಕ್ವಾರಂಟೈನ್ ನಲ್ಲಿದ್ದಾರೆ. ಇತರರೂ ಮನೆಯಲ್ಲೇ ಇರಬೇಕಾದ ಸನ್ನಿವೇಶ ಇರುವುದರಿಂದ ಅವರದ್ದೂ ಒಂದು ರೀತಿಯ ಕ್ವಾರಂಟೈನ್ ಪರಿಸ್ಥಿತಿ ಇದೆ.
ಮೈಸೂರು ಜಿಲ್ಲಾಡಳಿತದ ವತಿಯಿಂದ ಕೊರೊನಾ ತಡೆಗಟ್ಟಲು ಸ್ವಯಂ ಸೇವಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸ್ಫೂರ್ತಿದಾಯಕ ಭಾಷಣ ಮಾಡುವವರಿಂದಲೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿತ್ತು. ನೂರಾರು ಗಣ್ಯರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರ ಪೈಕಿ ಸಾಧ್ಯವಾದಷ್ಟು ವಾಗ್ಮಿಗಳಿಂದ ಸ್ಫೂರ್ತಿದಾಯಕ ಸಂದೇಶವನ್ನು ಫೇಸ್ಬುಕ್ ನೇರ ಪ್ರಸಾರ ಮಾಡಲು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗಿದೆ.
ನೀವು ಕೂಡ ವೀಕ್ಷಿಸಬಹುದು: ಉತ್ತಮ ವಾಗ್ಮಿಗಳ ಸ್ಫೂರ್ತಿದಾಯಕ ಭಾಷಣದ ನೇರ ಪ್ರಸಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಫೇಸ್ಬುಕ್ ಪೇಜ್ https://www.facebook.com/mysorevarthe/ ನಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ ಪ್ರಾರಂಭವಾಗುತ್ತದೆ. ಈ ಮೇಲಿನ ಲಿಂಕ್ ನಲ್ಲಿ ನೀವು ಕೂಡ ಮನೆಯಲ್ಲಿ ಕುಳಿತು ವೀಕ್ಷಿಸುವ ಮೂಲಕ ನಿಮ್ಮಲ್ಲಿರುವ ಆತಂಕ ಹಾಗೂ ಬೇಸರವನ್ನು ನಿವಾರಣೆ ಮಾಡಿಕೊಳ್ಳಬಹುದು. ಇದೇ ಪೇಜ್ ನಲ್ಲಿ ಸ್ಫೂರ್ತಿದಾಯಕ ಭಾಷಣ ಮಾಡುವ ವಾಗ್ಮಿಗಳ ಹೆಸರನ್ನು ಒಂದು ದಿನ ಮುಂಚಿತವಾಗಿ ತಿಳಿಸಲಾಗುವುದು.