ಮೈಸೂರು ದಸರಾ: ಜಂಬೂಸವಾರಿಗೆ ಕೊನೆಯ ಹಂತದ ತಾಲೀಮು
ಮೈಸೂರು, ಅಕ್ಟೋಬರ್ 18: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಅಭಿಮನ್ಯುವಿಗೆ ಕೊನೆಯ ಹಂತದ ತಾಲೀಮನ್ನು ಭಾನುವಾರ ನಡೆಸಲಾಯಿತು.
ಅಭಿಮನ್ಯುವಿಗೆ ಮರದ ಅಂಬಾರಿಯಲ್ಲಿ 600 ಕೆ.ಜಿ ತೂಕದ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು. ಈ ಬಾರಿ ಜಂಬೂಸವಾರಿ ಮೆರವಣಿಗೆ ಅರಮನೆ ಒಳಗೆ ಮಾತ್ರ ಸೀಮಿತವಾಗಿರುವ ಕಾರಣ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗಿದೆ.
ಖಾಸಗಿ ದರ್ಬಾರ್ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ ಬದಲಾವಣೆ ಏನು ಗೊತ್ತಾ?
ಈ ಮೊದಲಿನ ತಾಲೀಮಿನನಲ್ಲಿ 280 ಮತ್ತು 300 ಕೆ.ಜಿ ಮರಳಿನ ಮೂಟೆ ಹೊರೆಸಿ ತಾಲೀಮು ನೀಡಲಾಗಿತ್ತು. ಭಾನುವಾರ ಮರದ ಅಂಬಾರಿಯಲ್ಲಿ 600 ಕೆ.ಜಿ ತೂಕದ ಮರಳಿನ ಮೂಟೆಗಳನ್ನಿಟ್ಟು ತಾಲೀಮು ನಡೆಸಲಾಯಿತು. ಜಂಬೂ ಸವಾರಿ ಮೆರವಣಿಗೆ ಹಿಂದಿನ ದಿನದ ತನಕ ಇದೇ ಮಾದರಿಯಲ್ಲಿ ತಾಲೀಮು ನೀಡಲಾಗುತ್ತದೆ.
ಈ ಬಾರಿ ಸರಳವಾಗಿ ಹಾಗೂ ಸಾಂಪ್ರದಾಯಕವಾಗಿ ದಸರಾ ಆಚರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದು, ಕೇವಲ 5 ಆನೆಗಳನ್ನು ಬಳಸಿಕೊಂಡು ದಸರಾ ಜಂಬೂ ಸವಾರಿ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ.
ಈಗಾಗಲೇ ಜಂಬೂ ಸವಾರಿಯ ವೇಳೆ ಕುಶಾಲತೋಪು ಸಿಡಿಸುವ ಕಾರ್ಯಕ್ಕೂ ತಾಲೀಮು ನಡೆಸಲಾಗಿದೆ. ಅಭಿಮನ್ಯು ನೇತೃತ್ವದ ಐದು ಆನೆಗಳಿಗೆ ಜಂಬೂ ಸವಾರಿ ತಾಲೀಮು ಆರಂಭಿಸಿದ್ದು, ಮರಳು ಮೂಟೆ ಹೊರಿಸಿ ತಾಲೀಮು ಮಾಡಿಸಲಾಗುತ್ತಿದೆ.