ಮೈಸೂರು ದಸರಾ: ಗೋಪಿ ಆನೆಗೂ ಮರದ ಅಂಬಾರಿ ಹೊರಿಸಿ ತಾಲೀಮು
ಮೈಸೂರು, ಅಕ್ಟೋಬರ್ 21: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕೆಲವೇ ದಿನಗಳು ಬಾಕಿಯಿದ್ದು, ಸರಳ ದಸರಾ ಆಚರಣೆಗೆ ಸಕಲ ಸಿದ್ಥತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯ ಗಜಪಡೆಗೂ ಸೂಕ್ತ ತರಬೇತಿ ನೀಡಲಾಗುತಿದ್ದು, ಅ.22 ರಿಂದ ಮೂರು ದಿನಗಳ ಕಾಲ ಜಂಬೂಸವಾರಿ ತಾಲೀಮು ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಅರಮನೆ ಆವರಣದಲ್ಲಿ ತಾಲೀಮು ಆರಂಭವಾಗಲಿದ್ದು, ಇದೊಂದು ರೀತಿಯ ಅಣಕು ಜಂಬೂ ಸವಾರಿಯಂತೆ ಇದೆ. ಗಾಡ್ ಆಫ್ ಆನರ್, ಪುಷ್ಪಾರ್ಚನೆ ಸೇರಿ ಪ್ರಮುಖ ಕಾರ್ಯಕ್ರಮಗಳ ರಿಹರ್ಸಲ್ ಮಾಡಲಾಗುವುದು. ಅಭಿಮನ್ಯುಗೆ ಈಗಾಗಲೇ ಮರದ ಅಂಬಾರಿ ಹೊರಿಸಿ ಜಂಬೂಸವಾರಿ ತಾಲೀಮು ನೀಡಲಾಗುತ್ತಿದೆ.
ಮೈಸೂರು ದಸರಾ: ಜಂಬೂಸವಾರಿಗೆ ಕೊನೆಯ ಹಂತದ ತಾಲೀಮು
ಗಜಪಡೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಗುತ್ತಿದ್ದು, ಮೊದಲ ಬಾರಿಗೆ ಗೋಪಿ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಯಿತು.
ಕ್ಯಾಪ್ಟನ್ ಅಭಿಮನ್ಯುಗೆ ಪರ್ಯಾಯವಾಗಿ ಗೋಪಿಗೂ ತಾಲೀಮು ನೀಡಲಾಗುತ್ತಿದ್ದು, ಗೋಪಿ ಯಶಸ್ವಿಯಾಗಿ ಮರದ ಅಂಬಾರಿ ಹೊತ್ತು ಸಾಗಿದ್ದಾನೆ. ಬುಧವಾರ ಬೆಳಿಗ್ಗೆ 280 ಕೆ.ಜಿ ತೂಕದ ಮರದ ಅಂಬಾರಿಯಲ್ಲಿ 300 ಕೆ.ಜಿ ಮರಳು ಇರಿಸಿ ತಾಲೀಮು ನೀಡಲಾಯಿತು.
ಈ ಬಾರಿ ಸರಳವಾಗಿ ಹಾಗೂ ಸಾಂಪ್ರದಾಯಕವಾಗಿ ದಸರಾ ಆಚರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದು, ಕೇವಲ 5 ಆನೆಗಳನ್ನು ಬಳಸಿಕೊಂಡು ದಸರಾ ಜಂಬೂ ಸವಾರಿ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ.
ಈಗಾಗಲೇ ಜಂಬೂ ಸವಾರಿಯ ವೇಳೆ ಕುಶಾಲತೋಪು ಸಿಡಿಸುವ ಕಾರ್ಯಕ್ಕೂ ತಾಲೀಮು ನಡೆಸಲಾಗಿದೆ. ಅಭಿಮನ್ಯು ನೇತೃತ್ವದ ಐದು ಆನೆಗಳಿಗೆ ಜಂಬೂ ಸವಾರಿ ತಾಲೀಮು ಆರಂಭಿಸಿದ್ದು, ಮರಳು ಮೂಟೆ ಹೊರಿಸಿ ತಾಲೀಮು ಮಾಡಿಸಲಾಗುತ್ತಿದೆ.