ಮೈಸೂರಿನಲ್ಲಿ ಸೋಮಾರಿ ಅಧಿಕಾರಿಗೆ ಡಿಸಿ ನೋಟಿಸ್
ಮೈಸೂರು, ಏಪ್ರಿಲ್ 29: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಆದರೆ ಮೈಸೂರಿನ ಅಧಿಕಾರಿಯೊಬ್ಬ ಕೊರೊನಾ ಕೆಲಸದಲ್ಲೂ ಕಳ್ಳಾಟ ಮಾಡಿದ್ದಾನೆ. ಅಧಿಕಾರಿಗೆ ಮಹತ್ವದ ಜವಾಬ್ದಾರಿ ವಹಿಸಿದ್ದರೂ ಸೋಮಾರಿತನ ಮಾಡಿ ಸಿಕ್ಕಿಬಿದ್ದಿದ್ದಾನೆ.
ಈ ಸೋಮಾರಿತನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಶೋಕಾಸ್ ನೋಟಿಸ್ ನೀಡಿದ್ದಾರೆ.
ಮೈಸೂರಿನ ಕೋವಿಡ್ ಆಸ್ಪತ್ರೆ ರೋಗಿಗಳು, ವೈದ್ಯಕೀಯ ಸಿಬ್ಬಂದಿಗೆ ಆಹಾರ ಪೂರೈಕೆ, ಆಹಾರ ಪದಾರ್ಥಗಳ ಮೂಲಕ ರೋಗ ಹರಡದಂತೆ ವಿಲೇವಾರಿ ಮಾಡುವುದು, ಹೌಸ್ ಕೀಪಿಂಗ್ ಕರ್ತವ್ಯಕ್ಕೆ ಬಿಂದಿಯಾ ನಿಯೋಜನೆಗೊಂಡಿದ್ದರು.
ಆದರೆ ಆಸ್ಪತ್ರೆಯತ್ತ ತಿರುಗಿಯೂ ಈ ಅಧಿಕಾರಿ ನೋಡಿರಲಿಲ್ಲ. ಮಾರ್ಚ್ 30 ರಂದು ಒಮ್ಮೆ ಭೇಟಿ ಕೊಟ್ಟು, 15 ನಿಮಿಷ ಕೆಲಸ ಮಾಡಿದ್ದೇ ಕೊನೆಯದ್ದಾಗಿದೆ.
ತಮಗೆ ವಹಿಸಿದ್ದ ಕೆಲಸ ಮಾಡದೇ ಕರ್ತವ್ಯ ಲೋಪ ಎಸಗಿರುವುದಾಗಿ ನೋಡಲ್ ಅಧಿಕಾರಿ ವರದಿ ಸಲ್ಲಿಸಿದ್ದರು. ಹೀಗಾಗಿ ಬಿಂದಿಯಾಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೋಟಿಸ್ ಕೊಟ್ಟಿದ್ದಾರೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗ್ಯುಲೇಷನ್- 2020, ವಿಪತ್ತು ನಿರ್ವಹಣಾ ಕಾಯ್ದೆ- 2005 ಅಡಿಯಲ್ಲಿ ಶೋಕಾಸ್ ನೋಟಿಸ್ ನೀಡಲಾಗಿದೆ.