10 ದಿನದೊಳಗೆ ತಯಾರಾಗಲಿದೆ ದ್ರೋಣನಿಲ್ಲದ ಮೈಸೂರು ದಸರೆ ಗಜಪಡೆ ಪಟ್ಟಿ
ಮೈಸೂರು, ಜುಲೈ 15: ವಿಶ್ವವಿಖ್ಯಾತ ಮೈಸೂರು ದಸರಾ ಆಯೋಜನೆಗಾಗಿ ಸಿದ್ಧತೆ ನಡೆಯುತ್ತಿದೆ. ಅದರ ಭಾಗವಾಗಿ ಮುಂದಿನ 10 ದಿನಗಳೊಳಗೆ ಗಜಪಡೆಯ ಆಯ್ಕೆ ಪಟ್ಟಿಯನ್ನು ತಯಾರು ಮಾಡಲು ಈಗಾಗಲೇ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಪ್ರತಿ ವರ್ಷ ಆಗಸ್ಟ್ 15ರಿಂದ ಆರಂಭಗೊಂಡು ಇಂತಿಷ್ಟು ದಿನದೊಳಗೆ ಗಜಪಡೆಯನ್ನು ಮೈಸೂರಿಗೆ ಸ್ವಾಗತಿಸುವ ಸಂಪ್ರದಾಯ ಇದೆ.
ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಪ್ರವಾಹದ ಕಾರಣದಿಂದಾಗಿ ಜಿಲ್ಲಾಡಳಿತ ದಸರಾ ಸಿದ್ಧತೆ ನಡೆಸುವಲ್ಲಿ ವಿಳಂಬವಾಗಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಸಮಸ್ಯೆಗಳೂ ಇಲ್ಲ. ಆದ್ದರಿಂದ ಗಜಪಡೆಯನ್ನು ಕರೆತರಲು ಅರಣ್ಯ ಇಲಾಖೆ ಈಗಾಗಲೇ ಪೂರ್ವ ಸಿದ್ಧತೆ ನಡೆಸುತ್ತಿದೆ.
ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು
ಅಲ್ಲದೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮೈಸೂರು ಭಾಗದ ಅಧಿಕಾರಿಗಳಿಗೆ ಗಜಪಡೆಯ ಆಯ್ಕೆ ಪಟ್ಟಿಯನ್ನು ಕಳಿಸುವಂತೆ ಈಗಾಗಲೇ ಸೂಚನೆ ಸಹ ನೀಡಿದ್ದಾರೆ. ಈ ಕಾರಣಕ್ಕೆ ಮಾವುತ ಮತ್ತು ಕಾವಾಡಿಗಳಿಗೆ ದಸರಾ ಆನೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಬಳ್ಳೆ, ದುಬಾರೆ, ಬಂಡೀಪುರ ಶಿಬಿರ ಸೇರಿ ಇನ್ನೂ ಹಲವೆಡೆ ತಪಾಸಣೆ ನಡೆಸಲಿದ್ದಾರೆ.
ಆನೆಗಳ ಸಾಮರ್ಥ್ಯ, ಆರೋಗ್ಯ ಸೇರಿದಂತೆ ವಿವಿಧ ಅಂಶಗಳನ್ನು ಗಮನಿಸಿ ದಸರಾ ಉತ್ಸವಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಕಳೆದ ಬಾರಿಯ ಗಜಪಡೆಯ ಪಟ್ಟಿಯನ್ನು ಗಮನಿಸಿದರೆ: ಅರ್ಜುನ, ಅಭಿಮನ್ಯು, ಗೋಪಿ, ಪ್ರಶಾಂತ, ಧನಂಜಯ, ಗಜೇಂದ್ರ, ಬಲರಾಮ, ಗೋಪಾಲಸ್ವಾಮಿ, ವರಲಕ್ಷ್ಮಿ, ವಿಜಯಾ, ಕಾವೇರಿ, ಚೈತ್ರಾ, ಹರ್ಷ ಸೇರಿ ಒಟ್ಟು ಹದಿನೈದು ಆನೆಗಳ ಹೆಸರನ್ನು ಕಳುಹಿಸಲಾಗಿತ್ತು.
ಇವರೇ ಮೈಸೂರು ದಸರಾ ಜಂಬೂಸವಾರಿಯ ತೆರೆಮರೆಯ ಹೀರೋ
ಆದರೆ, ಕೊನೆಯಲ್ಲಿ ಹಿರಿಯ ಅಧಿಕಾರಿಗಳು ಗಜೇಂದ್ರ, ಗೋಪಾಲಸ್ವಾಮಿ ಹಾಗೂ ಹರ್ಷ ಹೊರತಾಗಿ ಉಳಿದ ಆನೆಗಳನ್ನು ಆಯ್ಕೆ ಮಾಡಿದ್ದರು. ಇನ್ನು ಗಜಪಡೆಯಲ್ಲಿ ವಯಸ್ಸಾದ ಆನೆಗಳು ಹೆಚ್ಚಾದ ಕಾರಣ ಇವುಗಳ ನಂತರದ ಎರಡನೆಯ ಹಂತದ ಗಜಪಡೆಯನ್ನು ತಯಾರಿಸಲು ನಿರ್ಧಾರ ಮಾಡಲಾಗಿತ್ತು. ಅದರಂತೆ ಕಳೆದ ಬಾರಿ ಧನಂಜಯನಿಗೆ ಅವಕಾಶ ನೀಡಲಾಗಿತ್ತು. ಅದನ್ನು ಆತ ಸಮರ್ಥವಾಗಿ ನಿಭಾಯಿಸಿದ್ದ ಕೂಡ.
ದ್ರೋಣ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬದಲಿ ಆನೆಗಾಗಿ ಅರಣ್ಯ ಇಲಾಖೆ ಹುಡುಕಾಟ ನಡೆಸಿದೆ. ಯಾವ ಆನೆಯನ್ನು 17 ಆನೆಗಳ ಪಟ್ಟಿಗೆ ಸೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.