ಮೈಸೂರಲ್ಲಿ ಹಂದಿ ಜ್ವರ ಭೀತಿ : ಡಿಸಿಯಿಂದ ಅಧಿಕಾರಿಗಳ ಸಭೆ
ಮೈಸೂರು, ಫೆ. 16: ಹಂದಿ ಜ್ವರಕ್ಕೆ ಓರ್ವ ಮಹಿಳೆ ಬಲಿಯಾದ ಕಾರಣ ಜಿಲ್ಲೆಯಲ್ಲಿ ಆತಂಕಮಯ ವಾತಾವರಣ ಮನೆಮಾಡಿದೆ. ಇದರಿಂದ ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಸಿ. ಶಿಖಾ ಅವರು ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಮೂವರಿಗೆ ಎಚ್1ಎನ್1 ಸೋಂಕು ಕಂಡುಬಂದಿತ್ತು. ಅವರಲ್ಲಿ ಓರ್ವರು ಮೃತಪಟ್ಟಿದ್ದಾರೆ ಎಂದು ಶಿಖಾ ತಿಳಿಸಿದರು.
ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಇಲಾಖೆಗಳು ಶಾಲೆ ಹಾಗೂ ಅಂಗನವಾಡಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮೈಸೂರಿಗೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ ಸ್ವಚ್ಛತೆ ಹಾಗೂ ಆರೋಗ್ಯ ಸುರಕ್ಷತೆಯ ಬಗ್ಗೆ ಒತ್ತು ನೀಡಬೇಕು. ಪ್ರವಾಸಿ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಬೇಕೆಂದು ಸೂಚಿಸಿದರು. [ಏನು ಮಾಡಬೇಕು, ಮಾಡಬಾರದು]
ಸಹಾಯವಾಣಿಗೆ ಕರೆ ಮಾಡಿ : ಎಚ್1ಎನ್1 ಸೋಂಕಿಗೆ ಟ್ಯಾಮಿಫ್ಲೂ ಔಷಧಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಮೊ. 94498 43265 ಅಥವಾ ಸಹಾಯವಾಣಿ 1077 ಮತ್ತು 1056 ಸಂಪರ್ಕಿಸಬಹುದು ಎಂದರು. [ಮೈಸೂರಲ್ಲೇ ಡಯಾಗ್ನೋಸ್ಟಿಕ್ ಪ್ರಯೋಗಾಲಯ ಸ್ಥಾಪಿಸಿ]
ಹಂದಿ ತಿಂದರೆ ರೋಗ ಬರಲ್ಲ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಘಟಕದ ಡಾ. ನಾಗರಾಜು ಮಾತನಾಡಿ, "ಎಚ್1ಎನ್1 ಸೋಂಕು ಸಾಂಕ್ರಾಮಿಕ ರೋಗ. ಕೆಮ್ಮುವಾಗ, ಸೀನುವಾಗ ಹಾಗೂ ಮಾತನಾಡುವಾಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೋಂಕಿತ ವಸ್ತುಗಳನ್ನು ಮುಟ್ಟಿ ನಂತರ ಬಾಯಿ, ಕಣ್ಣು, ಮೂಗು ಮುಟ್ಟಿದರೆ ಈ ರೋಗ ಹರಡುತ್ತದೆ. ಆದರೆ, ಹಂದಿ ಮಾಂಸ ತಿನ್ನುವುದರಿಂದ ಹರಡುವುದಿಲ್ಲ ಎಂದು ತಿಳಿಸಿದರು.
ಅಧಿಕ ಜ್ವರ, ಕೆಮ್ಮು, ಗಂಟಲು ನೋವು ಇರುವ ರೋಗಿಗಳು ವೈದ್ಯರ ಸಲಹೆ ಮೇರೆಗೆ ಟ್ಯಾಮಿಫ್ಲೂ ಔಷಧಿ ತೆಗೆದುಕೊಳ್ಳಬೇಕು. ಎಚ್1ಎನ್1 ಪರೀಕ್ಷೆಯ ಅವಶ್ಯವಿಲ್ಲ. ರೋಗಿಯು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆಯಬಹುದು. ಸಾರ್ವಜನಿಕ ಸ್ಥಳಗಳಿಂದ ದೂರ ಉಳಿಯಬೇಕು ಎಂದರು. [ಬೆಂಗಳೂರಲ್ಲಿ ಔಷಧಿ ಸಿಗುವ ಆಸ್ಪತ್ರೆಗಳು]
ಶಂಕಿತ ರೋಗಿಗಳ ಗಂಟಲು ಕೋಶದ ಮಾದರಿ ಸಂಗ್ರಹಿಸಿ ನಮೂನೆಗಳನ್ನು ಮಣಿಪಾಲದ ಎಂಸಿವಿಆರ್, ಬೆಂಗಳೂರಿನ ನಿಮ್ಹಾನ್ಸ್ ನ್ಯೂರೋ ವೈರಾಲಜಿ ವಿಭಾಗಕ್ಕೆ ಆರ್ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಸರ್ಕಾರದ ಆದೇಶದನ್ವಯ 'ಸಿ' ವರ್ಗದ ರೋಗಿಗಳಿಗೆ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು ಎಂದರು. [ಎಚ್1ಎನ್ 1 ಲಕ್ಷಣಗಳೇನು? ಮುಚ್ಚರಿಕೆ ವಿಧಾನಗಳೆನು?]
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪುಟ್ಟಸ್ವಾಮಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಬಸಪ್ಪ ಇತರರು ಇದ್ದರು.