ಮೈಸೂರು ದಸರಾ; ಹಂಸಲೇಖ, ಪ್ರವೀಣ್ ಗೋಡ್ಖಿಂಡಿ ಪ್ರಮುಖ ಆಕರ್ಷಣೆ
ಮೈಸೂರು, ಅಕ್ಟೋಬರ್ 05; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2021ರ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ಭರದಿಂದ ನಡೆಯುತ್ತಿದೆ. ಅರಮನೆ ನಗರಿ ಅಕ್ಷರಶಃ ನವವಧುವಿನಂತೆ ಕಂಗೊಳಿಸುತ್ತಿದೆ.
ಈ ಬಾರಿಯ ದಸರಾ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರಾದ ಪ್ರವೀಣ್ ಗೋಡ್ಖಿಂಡಿ ಹಾಗೂ ನಾದಬ್ರಹ್ಮ ಹಂಸಲೇಖ ತಂಡ ನಡೆಸಿಕೊಡುವ ಸಂಗೀತ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಬಿ. ಜಯಶ್ರೀ ತಂಡ ನಡೆಸಿಕೊಡುವ ರಂಗಗೀತೆ ಗಾಯನ ಮತ್ತೊಂದು ಆಕರ್ಷಣೆ.
ಮೈಸೂರು ದಸರಾ ವಿಶೇಷ; ದಸರಾ 'ಪೊಲೀಸ್ ಬ್ಯಾಂಡ್’ಗೆ ಹೊಸ ರೂಪ
ನಾಡ ಹಬ್ಬದ ಏಕೈಕ ಸಾಂಸ್ಕೃತಿಕ ವೇದಿಕೆಯಾಗಿರುವ ಅರಮನೆ ಸಂಗೀತದಲ್ಲಿ ಖ್ಯಾತ ಕಲಾವಿದರು ಸಂಗೀತ ಸುಧೆ ಹರಿಸಲಿದ್ದಾರೆ. ದಸರಾ ಉಪಸಮಿತಿ ವಿಶೇಷ ಅಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒ ಎ. ಎಂ. ಯೋಗೀಶ್, ಕಾರ್ಯಾಧ್ಯಕ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಹಾಗೂ ರಂಗಾಯಣದ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಸಭೆ ನಡೆಸಿ ಕೆಲವು ಕಲಾವಿದರ ಹೆಸರು ಪಟ್ಟಿ ಮಾಡಿದ್ದಾರೆ.
ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ?
ಸರಳ ದಸರಾ ಮಿತಿಯಲ್ಲೇ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ದಸರಾ ಉಪಸಮಿತಿ ಸಿದ್ಧತೆ ನಡೆಸಿದೆ. ಕೋವಿಡ್ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 500 ಜನರಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಸುಮಾರು 40 ಲಕ್ಷ ರೂ. ವೆಚ್ಚವಾಗಿತ್ತು. ಈ ಬಾರಿಯೂ ಇದೇ ಮಿತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆದಿದೆ.
ಮೈಸೂರು ದಸರಾ ವಿಶೇಷ; ಕ್ಯಾಪ್ಟನ್ 'ಅಭಿಮನ್ಯು' ದಿನಚರಿ ಬಲ್ಲಿರಾ?
ಅಕ್ಟೋಬರ್ 7ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರಮನೆ ಆವರಣದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅದೇ ದಿನ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ಕರುನಾಡ ವೈಭವ ನೃತ್ಯ ರೂಪಕ ನಡೆಯಲಿದೆ. ಜೊತೆಗೆ ರಾಜ್ಯಮಟ್ಟದ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 8ರಂದು ಮಳವಳ್ಳಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು, ಹೊಸಹಳ್ಳಿ ವೆಂಕಟರಾಮು ಕೆ. ಮತ್ತು ತಂಡದಿಂದ ಜನಪದ ಗಾಯನ ಹಾಗೂ ವೈಘಿ. ಕೆ. ಭಾಸ್ಕರ್ ಮತ್ತು ತಂಡದಿಂದ ಕನ್ನಡ ಡಿಂಡಿಮ ನಡೆಯಲಿದೆ.
ಹಂಸಲೇಖ ತಂಡದಿಂದ ನಾಲ್ವಡಿ/ ನಲ್ನುಡಿ; ಅಕ್ಟೋಬರ್ 9ರಂದು ಮೈಸೂರಿನ ಎಚ್. ಎನ್. ಭಾಸ್ಕರ್ ಮತ್ತು ತಂಡದಿಂದ ಸಂಗೀತ ದರ್ಬಾರ್ ನಡೆದರೆ, ಹಂಸಲೇಖ ಮತ್ತು ತಂಡದಿಂದ ನಾಲ್ವಡಿ-ನಲ್ನುಡಿ ಭಾವ ಸಂಭ್ರಮ ಜರುಗಲಿದೆ.
ಅಲ್ಲದೆ ಅಕ್ಟೋಬರ್ 10ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಮೋಘ ವರ್ಷ ಡ್ರಮ್ಸ್ ಕಲೆಕ್ಟಿವ್, ಶಾಂತಲ ವಟ್ಟಂ ಮತ್ತು ತಂಡ ಹಾಗೂ ಶಮಿತಾ ಮಲ್ನಾಡ್ ಮತ್ತು ತಂಡದಿಂದ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 11ರಂದು ಪೊಲೀಸ್ ಬ್ಯಾಂಡ್, ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ್ ಕುಲಕರ್ಣಿ ಮತ್ತು ತಂಡ, ರಾಯಚೂರು ಶೇಷಗಿರಿದಾಸ್ ಮತ್ತು ತಂಡದಿಂದ ದಾಸವಾಣಿ ಸಂಗೀತ ಪ್ರೇಕ್ಷಕರನ್ನು ರಂಜಿಸಲಿದೆ.
ಪ್ರವೀಣ್ ಗೋಡ್ಖಿಂಡಿ ಜುಗಲ್ಬಂದಿ; ಅಕ್ಟೋಬರ್ 12ರಂದು ಆದಿತಿ ಪ್ರಹ್ಲಾದ್, ಮುದ್ದುಮೋಹನ್ ತಂಡದಿಂದ ಸುಗಮ ಸಂಗೀತ ನಡೆದರೆ, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿ ತಂಡದಿಂದ ಕೊಳಲುವಾದನ ಜುಗಲ್ಬಂದಿ ಜನಸಮೂಹವನ್ನು ಮಂತ್ರಮುಗ್ಧಗೊಳಿಸಲಿದೆ. ಕೊನೆ ದಿನ ಅಂದರೆ ಅಕ್ಟೋಬರ್ 13ರಂದು ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ತಂಡ, ಬಿ. ಜಯಶ್ರೀ ಮತ್ತು ತಂಡ ರಂಗಗೀತೆಗಳನ್ನು ಪ್ರಸ್ತುತಿಪಡಿಸಿದರೆ ಶ್ರೀಧರ್ ಜೈನ್ ಮತ್ತು ತಂಡ ನೃತ್ಯರೂಪಕ ನಡೆಸಿಕೊಡಲಿದೆ.
ವರ್ಚುವಲ್ ಮಾದರಿ; ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ವರ್ಚುವಲ್ ಮಾದರಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಫೇಸ್ಬುಕ್ ಹಾಗೂ ದಸರಾ ವೆಬ್ಸೈಟ್ ಮೂಲಕ ದೇಶ, ವಿದೇಶದಲ್ಲಿಯೂ ಮೊಬೈಲ್ಗಳ ಮೂಲಕ ಇರುವಲ್ಲಿಂದಲೇ ವೀಕ್ಷಿಸಬಹುದಾಗಿದೆ. ಈ ಜನಮೂಲಕ ಹೆಚ್ಚು ಜನರನ್ನು ಸೆಳೆಯಲು ಹಾಗೂ ದಸರಾ ಆಕರ್ಷಣೆಯನ್ನು ಜೀವಂತವಾಗಿಡಲು ಪ್ರಯತ್ನ ನಡೆಯುತ್ತಿದೆ.