ಮೈಸೂರು ಸ್ವಚ್ಛತೆಗೆ ಸ್ವತಃ ಕಸ ತೆಗೆದ ಜಿಲ್ಲಾಧಿಕಾರಿ
ಮೈಸೂರು, ಜೂನ್ 25: ಮೈಸೂರು ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ದಿವಸ-2020 ಕಾರ್ಯಕ್ರಮದಲ್ಲಿ ಸ್ವತಃ ಡಿಸಿ ಅಭಿರಾಂ ಜಿ ಶಂಕರ್ ಕಸ ತೆಗೆಯುವ ಮೂಲಕ ಎಲ್ಲರೂ ನಗರವನ್ನು ಸ್ವಚ್ಛವಾಗಿಡುವಂತೆ ಸಂದೇಶ ಸಾರಿದರು.
ಇದೇ ವೇಳೆ ಮಾತನಾಡಿದ ಅವರು, ಮೈಸೂರು ನಗರ ಮತ್ತೊಮ್ಮೆ ಸ್ವಚ್ಛ ನಗರಿ ಎಂಬ ಹೆಸರು ಪಡೆದುಕೊಳ್ಳುವ ನಿಟ್ಟಿನಲ್ಲಿ ನಗರ ಪಾಲಿಕೆ ಸಿಬ್ಬಂದಿಗಳು ವರ್ಷದ ಎಲ್ಲಾ ದಿವಸಗಳಲ್ಲೂ ಪ್ರತಿಯೊಂದು ವಾರ್ಡ್ ಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಬೇಕು ಹಾಗೂ ನಗರದ ಸ್ವಚ್ಛತೆಗೆ ಜನರೂ ಕೈಜೋಡಿಸಬೇಕು ಎಂದರು.
ಸ್ವಚ್ಛನಗರಿ ಪಟ್ಟಕ್ಕೆ ಮತ್ತೊಮ್ಮೆ ಸಜ್ಜಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು
ಪ್ರತಿಯೊಂದು ವಾರ್ಡ್ ಗಳಲ್ಲಿ ಒಂದು ವರ್ಷವಿಡೀ ಪ್ರತಿ ಬುಧವಾರ ಸ್ವಚ್ಛತಾ ಕಾರ್ಯ ನಡೆಸುವ, ಈ ಮೂಲಕ ಮುಂದಿನ ವರ್ಷದ ಹೊತ್ತಿಗೆ ಮೈಸೂರು ನಗರವನ್ನು ಸ್ವಚ್ಛ ನಗರಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿಸುವ ಹಾಗೂ ಸ್ವಚ್ಛತೆಯಿಂದ ಎಲ್ಲರ ಆರೋಗ್ಯ ಕಾಪಾಡುವ ಉದ್ದೇಶವನ್ನು ಸ್ವಚ್ಛತಾ ದಿವಸ ಕಾರ್ಯಕ್ರಮ ಹೊಂದಿದೆ ಎಂದು ಅವರು ತಿಳಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಲು ಕ್ಷಣಗಣನೆ
ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಅವರು, ನಗರವನ್ನು ಕಸಮುಕ್ತವನ್ನಾಗಿಸಲು ಈಗಿನಿಂದಲೇ ಪ್ರತಿಯೊಂದು ವಾರ್ಡ್ ಗಳಲ್ಲಿ ಬುಧವಾರ ಸ್ವಚ್ಛತಾ ದಿವಸ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಾಲಿಕೆಯ ಜೊತೆ ನಗರದ ನಾಗರೀಕರು ಸಹಕರಿಸಿ ಮೈಸೂರನ್ನು ಸ್ವಚ್ಛನಗರಿ ಮಾಡೋಣ ಎಂದು ಕರೆ ನೀಡಿದರು.