ದಸರಾ ವೇಳೆಯೇ ಮೈಸೂರು ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ
ಮೈಸೂರು, ಆಗಸ್ಟ್ 22: ನಾಡಹಬ್ಬ ದಸರೆ ವೇಳೆಯೇ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ ಶಂಕರ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪೊಲೀಸರ ವರ್ಗಾವಣೆ: ಸಿದ್ದರಾಮಯ್ಯ, ದಿನೇಶ್ ಸೇರಿ 24 ಮಂದಿಗೆ ಹೈಕೋರ್ಟ್ ನೋಟಿಸ್
ಈಗಾಗಲೇ ಉಸ್ತುವಾರಿ ಸಚಿವರಿಲ್ಲದೇ ಜಿಲ್ಲೆಯಲ್ಲಿ ದಸರಾ ಕಾರ್ಯಕ್ರಮಕ್ಕೆ ಹಿನ್ನಡೆಯುಂಟಾಗಿದೆ. ಈತನ್ಮಧ್ಯೆ ದಸರೆಯ ಕಾಮಗಾರಿಗಳ ರೂಪುರೇಷೆಯ ಸಭೆಯನ್ನು ಸಹ ಕೈಗೊಳ್ಳಲು ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ ಶಂಕರ್ ತಯಾರಿ ನಡೆಸಿದ್ದರು. ಅಲ್ಲದೇ ಗಜಪಯಣದ ಕಾರ್ಯಕ್ರಮದಲ್ಲೂ ಭಾಗವಹಿಸಿ ಯಶಸ್ವಿಯಾಗಿ ನಡೆಸಿದ್ದರು. ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿರುವ ನಿತೀಶ್ ಪಾಟೀಲ್ ಅವರನ್ನು ನೂತನ ಜಿಲ್ಲಾಧಿಕಾರಿಗಳನ್ನಾಗಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಳಿಸಿ ಮಧ್ಯಾಹ್ನದ ವೇಳೆ ಈ ಆದೇಶ ಹೊರಬಿದ್ದಿದೆ.
ಅಭಿರಾಂ ಜಿ ಶಂಕರ್ ಉತ್ತಮ ಆಡಳಿತ ನೀಡಿದ್ದು, ಅವರ ಕಾಯಕವನ್ನು ಮೈಸೂರು ಜನತೆ ಮೆಚ್ಚಿದ್ದರು. ಆದರೆ ಏಕಾಏಕಿ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತವಾಗಿದೆ. ದಸರಾ ಕಾಯಕವನ್ನು ನಡೆಸಬೇಕಾದರೆ ಚಾಕಚಕ್ಯತೆ ಇರಬೇಕು. ಆದರೆ ನಿತೀಶ್ ಅವರಿಗೆ ಅನುಭವ ಕಡಿಮೆ. ಅವರು ತುರ್ತಾಗಿ ಎಲ್ಲಾ ನಿರ್ಧಾರವನ್ನು ಕೈಗೊಳ್ಳಬೇಕು. ಇದು ಕೂಡ ದಸರೆಯ ಕಳೆಗುಂದಲು ಕಾರಣವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.