ಮೈಸೂರು ದಸರಾ 2021; ಗಜ ಪಯಣಕ್ಕೆ ಚಾಲನೆ
ಮೈಸೂರು, ಸೆಪ್ಟೆಂಬರ್ 13; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ನಾಡಹಬ್ಬ ದಸರೆಯ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಸೋಮವಾರ ಸಂಭ್ರಮದಿಂದ ಚಾಲನೆ ನೀಡಲಾಯಿತು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಡಿನಿಂದ ನಾಡಿಗೆ ಹೊರಟ ಗಜಪಡೆ ಸಾರಥಿ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಆ ಮೂಲಕ 2021ರ ದಸರ ಮಹೋತ್ಸವದ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿತು.
ಮೈಸೂರು ದಸರಾ 2021ಕ್ಕೆ ದಿನಗಣನೆ ಶುರುವಾಗಿದೆ. ನಾಡಹಬ್ಬ ದಸರೆಯ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಸೋಮವಾರ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.#Mysuru #Mysurudasara2021 #Gajapayana pic.twitter.com/kAi8jT3INT
— oneindiakannada (@OneindiaKannada) September 13, 2021
ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ದಸರಾ ಆನೆಗಳಿಗೆ ಸ್ವಾಗತ ನೀಡಿದ ಅರಣ್ಯಾಧಿಕಾರಿಗಳು, ದಸರಾಗೆ ಆಯ್ಕೆಯಾಗಿರುವ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ?
ಬೆಳಗ್ಗೆ 9:30ರ ಶುಭ ಮುಹೂರ್ತದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಶಿಬಿರಗಳಿಂದ ಆಗಮಿಸಿರುವ ಆನೆಗಳನ್ನು ಮೈಸೂರಿನತ್ತ ಬೀಳ್ಕೊಡಲಾಯಿತು. ಆನೆಗಳ ಜೊತೆಗೆ ಮಾವುತರು ಹಾಗೂ ಕಾವಾಡಿಗಳ ಕುಟುಂಬ ಸದಸ್ಯರು, ಮೈಸೂರಿಗೆ ಹೊರಟರು.
ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ
ಅಂಬಾರಿ ಹೊರುವ 'ಅಭಿಮನ್ಯು' ನೇತೃತ್ವದಲ್ಲಿ ಹೊರಟಿರುವ ಆನೆಗಳು ಸೋಮವಾರ ಸಂಜೆ ವೇಳೆಗೆ ಕಾಡಿನಿಂದ ನಾಡಿಗೆ ಬರಲಿದ್ದು, ನಂತರ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಬಿಡುಬಿಡಲಿವೆ. ಇದಾದ ಕೆಲವು ದಿನಗಳ ಕಾಲ ನಗರದ ವಾತಾವರಣಕ್ಕೆ ಹೊಂದಿಕೊಂಡ ನಂತರ ಸಾಂಪ್ರದಾಯಿಕವಾಗಿ ಪೂಜೆಯೊಂದಿಗೆ ಸೆಪ್ಟೆಂಬರ್ 16ರಂದು ಎಲ್ಲಾ ಆನೆಗಳು ಅರಮನೆ ಪ್ರವೇಶಿಸಲಿವೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ 5 ಗಂಡಾನೆ, 3 ಹೆಣ್ಣಾನೆ ಸೇರಿ ಒಟ್ಟು 8 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಮಹಾಮಾರಿ ಕೊರೊನಾ ಕಂಟಕದ ಹಿನ್ನೆಲೆಯಲ್ಲಿ ಈ ವರ್ಷವೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ದಸರಾ ಗಜಪಡೆಯಲ್ಲಿ ಅಂಬಾರಿ ಹೊರಲಿರುವ ಗಜಪಡೆ ಸಾರಥಿ 56 ವರ್ಷದ ಅಭಿಮನ್ಯು ನೇತೃತ್ವದಲ್ಲಿ 58 ವರ್ಷದ ವಿಕ್ರಮ, 43 ವರ್ಷದ ಧನಂಜಯ, 44 ವರ್ಷದ ಕಾವೇರಿ, 48 ವರ್ಷದ ಚೈತ್ರ, 20 ವರ್ಷದ ಲಕ್ಷ್ಮಿ ಹಾಗೂ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಆಗಮಿಸುತ್ತಿರುವ 34 ವರ್ಷದ ಅಶ್ವತ್ಥಾಮ ಆನೆಗಳು ಮೈಸೂರಿಗೆ ಆಗಮಿಸಲಿವೆ.
ವೀರನಹೊಸಹಳ್ಳಿಯಲ್ಲಿ ನಡೆದ ದಸರಾ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅನುಪಸ್ಥಿತಿಯಲ್ಲಿ ಸಂಸದ ಪ್ರತಾಪ್ ಸಿಂಹ, ಸ್ಥಳೀಯ ಶಾಸಕ ಎಚ್. ಪಿ. ಮಂಜುನಾಥ್, ಮೇಯರ್ ಸುನಂದಾ ಪಾಲನೇತ್ರ ಸಾಂಕೇತಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಈ ವೇಳೆ ಹಾಜರಿದ್ದರು.
2021ನೇ ಸಾಲಿನ ಮೈಸೂರು ದಸರಾ ಅಕ್ಟೋಬರ್ 7ರಿಂದ 15ರ ತನಕ ನಡೆಯಲಿದೆ. ಸೋಮವಾರ ಗಜಪಯಣ ಆರಂಭವಾಗುವ ಮೂಲಕ ದಸರಾಕ್ಕೆ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್ 16 ರಂದು ಅರಮನೆ ಬಳಿ ಗಜಪಡೆ ಸ್ವಾಗತ ಕೋರಲಾಗುತ್ತದೆ. ಅಕ್ಟೋಬರ್ 16 ರಂದು ಗಜಪಡೆ ಬೀಳ್ಕೊಡುಗೆ. ನಡೆಯಲಿದೆ.
ಅಕ್ಟೋಬರ್ 7ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. ದಸರಾವನ್ನು ಯಾರು ಉದ್ಘಾಟನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಕೋವಿಡ್ ಹಿನ್ನಲೆಯಲ್ಲಿ ಸರಳ, ಸಂಪ್ರದಾಯಿಕವಾಗಿ ದಸರಾ ನಡೆಯಲಿದೆ. ಅರಮನೆ ಆವರಣದಲ್ಲಿ ಮಾತ್ರ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಹಾರ ಮೇಳ, ಯುವ ದಸರಾ ಸಹ ಈ ಬಾರಿ ಇರುವುದಿಲ್ಲ.
ಅಕ್ಟೋಬರ್ 15ರಂದು ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದೆ. ಅಂದು ಸಂಜೆ 4.36 ರಿಂದ 4.44 ನಂದಿ ಪೂಜೆ ನಡೆಯಲಿದ್ದು, ಬಳಿಕ ಸಂಜೆ 5 ರಿಂದ 5.36 ಜಂಬೂ ಸವಾರಿ ಅರಮನೆ ಆವರಣದಲ್ಲಿ ಮಾತ್ರ ನಡೆಯಲಿದೆ.