ಮೈಸೂರು ದಸರಾ 2022: ನಾಡಹಬ್ಬ ದಸರಾ ಜಂಬೂ ಸವಾರಿ ಯಶಸ್ವಿ
ಮೈಸೂರು, ಅಕ್ಟೋಬರ್, 05: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಗೆ ವರ್ಣರಂಜಿತ ತೆರೆಬಿದ್ದಿದೆ. ಮೈಸೂರಲ್ಲಿ ವಿಜಯದಶಮಿ ಸಂಭ್ರಮ ಸಮಾಪ್ತಿ ಆಗಿದ್ದು, ಎರಡು ವರ್ಷ ನಂತರ ಚಿನ್ನದ ಅಂಬಾರಿ ಹಾಗೂ ಜಂಬೂ ಸವಾರಿ ನೋಡಿ ಅಪಾರ ಭಕ್ತರು ಪುನೀತರಾಗಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಆಗಿದ್ದ ಜಂಬೂ ಸವಾರಿ ಕಾರ್ಯಕ್ರಮ ಅರಮನೆ ಆವರಣದಲ್ಲಿ ಸಾಂಪ್ರದಾಯಕವಾಗಿ ಜರುಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆಯ ಬಲರಾಮ ದ್ವಾರದ ಬಳಿ ಮಧ್ಯಾಹ್ನ 2:36ರಿಂದ 2:50 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ದಸರಾ ಮಹೋತ್ಸವದ ಕೇಂದ್ರ ಬಿಂದು ಜಂಬೂ ಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯ ವಿಗ್ರಹವನ್ನು ಅಭಿಮನ್ಯು ಹೊತ್ತಿತ್ತು. ಅಭಿಮನ್ಯು ತನ್ನ ಸಂಗಾತಿಗಳಾದ ಕಾವೇರಿ ಹಾಗೂ ಚೈತ್ರ ಜೊತೆಗೆ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಸಂಜೆ 5:37ಕ್ಕೆ ವಿಶೇಷ ವೇದಿಕೆಗೆ ಆಗಮಿಸಿತ್ತು.
ಮೈಸೂರು ದಸರಾ: ರೋಮಾಂಚನಕಾರಿ ಜಟ್ಟಿ ಕಾಳಗದಲ್ಲಿ ಗೆಲುವು ಯಾರಿಗೆ?
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ಇದೇ ವೇಳೆಗೆ 52 ಸೆಕೆಂಡ್ಗಳಲ್ಲಿ 21 ಬಾರಿ ಕುಶಾಲತೋಪುಗಳನ್ನು ಅರಮನೆಯ ಹೊರ ಆವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯವರು ಸಿಡಿಸಿದರು. ಬಳಿಕ ಅಂಬಾರಿ ಆನೆಯು ಪೊಲೀಸ್ ಅಶ್ವದಳ, ಕೆಎಸ್ಆರ್ಪಿ ಮೌಂಟೇನ್ ಕಂಪನಿ ಬೆಂಗಾವಲಿನಲ್ಲಿ ಸಾಗಿತು. ನೆರೆದಿದ್ದ ಜನರು ಜಂಬೂ ಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡು ಝೇಂಕಾರ ಘೋಷಗಳನ್ನು ಕೂಗಿದರು.
ರಾಜಬೀದಿಯಲ್ಲಿ ಗಜಗಾಂಭೀರ್ಯ
ಇದೇ ವೇಳೆ 120 ಕಲಾ ತಂಡಗಳು ತಮ್ಮ ಭಿನ್ನ ಕಲಾ ಪ್ರದರ್ಶನದ ಮೂಲಕ ನೋಡುಗರ ಗಮನ ಸೆಳೆದರು. ಅಲ್ಲದೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 47 ಸ್ತಬ್ಧಚಿತ್ರಗಳು ಜನರನ್ನು ತನ್ನತ್ತ ಸೆಳೆದವು. ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಚೈತ್ರಾ ಹಾಗೂ ಕಾವೇರಿ, ನಿಶಾನೆ ಆನೆ ಅರ್ಜುನ, ನೌಪತ್ ಆನೆಯಾಗಿ ಮಹೇಂದ್ರ, ಸಾಲಾನೆಯಾಗಿ ಭೀಮ, ಗೋಪಾಲಸ್ವಾಮಿ ಹಾಗೂ ಧನಂಜಯ, ಗೋಪಿ ಆಯ್ಕೆ ಆಗಿದ್ದು, ಎಲ್ಲಾ ಆನೆಗಳಿಗೂ ಗಾಂಭೀರ್ಯದಿಂದ ಬನ್ನಿಮಂಟಪದ ಕಡೆ ಹೆಜ್ಜೆ ಹಾಕಿದವು.
ಮೈಸೂರು ದಸರಾದಲ್ಲಿ ಗಮನ ಸೆಳೆಯಲಿರುವ 47 ಸ್ತಬ್ಧ ಚಿತ್ರಗಳು
ಮೈಸೂರು ಅರಮನೆಯಲ್ಲಿರುವ ಕರಿಕಲ್ಲು ತೊಟ್ಟಿ
ಮೈಸೂರು ಅರಮನೆ ಕರಿಕಲ್ಲು ತೊಟ್ಟಿಯಲ್ಲಿ ಎರಡು ಜೊತೆ ಜಟ್ಟಿಗಳ ನಡುವೆ ರಕ್ತ ಚಿಮ್ಮಿಸುವ ರೋಮಾಂಚನಕಾರಿ ವಜ್ರಮುಷ್ಠಿ ಕಾಳಗ ನಡೆಯಿತು. ಅರಮನೆಯ ಕಲ್ಯಾಣ ಮಂಟಪದ ಮುಂಭಾಗದ ಕನ್ನಡಿ ತೊಟ್ಟಿ ಆವರಣದಲ್ಲಿ ಕೃತಕವಾಗಿ ಮಟ್ಟಿ ಅಕಾಡವನ್ನು ನಿರ್ಮಿಸಲಾಗಿತ್ತು. ಅಕಾಡದಲ್ಲಿ ಆನೆ ದಂತದಿಂದ ತಯಾರಿಸಿದ 'ವಜ್ರನಖ' ಎಂಬ ಆಯುಧವನ್ನು ಕೈಗಳಲ್ಲಿ ಹಿಡಿದ ಜೆಟ್ಟಿಗಳು ಪರಸ್ಪರ ಕದಾಟಕ್ಕಿಳಿದರು. ಎದುರಾಳಿ ಜಟ್ಟಿಯ ತಲೆಯಿಂದ ರಕ್ತ ಬಂದ ಕೂಡಲೇ ಕಾಳಗ ಕೊನೆಗೊಂಡಿತು. ರಕ್ತ ಬಂದವರು ಸೋತರೆ ಅದಕ್ಕೆ ಕಾರಣರಾದವರು ಮೇಲುಗೈ ಸಾಧಿಸಿದರು. ಬಳಿಕ ಸೋತು ಗೆದ್ದವರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೈಮುಗಿದು ನಿಂತು ಸ್ವಾಮಿ ನಿಷ್ಠೆ ಪ್ರದರ್ಶಿಸಿದರು.
ಬೆಳಗ್ಗೆ 11 ಗಂಟೆಗೆ ಅಖಾಡದಲ್ಲಿದ್ದ ಜಟ್ಟಿಗಳು
ಚೆನ್ನಪಟ್ಟಣದ ಮನೋಜ್ ಜೆಟ್ಟಿ, ಚಾಮರಾಜ ನಗರದ ಅಚ್ಯುತ್ ಜೆಟ್ಟಿ ನಡುವೆ ಹಾಗೂ ಮೈಸೂರಿನ ವಿಷ್ಣು ಬಾಲಾಜಿ ಜೆಟ್ಟಿ ಬೆಂಗಳೂರಿನ ತಾರಾನಾಥ ಜೆಟ್ಟಿ ನಡುವೆ ಜಟ್ಟಿ ಕಾಳಗ ನಡೆಯಿತು. ಬೆಳಗ್ಗೆ 11 ಗಂಟೆಗೆ ಅಖಾಡದಲ್ಲಿ ಎರಡು ಜೋಡಿಗಳು ರಾಜ ವಂಶಸ್ಥರ ಅನುಮತಿಗಾಗಿ ಕೈ ಮುಗಿದು ಕಾಯುತ್ತಿದ್ದರು. 11:10ರ ಸುಮಾರಿಗೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅರಮನೆಯ ಕಲ್ಯಾಣ ತೊಟ್ಟಿಯಿಂದ ಕೂಷ್ಮಾಂಡ ಹಾಗೂ ಉತ್ತರ ಪೂಜೆ ನೆರವೇರಿಸಿದ ಬಳಿಕ ಹೊರ ಬಂದು ಕಾಳಗ ನಡೆಸುವಂತೆ ಸೂಚನೆ ನೀಡಿದ್ದರು. ಅದನ್ನು ಗಮನಿಸಿದ ಜಟ್ಟಿಗಳು ಕಾಳಗ ಆರಂಭಿಸಿದ್ದರು. ಇದಕ್ಕೂ ಮುನ್ನ ಕುಲದೇವತೆ ನಿಂಬುಜಾಂಬೆ ದೇವಿಗೆ ಪೂಜೆ ಸಲ್ಲಿಸಿ ಜಟ್ಟಿಗಳು ಅರಮನೆಗೆ ಆಗಮಿಸಿದ್ದರು. ಕೇಶಮುಂಡನ ಮಾಡಿಸಿಕೊಂಡು ಬಂದಿದ್ದ ಅವರು ಮೈ ತುಂಬಾ ಕೆಂಪು ಮಣ್ಣು ಬಳಿದುಕೊಂಡಿದ್ದರು.
ಕಾಳಗಕ್ಕೆ ಸೂಚನೆ ನೀಡಿದ್ದ ಯದುವೀರ್
ಮೈಸೂರಿನ ಮಾದವ ಜೆಟ್ಟಿ, ಚಾಮರಾಜನಗರದ ಚೆನ್ನಕುಟ್ಟಿ ಜೆಟ್ಟಿ, ಬಾಲಾಜಿ, ಚೆನ್ನಪಟ್ಟಣದ ಪುರುಷೋತ್ತಮ್, ಬೆಂಗಳೂರಿನ ಕೃಷ್ಣ ಜೆಟ್ಟಿ ಸೇರಿದಂತೆ ಐದು ಜನ ವಸ್ತಾರ್ಗಳಾಗಿ ಕಾರ್ಯನಿರ್ವಹಿಸಿದರು. ಒಂದೇ ಮಟ್ಟಿಯಲ್ಲಿ ಎರಡು ಜೊತೆ ಕುಸ್ತಿ ನಡೆಯುವುದನ್ನು ಗಮನಿಸಲಾಗಿತ್ತು. ಜಗಜಟ್ಟಿಗಳ ನಡುವಿನ ಕುಸ್ತಿ ರೋಚಕತೆಯನ್ನು ಸವಿಯುತ್ತಿದ್ದಂತೆ ಕೇವಲ 30 ಸೆಕೆಂಡುಗಳಲ್ಲಿ ಕುಸ್ತಿ ಪೂರ್ಣಗೊಂಡಿತು. ಬಳಿಕ ಜಗ ಜಟ್ಟಿಗಳಂತೆ ಕಾದಾಡಿದ ಜಟ್ಟಿಗಳು ರಾಜರ ಆಗಮನವನ್ನು ನಿರೀಕ್ಷಿಸುತ್ತಾ ಮಟ್ಟಿಯೊಳಗೆ ಕೈ ಮುಗಿದು ನಿಂತರು. ನಂತರ ಕಲ್ಯಾಣಿ ತೊಟ್ಟಿಯಿಂದ ಹೊರಬಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಿಟ್ಟಿಗಳಿಗೆ ಶುಭಕೋರಿ ವಿಜಯ ಯಾತ್ರೆಗೆ ಹೊರಟರು. ಅಲ್ಲಿಗೆ ಜಟ್ಟಿಕಾಳಗ ಮುಕ್ತಾಯವಾಯಿತು.