ಉಸ್ತುವಾರಿಯಿಲ್ಲದೇ ಮಂಕಾಗುವುದೇ ಈ ಬಾರಿಯ ಮೈಸೂರು ದಸರಾ?
ಮೈಸೂರು, ಆಗಸ್ಟ್ 21: ಮೈಸೂರು ನಗರ ಈಗಾಗಲೇ ನಾಡಹಬ್ಬಕ್ಕೆ ಸಜ್ಜಾಗಬೇಕಿತ್ತು. ಆದರೆ ಆ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಕಾರಣ, ಮೈಸೂರಿನ ಉಸ್ತುವಾರಿ ಸಚಿವರ ಹೆಸರೇ ಇನ್ನೂ ಘೋಷಣೆಯಾಗಿಲ್ಗ.
ದಸರೆಯಲ್ಲಿ ಗಾಂಭೀರ್ಯದ ಹೆಜ್ಜೆಹಾಕಲು ಸಜ್ಜಾಗುತ್ತಿದೆ ಗಜಪಡೆ
ನವರಾತ್ರಿ ವೈಭವಕ್ಕೆ ಬಾಕಿ ಇರುವುದು 39 ದಿನ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿರುವ ನಾಡಹಬ್ಬಕ್ಕೆ ನಾಳೆ ಮೈಸೂರಿಗೆ ಮೊದಲ ಹಂತದ ಗಜಪಡೆ ಆಗಮಿಸಲಿದೆ. ಆದರೆ ಸಚಿವರಿಲ್ಲದ ಕಾರಣ ಕಾರ್ಯಕ್ರಮ ಗೊಂದಲಮಯವಾಗಿದೆ. ಅಲ್ಲದೇ ದಸರೆ ಅಧಿಕೃತ ವೆಬ್ ಸೈಟ್ ಕೂಡ ಇನ್ನೂ ಕಾರ್ಯ ಆರಂಭಿಸಿಲ್ಲ. ದಸರೆಯ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದರೂ ಸ್ಥಳೀಯವಾಗಿ ಒಂದು ಸಭೆಯೂ ನಡೆದಿಲ್ಲ.
ಇನ್ನು ದಸರೆಯ ಉಪಸಮಿತಿ ರಚನೆ, ಹಲವು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ, ಕಲಾವಿದರಿಗೆ ಆಹ್ವಾನ ಸೇರಿದಂತೆ ಪಾಲಿಕೆ, ಮುಡಾ ವತಿಯಿಂದ ಹಲವು ಕಾಮಗಾರಿಗಳು ಮೂಲೆಗುಂಪಾಗಿ ಕೂತಿವೆ. ಕಡಿಮೆ ಕಾಲಾವಕಾಶ ಇರುವುದರಿಂದ ಸಿದ್ಧತೆ ಸಂಬಂಧ ಅಧಿಕಾರಿಗಳಲ್ಲಿಯೂ ಆತಂಕ ಉಂಟಾಗಿದೆ. ಅತ್ತ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಪ್ರವಾಹ ಸಂಬಂಧಿಸಿದ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ ಅಧಿಕಾರಗಳು ಈ ಕಡೆ ಗಮನನೀಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶ್ವಮಟ್ಟದಲ್ಲಿ ದಸರಾ ಹಬ್ಬವನ್ನು ಪ್ರಚಾರ ಮಾಡಲಾಗುವುದೆಂದು ಜಿಲ್ಲಾಡಳಿತ ಹೇಳುತ್ತಿದ್ದರೂ, ಸ್ಥಗಿತಗೊಂಡಿರುವ ವೆಬ್ಸೈಟ್ನತ್ತ ಗಮನ ಹರಿಸದಿರುವುದಕ್ಕೆ ಪ್ರವಾಸೋದ್ಯಮ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಸರೆಗೆ ಪ್ರವಾಸಿಗರನ್ನು ಸೆಳೆಯುವ ಕಾರ್ಯವೂ ನಡೆಯುತ್ತಿಲ್ಲ. ಒಂದೆಡೆ ನೆರೆ, ಮತ್ತೊಂದೆಡೆ ಸರ್ಕಾರ ದಸರೆಯತ್ತ ಗಮನ ಕೊಡದಿರುವುದು, ಇವೆಲ್ಲವನ್ನು ಗಮನಿಸಿದರೆ ನಾಡಹಬ್ಬದ ವೈಭವ ಹಾಗೂ ಪ್ರವಾಸೋದ್ಯಮಕ್ಕೆ ಹೊಡೆತ, ಈ ಎರಡೂ ಸಂಗತಿಗಳು ಎದುರಾಗುವ ಲಕ್ಷಣಗಳಿವೆ.