ಮೈಸೂರು ದಸರಾ ಸಂಭ್ರಮ: ತೂಕ ಪರೀಕ್ಷೆಯಲ್ಲಿ ಯಾವ ಆನೆ ಬಲಶಾಲಿ?
ಮೈಸೂರು, ಆಗಸ್ಟ್, 11: ಈ ಬಾರಿ ಮೈಸೂರು ದಸರಾ ಈಗಲೇ ಕಳೆಗಟ್ಟುತ್ತಿದ್ದು, ಅಂಬಾರಿ ಹೊರುವ ಆನೆ ಸಹಿತ 9 ಆನೆಗಳು ಈಗಾಗಲೇ ಅರಮನೆ ಪ್ರವೇಶಿಸಿವೆ. ಈ ಎಲ್ಲಾ ಆನೆಗಳ ತೂಕ ಮತ್ತು ಆರೋಗ್ಯ ಪರೀಕ್ಷೆ ನಡೆಸಲಾಯಿತು.
ಮಾಜಿ ಕ್ಯಾಪ್ಟನ್ ಅರ್ಜುನ ಆನೆ ತೂಕ ಹೆಚ್ಚಿಸಿಕೊಂಡಿದ್ದು, ಬರೋಬ್ಬರಿ 5660 ಕೆ.ಜಿ ತೂಗುತ್ತಿದ್ದಾನೆ. ಗುರುವಾರ ಬೆಳಗ್ಗೆ ಎಲ್ಲಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳ ತೂಕ ಗಣನೀಯವಾಗಿ ಹೆಚ್ಚಳವಾಗಿದೆ.
ಮೈಸೂರು ವಿಶ್ವವಿದ್ಯಾಲಯ ಟಾಪರ್ಗಳಿಗೆ ಸಿದ್ದರಾಮಯ್ಯ ಹೆಸರಿನ ಚಿನ್ನದ ಪದಕ
ಆನೆಗಳ ತೂಕ:
ಮೈಸೂರಿಗೆ ಮೊದಲ ತಂಡದಲ್ಲಿ ಆಗಮಿಸಿರುವ 9 ಆನೆಗಳಲ್ಲಿ ಈ ಬಾರಿಯೂ ಮಾಜಿ ಕ್ಯಾಪ್ಟನ್ ಅರ್ಜನನೇ ಬಲಶಾಲಿ ಆಗಿದ್ದಾನೆ. ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ವೇವ್ ಬ್ರಿಡ್ಜ್ನಲ್ಲಿ ತೂಕ ಹಾಕುವ ಪ್ರಕ್ರಿಯೆ ನಡೆಯಿತು. 5,600 ಕೆ.ಜಿ. ತೂಗುವ ಮೂಲಕ ಅರ್ಜುನ ಬಲಶಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ದಸರಾ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು 4,770 ಕೆ.ಜಿ ತೂಕ ಇದ್ದಾನೆ. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಿರುವ ಮಹೇಂದ್ರ 4,250 ಕೆ.ಜಿ, ಲಕ್ಷ್ಮೀ 2,920 ಕೆ.ಜಿ ಇದ್ದಾಳೆ. ಇನ್ನು ಚೈತ್ರ 3,050 ಕೆ.ಜಿ, ಭೀಮ 3,920 ಕೆ.ಜಿ, ಧನಂಜಯ 4,810 ಕೆ.ಜಿ, ಗೋಪಾಲಸ್ವಾಮಿ 5,140 ಕೆ.ಜಿ ಇದ್ದರೆ ಕಾವೇರಿ 3,100 ಕೆ.ಜಿ ತೂಕ ಇದ್ದಾಳೆ.
ಆನೆಗಳಿಗೆ ಆಹಾರದ ವ್ಯವಸ್ಥೆ:
ಆನೆಗಳಿಗೆ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಅರಮನೆ ಒಳಗಡೆ ತಾಲೀಮು ನಡೆಯುಲಿದೆ. ಆಗಸ್ಟ್ 14ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ. ಆನೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳುವುದು ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುದರೊಳಗಡೆ ಈ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ ಎಂದು ಡಿಸಿಎ ವಿ.ಕರಿಕಾಳನ್ ತಿಳಿಸಿದರು.
ಕಳೆಗಟ್ಟುತ್ತಿರುವ ನಾಡಹಬ್ಬ ದಸರಾ:
ಇನ್ನು ಎರಡನೇ ತಂಡದ ಆನೆಗಳು ಸೆಪ್ಟೆಂಬರ್ನಲ್ಲಿ ಆಗಮಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ 26 ರಂದು ದಸರಾ ಪ್ರಾರಂಭವಾಗಲಿದೆ. ಜಂಬೂ ಸವಾರಿ ಅಕ್ಟೋಬರ್ 5, ವಿಜಯದಶಮಿಯಂದು ನಡೆಯಲಿದೆ. ಅಲ್ಲಿಯವರೆಗೆ ಸುಮಾರು ಎರಡು ತಿಂಗಳುಗಳ ಕಾಲ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಹೀಗೆ ಮೈಸೂರಲ್ಲಿ ದಸರಾ ಕಳೆಗಟ್ಟುತ್ತಿದ್ದು, ಈಗಾಗಲೇ ಕಾಡಿನಿಂದ ನಾಡಿನೆಡೆಗೆ ಗಜಪಡೆ ಆಗಮಿಸಿ ಅಂಬಾವಿಲಾಸ ಅರಮನೆಯನ್ನು ಪ್ರವೇಶಿಸಿವೆ. ಗಜಪಯಣದ ಮೂಲಕ ದಸರಾ ಮಹೋತ್ಸವಕ್ಕೆ ಆಗಮಿಸುವ ಆನೆಗಳಿಗೆ ತಾಲೀಮು ಹಾಗೂ ವಿಶೇಷ ಆಹಾರ ನೀಡುವ ಕಾರ್ಯ ಆರಂಭಿಸುವ ಮುನ್ನ ಹೀಗೆ ತೂಕ ಹಾಕಲಾಗುತ್ತದೆ. ಈ ಪ್ರಕ್ರಿಯೆ ಒಂದು ಎರಡು ವರ್ಷಗಳಿಂದ ಬಂದಿರುವುದಲ್ಲ, ಬದಲಾಗಿ ಇದು ತಲಾ ತಲಾಂತರಗಳಿಂದ ಸಂಪ್ರದಾಯವಾಗಿ ಬೆಳೆದು ಬಂದಿದೆ.
ಆನೆ, ಮಾವುತರಿಗೆ ಸೌಲಭ್ಯಗಳು:
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆ, ಮಾವುತರಿಗೆ 1.65 ಕೋಟಿ ರೂಪಾಯಿ ಮೌಲ್ಯದ ವಿಮೆ ಮಾಡಿಸಲಾಗುತ್ತಿದೆ. ಮೈಸೂರು ಜಿಲ್ಲಾಡಳಿತದಿಂದ ಇನ್ಷುರೆನ್ಸ್ ಪಾಲಿಸಿಯನ್ನು ಮಾಡಿಸಲಾಗಿದೆ. ಆಗಸ್ಟ್ 7 ರಿಂದ ಅಕ್ಟೋಬರ್ 8ರವರಗೆ ಪಾಲಿಸಿ ಜಾರಿಯಲ್ಲಿ ಇರಲಿದೆ. ದಸರಾದಲ್ಲಿ ಭಾಗಿ ಆಗುವ 14 ಆನೆಗಳು ಈ ವಿಮೆ ವ್ಯಾಪ್ತಿಯಲ್ಲಿ ಸೇರಲಿವೆ. ಆನೆಗಳಿಗೆ 59 ಲಕ್ಷ ರೂಪಾಯಿ ಪಾಲಿಸಿ ಹಾಗೂ ಕಾವಾಡಿ, ಮಾವುತರಿಗೆ 28 ಲಕ್ಷ ರೂಪಾಯಿ ವಿಮೆ ಮೊತ್ತ ಇರಲಿದೆ. ದಸರಾ ವೇಳೆ ಆಸ್ತಿ ಹಾನಿಯಾದರೆ 50 ಲಕ್ಷ ರೂಪಾಯಿ ವಿಮೆ ಸಿಗಲಿದೆ. ಇದಕ್ಕಾಗಿ 49,990 ರೂಪಾಯಿ ಪಾಲಿಸಿ ಮೊತ್ತವನ್ನು ಜಿಲ್ಲಾಡಳಿತ ಪಾವತಿಸಿದೆ. ಹೀಗೆ ಮೈಸೂರು ದಸರಾ ಉತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಇಲ್ಲಿ ಇನ್ನು ಹಲವಾರು ವಿಶೇಷತೆಗಳನ್ನು ಕಾಣಬಹುದಾಗಿದೆ.