ಮೈಸೂರು ದಸರಾ; ದೀಪಾಲಂಕಾರ ಕಣ್ತುಂಬಿಕೊಳ್ಳಲು ನಿಯಮಗಳು
ಮೈಸೂರು, ಅಕ್ಟೋಬರ್ 06; ಮೈಸೂರು ದಸರಾ 2021ರ ಅಂಗವಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತಿದೆ. ಅಕ್ಟೋಬರ್ 7ರಿಂದ 15ರ ತನಕ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಜನರಿಗೆ ಅವಕಾಶ ನೀಡಲಾಗಿದೆ.
ಅಕ್ಟೋಬರ್ 7ರ ಗುರುವಾರ ಬೆಳಗ್ಗೆ 8.15ರಿಂದ 8.45ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ 2021ನೇ ಸಾಲಿನ ದಸರಾವನ್ನು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಉದ್ಘಾಟಿಸಲಿದ್ದಾರೆ. ಸಂಜೆ ವಿದ್ಯುತ್ ದೀಪಾಲಂಕಾರದ ವೀಕ್ಷಣೆಗೆ ಚಾಲನೆ ದೊರೆಯಲಿದೆ.
ದಸರಾ ವಿಶೇಷ; ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳಲಿದೆ ಮೈಸೂರು
ಮೈಸೂರು ನಗರದ ಹೊರ ವರ್ತುಲ ರಸ್ತೆಯ ಒಳ ಭಾಗಕ್ಕೆ ಸೇರಿದ ರಸ್ತೆಗಳು, ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅತ್ಯಂತ ಆಕರ್ಷಣಿಯ ಹಾಗೂ ವಿನೂತನ ರೀತಿಯಲ್ಲಿ ಈ ಬಾರಿ ದಸರಾ ದೀಪಾಲಂಕಾರ ಮಾಡಲಾಗಿದೆ. ವಿದ್ಯುತ್ ದೀಪಗಳನ್ನು ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 9.30 ಗಂಟೆಯವರೆಗೆ ಬೆಳಗಿಸಲಾಗುತ್ತದೆ. ಈ ಸಮಯದಲ್ಲಿ ಮೈಸೂರು ನಗರದ ನಿವಾಸಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು, ಗಣ್ಯ ವ್ಯಕ್ತಿಗಳು ದೀಪಾಲಂಕಾರವನ್ನು ವೀಕ್ಷಿಸಬಹುದಾಗಿದೆ.
ಮೈಸೂರು ದಸರಾ; ಹಂಸಲೇಖ, ಪ್ರವೀಣ್ ಗೋಡ್ಖಿಂಡಿ ಪ್ರಮುಖ ಆಕರ್ಷಣೆ
ಕೋವಿಡ್ ಕಾರಣದಿಂದಾಗಿ ಸರಳವಾಗಿ ದಸರಾ ಆಚರಣೆ ನಡೆಯಲಿದ್ದು, ಈ ಬಾರಿ ದಸರಾಕ್ಕೆ ಸಂಬಂಧಿಸಿದಂತೆ ಅರಮನೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇನ್ನಿತರೆ ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ ಜನರೂ ಸಹ ದಸರಾದಲ್ಲಿ ಸಂಭ್ರಮಿಸಲು ವಿದ್ಯುದ್ದೀಪದ ಅಲಂಕಾರವನ್ನು ಕಣ್ತುಂಬಿಕೊಳ್ಳಬೇಕು.
ಮೈಸೂರು ದಸರಾ ವಿಶೇಷ; ದಸರಾ 'ಪೊಲೀಸ್ ಬ್ಯಾಂಡ್’ಗೆ ಹೊಸ ರೂಪ
ಹಲವಾರು ವಿಶೇಷತೆಗಳು
ಕಳೆದ ಬಾರಿ ಮೈಸೂರು ದಸರಾ ದೀಪಾಲಂಕಾರ 60 ಕಿ. ಮೀ. ಗೆ ಸೀಮಿತವಾಗಿತ್ತು. ಈ ಬಾರಿ ನಗರದ 100 ಕಿ. ಮೀ. ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಅಲಂಕಾರಕ್ಕಾಗಿ ಎಲ್ಇಡಿ ಬಲ್ಬ್ಗಳನ್ನು ಬಳಸಲಾಗಿದೆ. 121 ರಸ್ತೆಗಳು, 80 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿದೆ. ಸಯ್ಯಾಜಿರಾವ್ ರಸ್ತೆ, ಹಾರ್ಡಿಂಜ್ ವೃತ್ತ, ಕೆ. ಆರ್. ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ಸಿಂಗರಿಸಲಾಗಿದೆ.
ದೀಪಾಲಂಕಾರದಲ್ಲಿ ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರ, ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿ, 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಚಿತ್ತಾರಗಳನ್ನು ಕಾಣಬಹುದು. ಸ್ವಾಮಿ ವಿವೇಕಾನಂದ, ಮೈಸೂರು ಅರಮನೆ, ವಿಷ್ಣು, ಶ್ರೀಕೃಷ್ಣ ರಥ, ಚಾಮುಂಡಿಬೆಟ್ಟದಲ್ಲಿ ಸ್ವಾಗತ ಕೋರುವ ಪ್ರತಿಕೃತಿ ಮೊದಲಾದ ವಿಶೇಷತೆಗಳನ್ನು ಅಲಂಕಾರ ಹೊಂದಿದೆ.
ದೀಪಾಲಂಕಾರ ನೋಡಲು ಜನರಿಗೆ ನಿಯಮಗಳು
ದೀಪಾಲಂಕಾರ ವೀಕ್ಷಿಸುವ ಜನರು ವಿದ್ಯುತ್ ದೀಪಗಳನ್ನು ಸ್ಪರ್ಶಿಸುವುದು, ಸೆಲ್ಫಿ ತೆಗೆದುಕೊಳ್ಳುವಾಗ ದೀಪಗಳನ್ನು ಸ್ಪರ್ಶಿಸಲು ಪ್ರಯತ್ನಿಸುವುದು, ಮಾರ್ಗಗಳನ್ನು ಸ್ಪರ್ಶಿಸುವಂತೆ ಮಕ್ಕಳಿಗೆ ಪ್ರೇರೇಪಿಸುವುದು ಇತ್ಯಾದಿ ಅಸುರಕ್ಷಿತ ಚಟುವಟಿಕೆಗಳನ್ನು ಮಾಡಿದರೆ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಸುರಕ್ಷತೆಯನ್ನು ಕಾಪಾಡಲು ಚಾ.ವಿ.ಸ.ನಿ.ನಿ. ವತಿಯಿಂದ ಈಗಾಗಲೇ ಅಗತ್ಯ ಸಿಬ್ಬಂದಿ ವರ್ಗದವರು, ಅಧಿಕಾರಿಗಳನ್ನು ಆಯ್ದ ಸ್ಥಳಗಳಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ದೀಪಾಲಂಕಾರ ರಸ್ತೆಗಳು ಮತ್ತು ವೃತ್ತಗಳಲ್ಲಿ ಗಸ್ತು ತಿರುಗಿ ವಾಹನ ಬಳಕೆ ಮಾಡಿ ಧ್ವನಿ ವರ್ಧಕದ ಮೂಲಕ ಸುರಕ್ಷತೆಯ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.
ಸುರಕ್ಷತೆಗೆ ಜನರು ಆದ್ಯತೆ ಕೊಡಿ
ದೀಪಾಲಂಕಾರ ವ್ಯವಸ್ಥೆಯನ್ನು ಸ್ಪರ್ಶಿಸಲು ಪ್ರಯತ್ನಿಸಬಾರದೆಂದು ಜನರಿಗೆ ಮನವಿ ಮಾಡಲಾಗಿದೆ. ಮೈಸೂರು ಪೊಲೀಸ್ ಆಯುಕ್ತರಿಗೂ ಈ ಕುರಿತು ಮನವಿ ಮಾಡಿದ್ದು ಅಗತ್ಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಸಿಬ್ಬಂದಿ ವರ್ಗದವರನ್ನು ನಿಯೋಜಿಸಲು ಕೋರಲಾಗಿದೆ.
ಚಾ.ವಿ.ಸ.ನಿ.ನಿ. ಇಲಾಖೆಯು ದಸರಾ ಮಹೋತ್ಸವ ದಿವಸಗಳಂದು ಸಾರ್ವಜನಿಕರಿಗಾಗಿ, ಅತ್ಯಂತ ಕಾಳಜಿವಹಿಸಿ ವಿನೂತನ ವಿನ್ಯಾಸದಿಂದ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ದೀಪಾಲಂಕಾರವನ್ನು ಸ್ಪರ್ಶಿಸುವ ಪ್ರಯತ್ನ ಮಾಡಬಾರದು, ತಮ್ಮ ಜೊತೆಯಲ್ಲಿರುವ ಮಕ್ಕಳನ್ನು ಯಾವುದೇ ಕಾರಣಕ್ಕೂ ವಿದ್ಯುತ್ ದೀಪ ಹಾಗೂ ತಂತಿಗಳನ್ನು ಮುಟ್ಟಲು ಪ್ರಯತ್ನಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
ತುರ್ತು ಸಹಾಯಕ್ಕೆ ಕರೆ ಮಾಡಿ
ಯಾವುದೇ ವಿದ್ಯುತ್ ತಂತಿ ತುಂಡಾಗಿ ನೆಲದ ಮೇಲೆ ಬಿದ್ದಿದ್ದರೆ ತುರ್ತಾಗಿ 1912 ಸಂಖ್ಯೆಗೆ ಕರೆ ಮಾಡಿ ಎಂದು ಮನವಿ ಮಾಡಲಾಗಿದೆ. ಸೆಲ್ಫಿ ಅಥವಾ ಫೋಟೋ ತೆಗೆಯುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳಿಂದ ದೂರ ಇರಬೇಕಾಗಿದ್ದು, ವಿದ್ಯುತ್ ಕಂಬಗಳಿಗೆ, ವಿದ್ಯುತ್ ತಂತಿಗಳಿಗೆ ತಾಗಿ ನಿಲ್ಲಬಾರದು. ಮಳೆ ಬರುವ ಸಮಯದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳಿಂದ ದೂರ ಇರಬೇಕು. ದೀಪಾಲಂಕಾರ ವ್ಯವಸ್ಥೆಯನ್ನು ಹಾನಿ ಮಾಡುವ/ ವಿಕಾರಗೊಳಿಸುವ ಪ್ರಯತ್ನ ಮಾಡಬಾರದು. ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯಲ್ಲಿನ ದೋಷ ಅಥವಾ ದೂರುಗಳಿದ್ದಲ್ಲಿ ತಕ್ಷಣವೇ ಚಾ.ವಿ.ಸ.ನಿ.ನಿ.ಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಮನವಿ ಮಾಡಲಾಗಿದೆ.