ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಪರಿಸರ ಪ್ರೇಮಿಗಳ ಆಕ್ಷೇಪ!
ಮೈಸೂರು, ಸೆಪ್ಟೆಂಬರ್ 28: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ಜಗಮಗಿಸುವ ಉದ್ದೇಶದಿಂದ ಮರಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ಇದರಿಂದ ಪಕ್ಷಿ, ಕೀಟಗಳಿಗೆ ಗಂಡಾಂತರ ಎದುರಾಗಿದೆ.
ಸಾಮಾನ್ಯವಾಗಿ ದಸರಾ ವೇಳೆ 100 ಕಿ. ಮೀ. ವರೆಗೆ ನಗರದ ಪ್ರಮುಖ ರಸ್ತೆ, ವೃತ್ತ, ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ಆದರೆ ಹೀಗೆ ಮಾಡುವ ಸಮಯದಲ್ಲಿ ರಸ್ತೆ ಬದಿಯ ಮರಗಳಿಗೂ ಮೊಳೆ ಹೊಡೆದು ಸೀರಿಯಲ್ ಸೆಟ್ ಬಿಡಲಾಗುತ್ತದೆ.
ಮೈಸೂರು ದಸರಾ ವಿಶೇಷ; ಕ್ಯಾಪ್ಟನ್ 'ಅಭಿಮನ್ಯು' ದಿನಚರಿ ಬಲ್ಲಿರಾ?
ಪ್ರತಿವರ್ಷದಂತೆ ಈ ವರ್ಷವೂ ಜಿಲ್ಲಾಡಳಿತದ ಈ ಕ್ರಮಕ್ಕೆ ಪರಿಸರ ಪ್ರೇಮಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಮರಗಳನ್ನು ಬಿಟ್ಟು ರಸ್ತೆಗಳಿಗೆ, ವೃತ್ತ, ಕಟ್ಟಡಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಿ. ಆದರೆ, ನಮ್ಮ ಸಂತೋಷಕ್ಕೆ ಪಕ್ಷಿ, ಕೀಟಗಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಮೈಸೂರು ದಸರಾ ಆನೆಗಳ ಮೇಲೆ ಕಣ್ಗಾವಲು ಇಡಲಿವೆ 8 ಸಿಸಿಟಿವಿ!
"ರಾತ್ರಿ ವೇಳೆ ಹಕ್ಕಿಗಳು ವಿಶ್ರಾಂತಿ ಬಯಸುತ್ತವೆ. ಹೀಗಿರುವಾಗ ಮರಗಳಿಗೆ ವಿದ್ಯುತ್ ಅಲಂಕಾರ ಮಾಡಿದರೆ ಹಕ್ಕಿಗಳು ಮತ್ತು ಅವುಗಳ ಸಂತಾನೋತ್ಪತಿಗೂ ತೊಂದರೆ ಉಂಟಾಗುತ್ತದೆ. ಕೆಲವು ಮರಗಳು ರಾತ್ರಿ ವೇಳೆ ಆಮ್ಲಜನಕ ಹೊರ ಚೆಲ್ಲುತ್ತವೆ. ಹೀಗಾಗಿ ಇದು ಪಕ್ಷಿ ಮತ್ತು ಮರ ಎರಡಕ್ಕೂ ಹಾನಿ ಉಂಟು ಮಾಡುತ್ತದೆ" ಎನ್ನುತ್ತಾರೆ ಪಕ್ಷಿ ತಜ್ಞರಾದ ರಾಜ್ ಕುಮಾರ್.
ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ?
ಪಕ್ಷಿಗಳಿಗೆ ಏನೆಲ್ಲಾ ತೊಂದರೆ?
ಸಾಮಾನ್ಯವಾಗಿ ಒಂದು ಮರವನ್ನು ಹತ್ತಾರು ಪಕ್ಷಿ, ಕೀಟ, ಸರಿಸೃಪಗಳು ಆಶ್ರಯಿಸಿರುತ್ತವೆ. ಮೈನಾ, ಗಿಣಿ, ಗೂಬೆ, ಮರಕುಟಿಕ, ಕುಟ್ರ, ಶಿಕ್ರಾ, ಕಾಗೆ, ಗರುಡ, ಹದ್ದು, ಪಾರಿವಾಳ ಸೇರಿದಂತೆ ಸಾಕಷ್ಟು ಪಕ್ಷಿಪ್ರಬೇಧಗಳ ವಾಸಸ್ಥಾನವಿದಾಗಿದೆ. ರಾತ್ರಿಯಾದರೆ ಗೂಬೆ, ಬಾವಲಿಗಳ ಚಟುವಟಿಕೆ ಶುರುವಾಗುತ್ತದೆ. ಮನುಷ್ಯರಿಗೆ ಹೇಗೆ ಸಮಯಕ್ಕೆ ಸರಿಯಾಗಿ ವಿಶ್ರಾಂತಿ, ನಿದ್ರೆ ಅಗತ್ಯವೋ ಅದರಂತೆ ಪಕ್ಷಿಕೀಟಗಳಿಗೂ ಇದು ಅವಶ್ಯ. ಹಕ್ಕಿಪಕ್ಷಿಗಳು ರಾತ್ರಿ ವೇಳೆ ಹೆಚ್ಚು ಚಟುವಟಿಕೆಯಿಂದ ಇರುವುದಿಲ್ಲ. ಆದಷ್ಟು ವಿಶ್ರಾಂತಿ, ನಿದ್ರೆಗೆ ಜಾರುತ್ತವೆ.
ಆದರೆ, ದಸರಾ ನೆಪದಲ್ಲಿ ಮರಗಳಿಗೆ ಸಿರಿಯಲ್ ಸೆಟ್ಗಳನ್ನು ಜೋತು ಬಿಡುವುದರಿಂದ ಪಕ್ಷಿಗಳ ನೆಮ್ಮದಿಗೆ ಧಕ್ಕೆ ಉಂಟಾಗುತ್ತದೆ. ಅಲ್ಲದೆ, ಸಂತಾನೋತ್ಪತಿ ಮಾಡುತ್ತಿರುವ ಹಕ್ಕಿಗಳಾದರೆ ಮೊಟ್ಟೆ, ಮರಿಗಳಿಗೆ ತೊಂದರೆ ಉಂಟಾಗುತ್ತದೆ. ಎಲ್ಇಡಿ ಬಲ್ಬ್ ಆದರೂ ರೇಡಿಯೇಶನ್ ಪರಿಣಾಮ ಇದ್ದೇ ಇರುತ್ತದೆ ಎನ್ನುತ್ತಾರೆ ಪಕ್ಷಿ ತಜ್ಞರು.
ಮರಗಳಿಗೂ ಹಾನಿಯಾಗುತ್ತದೆ
ಮೈಸೂರಿನಲ್ಲಿ ಐವತ್ತು-ಅರವತ್ತು ವರ್ಷಗಳ ಇತಿಹಾಸ ಇರುವ ನಾನಾ ಬಗೆಯ ಮರಗಳಿವೆ. ವಿದ್ಯುತ್ ದೀಪಾಲಂಕಾರದ ಉದ್ದೇಶದಿಂದ ಮೊಳೆ ಹೊಡೆದರೆ ಅವುಗಳ ಅಸ್ತಿತ್ವಕ್ಕೆ ಪೆಟ್ಟು ಬೀಳುತ್ತದೆ. ಅಲ್ಲದೆ, ಮೊಳೆ ಪೆಟ್ಟು ಮರದಲ್ಲಿ ನೀರಿನ ಹರಿವು ಸರಾಗವಾಗಿ ಚಲಿಸುವುದನ್ನು ತಪ್ಪಿಸುತ್ತದೆ. ಅಲ್ಲದೆ, ಪ್ರತಿವರ್ಷ ಈ ಪ್ರಕ್ರಿಯೆ ನಡೆಯುವುದರಿಂದ ಮರಗಳ ಆಯುಷ್ಯ ಕೂಡ ಕಡಿಮೆ ಆಗುತ್ತದೆ. ಈಗಾಗಲೇ ಸಾಕಷ್ಟು ಮರಗಳು ಈ ರೀತಿಯ ಪೆಟ್ಟು ತಿಂದು ಹಲವು ವರ್ಷಗಳ ಬಳಿಕ ಒಣಗಿ ಬಿದ್ದು ಹೋದ ನಿದರ್ಶನವೂ ಇದೆ.
ಮೊಳೆ ಹೊಡೆಯಬೇಡಿ, ಸೆಸ್ಕ್ಗೆ ಪತ್ರ
"ಈ ಮೊದಲು ಮರದ ಕೆಳಗಿನಿಂದ ಮೇಲಿನವರೆಗೆ ದೀಪಾಲಂಕಾರ ಮಾಡಲಾಗುತ್ತಿತ್ತು. ಇದರಿಂದ ಮರದ ತುದಿಯಲ್ಲಿ ಅಥವಾ ಗೂಡಿನಲ್ಲಿರುವ ಹಕ್ಕಿಗೆ ತೊಂದರೆ ಆಗುತ್ತಿತ್ತು. ಹಾಗಾಗಿ ಬುಡದ ಕೆಳಗೆ ಮಾತ್ರ ವಿದ್ಯುತ್ ಸೀರಿಯಲ್ ಸೆಟ್ ಬಿಡುವಂತೆ ಸೆಸ್ಕ್ಗೆ ಮನವಿ ಮಾಡಲಾಗುವುದು. ಅಲ್ಲದೆ, ಮೊಳೆ ಹೊಡೆಯದೆ ಇರುವಂತೆ ಪತ್ರದ ಮೂಲಕ ಕೋರಲಾಗುವುದು. ಒಂದು ವೇಳೆ ದೀಪಾಲಂಕಾರ ಮಾಡುವಾಗ ಮೊಟ್ಟೆ, ಮರಿ ಕಂಡುಬಂದರೆ ಸಂಬಂಧಪಟ್ಟವರು ತಕ್ಷಣ ಅರಣ್ಯ ಇಲಾಖೆ ಗಮನಕ್ಕೆ ತರಬೇಕು" ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
100 ಕಿ. ಮೀ. ದೀಪಾಲಂಕಾರ
ಈ ವರ್ಷದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ನಗರದ 100 ಕಿ. ಮೀ. ವ್ಯಾಪ್ತಿಗೆ ವಿದ್ಯುತ್ ದೀಪಾಲಂಕಾರ ಮಾಡುವಂತೆ ಸರಕಾರ ಸಲಹೆ ನೀಡಿದೆ. ಹಾಗಾಗಿ ರಸ್ತೆ ಎರಡು ಬದಿಯಲ್ಲಿ ಕಂಬ ನೆಡಲಾಗುತ್ತಿದೆ. ಹಾರ್ಡಿಂಜ್ ವೃತ್ತ, ಕೆ. ಆರ್. ವೃತ್ತ, ಬಸವೇಶ್ವರ ವೃತ್ತ ಮೂರು ವೃತ್ತಗಳಲ್ಲೂ ವಿದ್ಯುತ್ ದೀಪಾಲಂಕಾರ ಅಂತಿಮ ಹಂತಕ್ಕೆ ತಲುಪಿದೆ. ಇರ್ವಿನ್ ರಸ್ತೆಯ ನಗರ ಬಸ್ ನಿಲ್ದಾಣದ ಎದುರಿನಲ್ಲಿ ಕೆಟ್ಟಿರುವ ಬೀದಿ ದೀಪಗಳನ್ನು ಪಾಲಿಕೆ ಸಿಬ್ಬಂದಿ ಬದಲಿಸಿದ್ದಾರೆ. ಇರ್ವಿನ್ ರಸ್ತೆಯಲ್ಲಿರುವ ಮರಗಳು, ಚಾಮರಾಜ ಜೋಡಿ ರಸ್ತೆಯಲ್ಲಿರುವ ಮರಗಳಿಗೆ ಚೈನಾ ಸೆಟ್ ಹಾಕಲಾಗಿದೆ.