ದಸರಾ ಗಜಪಡೆ ಇನ್ ರಿಲ್ಯಾಕ್ಸ್ ಮೂಡ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನವೋ ಜನ
ಮೈಸೂರು, ಆಗಸ್ಟ್ 24: ದಸರಾ ಜಂಬೂ ಸವಾರಿಗೆ ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಿರುವ ಆನೆಗಳು ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಇವುಗಳನ್ನು ನೋಡಿ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜನ ಇದೀಗ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ದಸರಾಗೆ ಬರಬೇಕಿದ್ದ ರೋಹಿತ್ ಆನೆಯ ಪುಂಡಾಟ!
ಬಿಗಿ ಭದ್ರತೆಯಲ್ಲಿ ಆನೆಗಳನ್ನು ಇರಿಸಲಾಗಿದ್ದು, ಅಂಬಾರಿ ಆನೆ ಅರ್ಜುನನ ಮೇಲೆ ವಿಶೇಷ ಕಣ್ಗಾವಲಿದೆ. ಈ ಆನೆಗಳನ್ನು ನೋಡಲು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ತಂಡೋಪತಂಡವಾಗಿ ಅರಣ್ಯ ಭವನಕ್ಕೆ ಜನರು ಆಗಮಿಸುತ್ತಿದ್ದಾರೆ. ಹಾಗಾಗಿ ಆನೆಗಳ ಬಳಿ ಮಾವುತರು ಹಾಗೂ ಕಾವಾಡಿಗಳು ಕಡ್ಡಾಯವಾಗಿ ಇರುವಂತೆ ಸೂಚನೆ ಸಹ ನೀಡಲಾಗಿದೆ.
ಆನೆಗಳ ಆಹಾರಕ್ಕಾಗಿ ಕುಸುರೆ, ಹಸಿ ಹುಲ್ಲು, ಒಣಹುಲ್ಲು, ಆಲದ ಸೊಪ್ಪು ನೀಡಲಾಗುತ್ತಿದೆ. ಆನೆಗಳ ಬಳಿ ಯಾರೂ ಹೋಗದಂತೆ ನೋಡಿಕೊಳ್ಳಲು ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಗಾರ್ಡ್ ಹಾಗೂ ವಾಚರ್ ಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ದಸರಾ ಆನೆಗಳನ್ನು ಪಶುವೈದ್ಯ ಡಾ.ಡಿ.ಎನ್.ನಾಗರಾಜು ಪ್ರತಿನಿತ್ಯ ತಪಾಸಣೆ ನಡೆಸುತ್ತಿದ್ದಾರೆ. ಈ ಆನೆಗಳ ಲದ್ದಿಯನ್ನು ಸಹ ದಿನವೂ ಪರೀಕ್ಷಿಸಲಾಗುತ್ತದೆ. ಈ ವೇಳೆ ಡಾ.ಡಿ.ಎನ್.ನಾಗರಾಜು ಮಾತನಾಡಿ, "ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿವೆ. ಅರಮನೆಗೆ ಕರೆದೊಯ್ದ ಬಳಿಕ ತಾಲೀಮು ಆರಂಭಿಸುತ್ತೇವೆ. ಅವುಗಳ ಆರೋಗ್ಯ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.