ದಸರಾ ಏರ್ ಶೋನಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಆತಂಕ
ಮೈಸೂರು, ಅಕ್ಟೋಬರ್ 02: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಏರ್ ಶೋನಲ್ಲಿ ಭಾಗವಹಿಸಬೇಕಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿರುವ ಘಟನೆ ನಡೆದಿದೆ.
ಮೈಸೂರು ದಸರಾ ಅಂಗವಾಗಿ ನಗರದ ಬನ್ನಿಮಂಟಪದಲ್ಲಿ ಏರ್ ಶೋ ನಡೆಯಬೇಕಿತ್ತು. ಈ ನಡುವೆ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಶ್ರೀರಂಗಪಟ್ಟಣದ ಸಮೀಪ ಅರಕೆರೆ ಬೋರೆ ಬಳಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ತಾಂತ್ರಿಕ ದೋಷ ಹಿನ್ನೆಲೆ ಸೇನಾ ಹೆಲಿಕಾಪ್ಟರ್ ತುರ್ತು ಲ್ಯಾಂಡ್ ಆಗಿದೆ.
ತುರ್ತು ಭೂಸ್ಪರ್ಶದ ಬಳಿಕ ಏರ್ ಫೋರ್ಸ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೆಲಿಕಾಪ್ಟರ್ ಹೊರಟಿತ್ತು. ಘಟನೆ ವೇಳೆ ಅದೃಷ್ಟವಶಾತ್ ಹೆಲಿಕಾಪ್ಟರ್ ನಲ್ಲಿದ್ದ ಸೇನಾ ಸಿಬ್ಬಂದಿ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದು ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಮೈನವಿರೇಳಿಸಿದ ಸಾಹಸ
ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಇಂಡಿಯನ್ ಏರ್ ಫೋರ್ಸ್ ಸಹಯೋಗದಲ್ಲಿ ನಗರದ ಬನ್ನಿಮಂಟಪ ಮೈದಾನದಲ್ಲಿ ನಡೆದ ಏರ್ ಶೋ ಕಾರ್ಯಕ್ರಮ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಭಾರತೀಯ ವಾಯು ಪಡೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಹೆಲಿಕ್ಯಾಪ್ಟರ್ ಮೂಲಕ ಗುಲಾಬಿ ಹೂಗಳ ಪಕಳೆಗಳನ್ನು ಮೈದಾನಕ್ಕೆ ಚೆಲ್ಲುತ್ತಾ ಮೈದಾನದ ಸುತ್ತ ಪ್ರದರ್ಶನ ಮಾಡುವ ಮೂಲಕ ಪೆಟಲ್ ರಾಪಿಂಗ್ ಮಾಡಲಾಯಿತು.
ನಂತರ ಭಾರತೀಯ ಯುದ್ಧ ವಿಮಾನದ ಮೂಲಕ ಯುದ್ಧದ ಸಮಯದಲ್ಲಿ ವಾಯುಪಡೆ ಹೇಗೆ ಕಾರ್ಯಾಚರಣೆ ಮಾಡಲಿದೆ ಎಂಬುದನ್ನು ತೋರಿಸುವ ಸಲುವಾಗಿ ಆಪರೇಷನ್ ಕಾರ್ಯಾಚರಣೆ ಮಾಡಿ ಯುದ್ಧ ವಿಮಾನದಿಂದ 6 ಜನ ಯೋಧರು ರೋಪ್ ಮೂಲಕ ಮೈದಾನಕ್ಕಿಳಿಯುವ ದೃಶ್ಯ ಮೈನವಿರೇಳಿಸಿತು.
ಅಂತಿಮ ಹಂತವಾಗಿ ಸುಮಾರು 7 ಸಾವಿರ ಅಡಿಗಳಿಂದ ವಾಯುಸೇನೆಯ 10 ವೀರರು ಪ್ಯಾರಾಚೂಟ್ ಮೂಲಕ ಮೈದಾನಕ್ಕೆ ಧುಮುಕಿದ ಸ್ಕೈ ಡೈವಿಂಗ್ ಸಾಹಸ ದೃಶ್ಯ ಮಾತ್ರ ನೆರೆದಿದ್ದ ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸಿತ್ತು.