ಮೈಸೂರು ದಸರಾ: ಯದುವೀರ್ ಖಾಸಗಿ ದರ್ಬಾರ್ ವಿಶೇಷ ಕ್ಷಣಗಳು
ಮೈಸೂರು, ಸೆಪ್ಟೆಂಬರ್ 21: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನ ಸಿಕ್ಕಿದೆ. ಅರಮನೆಯಲ್ಲಿ ರಾಜವೈಭವದ ಖಾಸಗಿ ದರ್ಬಾರ್ ಅನ್ನು ಗುರುವಾರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರಂಭಿಸಿದರು.
In Pics : ಖಾಸಗಿ ದರ್ಬಾರ್ ನಲ್ಲಿ ಯದುವೀರರಿಗೆ ತ್ರಿಷಿಕಾರಿಂದ ಪೂಜೆ
ನವರಾತ್ರಿ ಸಂದರ್ಭದಲ್ಲಿ ಒಡೆಯರ್ ಮನೆತನದ ರಾಜ ಪ್ರತಿ ದಿನ ಸರಿ ಸುಮಾರು ಮುಕ್ಕಾಲು ಗಂಟೆ ಈ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುವುದು ವಾಡಿಕೆ. ಅದರಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬೆಳಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ, ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿದರು. ಆ ನಂತರ ಮಂಗಳಸ್ನಾನ ಮಾಡಿಸಲಾಯಿತು.
ಮಹಾರಾಜರ ಖಾಸಗಿ ದರ್ಬಾರಿನಲ್ಲಿ ಏನು ನಡೆಯುತ್ತೆ?
ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಮಾಡಿದರು. ಆ ನಂತರ ಯದುವೀರ್ ಪೂಜೆಗೆ ಅಣಿಯಾದರು. ಮೊದಲಿಗೆ ಚಾಮುಂಡಿ ತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ, ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿದರು. ಬೆಳಗ್ಗೆ 7.55 ರಿಂದ 8.15ಕ್ಕೆ ಸಿಂಹಾಸನ ಸಿದ್ಧತಾ ಕಾರ್ಯ ಪೂರ್ಣಗೊಂಡಿತು. ಬಳಿಕ 8.20 ರಿಂದ 9.10ಕ್ಕೆ ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸಿದರು.
ನವದುರ್ಗೆಯರ ಪೂಜೆ
ಬ್ರಹ್ಮಿಣಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಮಹೇಶ್ವರಿ, ದುರ್ಗಾ, ಕಾಳಿ, ಚಂಡಿಕೆ ಹೀಗೆ ದುರ್ಗೆಯ ಸ್ವರೂಪಗಳನ್ನು ಆರಾಧಿಸಿದರು. ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವ-ದೇವಿಯರ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸಿದರು. ಆ ನಂತರ ದೇವೀ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ಮಾಡಿದರು. ಗಣಪತಿ, ಅಷ್ಟದಿಕ್ಪಾಲಕ, ನವಗ್ರಹ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆ ನೆರವೇರಿಸಿದರು.
ರಾಜ ಪೋಷಾಕು ಧರಿಸಿದ್ದ ಯದುವೀರ್
ಸ್ವರ್ಣ ವರ್ಣದ ನಿಲುವಂಗಿ, ಕಡು ನೀಲಿ ವರ್ಣದ ಪೈಜಾಮಾ, ಮುತ್ತಿನ ಮಣಿ ಜೋಡಿಸಿರುವ ನೀಲಿ ಬಣ್ಣದ ರಾಜಪೇಟ, ರಾಜ ಲಾಂಛನವಾದ ಗಂಡಭೇರುಂಡ ಚಿನ್ನದ ಸರ ಇತರ ಆಭರಣಗಳು ಇತರ ರಾಜಪೋಷಾಕು ಧರಿಸಿದ ಯದುವೀರ್ ಆತ್ಮವಿಲಾಸ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಖಾಸಗಿ ದರ್ಬಾರ್ ಪ್ರವೇಶಿಸಿದರು.
ಬಲಗೈ ಎತ್ತಿ ಸಲ್ಯೂಟ್
ಮೂವತ್ತೆರಳು ಕಳಶಗಳ ಪೂಜೆ ನೆರವೇರಿಸಿ, ಸಿಂಹಾಸನ ಪೂಜೆ ಮಾಡಿ, ರಾಜ ಗಾಂಭೀರ್ಯದಿಂದ ರತ್ನಸಿಂಹಾಸನ ಏರಿದ ಬಳಿಕ ಬಲಗೈ ಎತ್ತಿ ಸಲ್ಯೂಟ್ ಮಾಡಿ, ಗತ್ತಿನಿಂದ ಕೂತು ದರ್ಬಾರ್ ಆರಂಭಿಸಿದರು. ಅದಕ್ಕೂ ಮುನ್ನ ಸಿಂಹಾಸನಕ್ಕೆ ನಮಸ್ಕರಿಸಿದರು.
ವಿವಿಧ ದೇವಾಲಯಗಳ ಪ್ರಸಾದ ಸ್ವೀಕಾರ
ಅರಮನೆಯ ಆವರಣದಲ್ಲಿರುವ ಎಲ್ಲ ದೇವಾಲಯಗಳು, ಚಾಮುಂಡೇಶ್ವರಿ ದೇವಾಲಯ, ನಗರದ ಕೆಲವು ಪ್ರಮುಖ ದೇವಾಲಯಗಳು, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಶೃಂಗೇರಿಯ ಶಾರದಾಪೀಠ, ಮೇಲುಕೋಟೆಯ ಚೆಲುವನಾರಾಯಣ ಸೇರಿದಂತೆ ತಮಿಳುನಾಡಿನ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದಿದ್ದ ತೀರ್ಥ- ಪ್ರಸಾದವನ್ನು ಸ್ವೀಕರಿಸಿದರು. ಆ ನಂತರ ದರ್ಬಾರ್ ಆರಂಭಿಸಿ ಮೈಸೂರು, ರಾಜ್ಯ, ದೇಶದ ಬಗ್ಗೆ ಕ್ಷೇಮ ಸಮಾಚಾರದ ಮಾಹಿತಿ ಪಡೆದರು.
ಬಹುಪರಾಕ್, ಜಯ ಘೋಷಣೆ
ಕರ್ನಾಟಕ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಕಾಯೋ ಶ್ರೀ ಗೌರಿ ಗೀತೆಯನ್ನು ನುಡಿಸಿ ಗೌರವ ಸಲ್ಲಿಸಿದರು. ರಾಜಾಧಿರಾಜ, ರಾಜ ಮಾರ್ತಾಂಡ, ಶ್ರೀಮನ್ಮಹಾರಾಜ, ಬಹುಪರಾಕ್ ಜಯಘೋಷಗಳು ಮೊಳಗಿದವು. ಬಳಿಕ ದರ್ಬಾರ್ ಮುಗಿಸಲು ಎದ್ದು ನಿಂತು ಸಲ್ಯೂಟ್ ಮಾಡಿದರು. ಈ ವೇಳೆ ಮತ್ತೆ ಕಾಯೋ ಶ್ರೀ ಗೌರಿ ಗೀತೆ ಮೊಳಗಿತು. ಹೀಗೆ ನವರಾತ್ರಿಯ ಹತ್ತೂ ದಿನವು ಅರಮನೆಯಲ್ಲಿ ರಾಜ ವೈಭೋಗ ನಡೆಯಲಿದೆ.
ವಿಜಯ ದಶಮಿವರೆಗೆ ಖಾಸಗಿ ದರ್ಬಾರ್
ಯದುವೀರ್ ತಮ್ಮ ಪತ್ನಿ ತ್ರಿಷಿಕಾ ಅವರಿಗೆ ದೇವರ ಪ್ರಸಾದ ನೀಡಿದರು. ದರ್ಬಾರ್ ಮುಗಿದ ಮೇಲೆ ಯದುವೀರ್ ಅವರಿಗೆ ತ್ರಿಷಿಕಾ ಆರತಿ ಮಾಡಿದರು. ಆ ನಂತರ ಯದುವೀರ್ ಕುಲದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿದರು. ವಿಜಯ ದಶಮಿವರೆಗೂ ಯದುವೀರ್ ಖಾಸಗಿ ದರ್ಬಾರ್ ನಡೆಸುವರು.