ಮಳೆಯ ಸಿಂಚನದ ನಡುವೆ ನಡೆಯಲಿದೆ ಜಂಬೂ ಸವಾರಿ
ಮೈಸೂರು, ಸೆಪ್ಟೆಂಬರ್ 29 : ಆಗಾಗ ಸುರಿಯುತ್ತಿರುವ ಮಳೆಯ ನಡುವೆಯೇ ಪಾರಂಪರಿಕ ನಗರ ಮೈಸೂರು, ನಾಡಹಬ್ಬ ದಸರಾ ಮಹೋತ್ಸವದ ಮುಖ್ಯ ಘಟ್ಟವಾದ ವಿಜಯದಶಮಿಯಂದು ವಿಶ್ವಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆಗೆ ಸಜ್ಜಾಗಿದೆ.
ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ, ನಾಡಿನ ಪರಂಪರೆ, ಇತಿಹಾಸ, ಸಂಸ್ಕೃತಿ ಬಿಂಬಿಸುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ (ಜಂಬೂಸವಾರಿ) ಮೆರವಣಿಗೆಗೆ ಕಲಾ ತಂಡಗಳು, ಸ್ತಬ್ಧಚಿತ್ರಗಳು ಒಂದೆಡೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಆನೆಗಳು, ಅಶ್ವಗಳಿಗೆ ಪೂರ್ವ ತಾಲೀಮು ನೀಡಲಾಗುತ್ತಿದೆ.
ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮೈಸೂರು ನಗರ ಈಗಾಗಲೇ ಪ್ರವಾಸಿಗರಿಂದ ತುಂಬಿದೆ. ವಾಹನಗಳ ದಟ್ಟಣೆಯಿಂದಾಗಿ ನಗರದಲ್ಲಿ ಸಂಚಾರ ಒತ್ತಡ ಉಂಟಾಗಿದೆ. ಎಲ್ಲೆಲ್ಲೂ ಜನರ ಹಿಂಡು ಕಂಡುಬರುತ್ತಿದೆ. ಫಲಪುಷ್ಪ ಪ್ರದರ್ಶನ, ಯುವ ದಸರಾ, ಆಹಾರ ಮೇಳಕ್ಕೆ, ಅರಮನೆಯಲ್ಲಿ ಮಳೆಯ ನಡುವೆಯೂ ಜನದಟ್ಟಣೆ ಹೆಚ್ಚಾಗಿದೆ.
ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ
ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭಕ್ಕೆ ಕೆಲವೇ ಘಂಟೆಗಳಷ್ಟೇ ಉಳಿದಿವೆ. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ದೇಶ, ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರು ಮೆರವಣಿಗೆ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದಾರೆ. ಭಾರೀ ಮಳೆ ಸುರಿದು ಜಂಬೂ ಸವಾರಿಗೆ ವಿಘ್ನವಾಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಜನ ಸೇರುತ್ತಿರುವುದರಿಂದ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಅಂಬಾರಿ ಹೊತ್ತು ಸಾಗಲಿದ್ದಾನೆ ಅರ್ಜುನ
ಜಂಬೂಸವಾರಿಯಲ್ಲಿ ಸತತ ಆರನೇ ಬಾರಿಗೆ ಅರ್ಜುನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗಲಿದ್ದಾನೆ. ಅರ್ಜುನನ ನಾಯಕತ್ವದಲ್ಲಿ ಅಭಿಮನ್ಯು, ಬಲರಾಮ, ವಿಕ್ರಮ, ವಿಜಯ, ಕಾವೇರಿ, ವರಲಕ್ಷ್ಮಿ, ಗಜೇಂದ್ರ, ಭೀಮ, ದೋಣ, ಹರ್ಷ, ಕೃಷ್ಣ, ದುರ್ಗಾಪರಮೇಶ್ವರಿ, ಗೋಪಿ, ಪ್ರಶಾಂತ, ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ.
ಸಂಜೆ ಬನ್ನಿ ಮಂಟಪದಲ್ಲಿ ಪಂಜಿನ ಮೆರವಣಿಗೆ
ಜಂಬೂ ಸವಾರಿ ಸಿದ್ಧಗೊಳ್ಳುವ ಅರಮನೆ ಆವರಣ ಸೇರಿದಂತೆ ಮೆರವಣಿಗೆ ಸಾಗಿಹೋಗುವ ಪಂಜಿನ ಕವಾಯಿತು ನಡೆಯುವ ಬನ್ನಿಮಂಟಪ ಮೈದಾನದಲ್ಲಿ ಸೂಕ್ತ ಭದತೆಗಳನ್ನು ಕೈಗೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ 2.30ಕ್ಕೆ ಅರಮನೆ ಅವರಣದೊಳಗೆ ಸಿದ್ದರಾಮಯ್ಯ ಅವರು ಅಶ್ವಾರೋಹಿ ದಳದ ಕಮಾಂಡೆಂಟ್ ಅವರಿಂದ ವಂದನೆ ಸ್ವೀಕರಿಸಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ 2.15ಕ್ಕೆ ಅರಮನೆ ಉತ್ತರ ದ್ವಾರ(ಬಲರಾಮ ದ್ವಾರ)ದಲ್ಲಿ ನಂದಿ ಪೂಜೆ ಮಾಡುವ ಮೂಲಕ ಮೆರವಣಿಗೆಗೆ ನಾಂದಿ ಹಾಡುವರು. ಅರಮನೆಯಲ್ಲಿ ನಿರ್ಮಿಸಿರುವ ವಿಶೇಷ ವೇದಿಕೆಯಿಂದ ಸಂಜೆ 4.45ಕ್ಕೆ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವರು.
ಇಂದಿರಾ ಕ್ಯಾಂಟೀನ್ ಆಕರ್ಷಣೆ
40 ಸ್ತಬ್ಧಚಿತ್ರಗಳು, 40 ಕಲಾತಂಡಗಳು, ಪೊಲೀಸ್ ಪಡೆಗಳು, ಅಶ್ವಾರೋಹಿ ದಳ, ಸಾಲಂಕೃತ ನಿಶಾನೆ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ. ದಸರಾ ಮೆರವಣಿಗೆಯನ್ನು ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಸ್ತಬ್ಧಚಿತಗಳ ಸಾಲಿನಲ್ಲಿ ಬೆಂಗಳೂರು ಜಿಲ್ಲಾ ಪಂಚಾಯಿತಿ ಪ್ರಸ್ತುತ ಪಡಿಸುತ್ತಿರುವ ಇಂದಿರಾ ಕ್ಯಾಂಟೀನ್' ಸಹ ಮುಖ್ಯ ಆಕರ್ಷಣೆಯಾಗಿರಲಿದೆ.
ಪಾಲ್ಗೊಳ್ಳಲಿದ್ದಾರೆ ಯದುವೀರ ಒಡೆಯರ್
ದಸರಾ ಮಹೋತ್ಸವದ ಈ ಅಂತಿಮ ಘಟ್ಟದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಅರಣ್ಯ ಸಚಿವ ಬಿ.ರಮಾನಾಥ್ ರೈ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಪಾಲ್ಗೊಳ್ಳುವರು.
ಅತ್ಯಾಕರ್ಷಕ ಪಂಜಿನ ಕವಾಯತು
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ವರ್ಣರಂಜಿತ ತೆರೆ ಎಳೆಯುವ ಅತ್ಯಾಕರ್ಷಕ ಕಾರ್ಯಕ್ರಮವಾದ ಪಂಜಿನ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬನ್ನಿಮಂಟಪ ಮೈದಾನ ಸಜ್ಜಾಗಿದ್ದು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ನಂತರ, ಭಾರತೀಯ ಸೇನೆಯ ವಿಶೇಷ ವಿಭಾಗದ ಯೋಧರಿಂದ ಮೈನವಿರೇಳಿಸುವ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಲಿದೆ.