ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಬಂದ ಜಂಬೂಸವಾರಿ ಉತ್ಸವ ಮೂರ್ತಿ
ಮೈಸೂರು, ಅಕ್ಟೋಬರ್ 15: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ದಸರೆಯ ಜಂಬೂಸವಾರಿ ಮೆರವಣಿಗೆಗೆ ಕೊನೆ ಕ್ಷಣದ ಸಿದ್ಧತೆಗಳು ನಡೆಯುತ್ತಿವೆ.
ಈ ನಡುವೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಮೇಲೆ ವಿರಾಜಮಾನವಾಗಿ ಸಾಗುವ ಶ್ರೀಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅಲಂಕೃತ ವಾಹನದಲ್ಲಿ ನಾದಸ್ವರ ವಿವಿಧ ಕಲಾತಂಡಗಳ ಜೊತೆಗೆ ಅರಮನೆಗೆ ತರಲಾಯಿತು.
ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಅರಮನೆಗೆ ನಾದಸ್ವರ, ಕಲಾತಂಡದೊಂದಿಗೆ ಅಂಬಾರಿ ಉತ್ಸವ ಮೂರ್ತಿಯನ್ನು ತರಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಇತರ ಗಣ್ಯರು, ದೇವಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಚಾಮುಂಡೇಶ್ವರಿ ವಿಗ್ರಹದ ಮೆರವಣಿಗೆ ನೋಡಿ ಜನರು ಸಂತಸ
ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗುವರು. ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಿತು.
ಇದಕ್ಕೂ ಮುನ್ನ ಚಾಮುಂಡಿ ಬೆಟ್ಟದ ದೇವಸ್ಥಾನದಿಂದ ಹೊರಟ ಚಾಮುಂಡಿ ತಾಯಿಯ ಮೂರ್ತಿ ಮೆರವಣಿಗೆಯನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು, ಚಾಮುಂಡಿ ಬೆಟ್ಟದಿಂದ ತಾವರೆಕಟ್ಟೆ ಗ್ರಾಮಕ್ಕೆ ಚಾಮುಂಡೇಶ್ವರಿ ವಿಗ್ರಹದ ಮೆರವಣಿಗೆ ಬರುತ್ತಿದ್ದಂತೆಯೇ ಸ್ಥಳೀಯರು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು.
ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ ಇಂದು ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಆಚರಣೆಯ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನ ನಡೆಸಲಾಯಿತು.
ನವರಾತ್ರಿ ಮುಗಿದ ಮರುದಿನ ಅಂದರೆ, ದಶಮಿಯಂದು ವಿಜಯದ ಸಂಕೇತವಾಗಿ ವಿಜಯದಶಮಿ ಆಚರಣೆ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಜಯಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ವಿಜಯದಶಮಿ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ 5.45ಕ್ಕೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 7.20ರಿಂದ 7.40ರವರೆಗೆ ಅರಮನೆ ರಾಜಪುರೋಹಿತರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆ ನಡೆಸಿದ ಯದುವೀರ್ ಒಡೆಯರ್, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಮೂಲಕ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.
ಧಾರ್ಮಿಕ ಪೂಜಾ ಕೈಂಕರ್ಯಗಳು, ಖಾಸಗಿ ದರ್ಬಾರ್ ಅಂತ್ಯ
ಪೂಜೆ ನಂತರ ಮೆರವಣಿಗೆ ಮೂಲಕ ಅರಮನೆಗೆ ಹಿಂದಿರುಗಿದ ಯದುವೀರ್ ಒಡೆಯರ್, ಕಂಕಣ ವಿಸರ್ಜನೆ ಮಾಡುವ ಮೂಲಕ ನವರಾತ್ರಿ ಹಾಗೂ ವಿಜಯದಶಮಿಯ ಎಲ್ಲಾ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಖಾಸಗಿ ದರ್ಬಾರ್ ಅಂತ್ಯಗೊಂಡಿತು.
ಈ ನಡುವೆ ಜಂಬೂಸವಾರಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ. ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆಯತ್ತ ಹೊರಟ ಚಾಮುಂಡೇಶ್ವರಿ ಉತ್ಸವ ಮೂರ್ತಿ ಈಗಾಗಲೇ ಅರಮನೆ ತಲುಪಲಿದೆ. ಮತ್ತೊಂದೆಡೆ ಜಂಬೂಸವಾರಿ ಮೆರವಣಿಗೆಗೆ ಅಂತಿಮ ಹಂತದ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದ್ದು, ಮೆರವಣಿಗೆಯಲ್ಲಿ ಸಾಗಲಿರುವ ಗಜಪಡೆಯ ಮೈಮೇಲೆ ವರ್ಣರಂಜಿತ ಚಿತ್ರಗಳು ಕಲಾವಿದರ ಕುಂಚದಲ್ಲಿ ಬಿಡಿಸಿದ್ದಾರೆ.
ಆನೆಯ ಮುಖದ ಮಧ್ಯದಲ್ಲಿ ಗಂಡಭೇರುಂಡ ಚಿತ್ರಾಲಂಕಾರ
ಹುಣಸೂರು ಮೂಲದ ಕಲಾವಿದರಾದ ನಾಗಲಿಂಗಪ್ಪ ಬಡಿಗೇರಿ, ಅಣ್ಣ ನಾರಾಯಣ ಬಡಿಗೇರಿ, ತಮ್ಮ ಅರುಣ್ ಬಡಿಗೇರಿ, ಸ್ನೇಹಿತರಾದ ಮಧು, ರವಿ 2004ರಿಂದ ನಿರಂತರವಾಗಿ ಗಜಪಡೆಯ ದೇಹದ ಮೇಲೆ ಸಾಂಪ್ರದಾಯಿಕ ಚಿತ್ರಕಲೆಯನ್ನು ಬಿಡಿಸಿದ್ದಾರೆ.
ಆನೆಗಳ ದೇಹದ ಗಾತ್ರಕ್ಕೆ ಅನುಗುಣವಾಗಿ ಚಿತ್ರ ಬಿಡಿಸಲಾಗುತ್ತದೆ. ಮುಖದ ಮಧ್ಯದಲ್ಲಿ ಗಂಡಭೇರುಂಡ, ಹಣೆಯ ಭಾಗಕ್ಕೆ ನಾಮ, ಕಿವಿಗೆ ಶಂಖ ಮತ್ತು ಚಕ್ರ, ಸೊಂಡಿಲಿಗೆ ಹೂ ಬಳ್ಳಿ, ಹಾರುವ ಪಕ್ಷಿ, ದಂತದ ಮೇಲ್ಭಾಗ, ನಾಲ್ಕು ಕಾಲುಗಳು ಮತ್ತು ಬಾಲ ಸೇರಿದಂತೆ ಅವುಗಳ ಅಕ್ಕಪಕ್ಕದಲ್ಲಿ ವಿವಿಧ ಚಿತ್ತಾರಗಳನ್ನು ಬಿಡಿಸಲಾಗಿದೆ.
ಜಂಬೂಸವಾರಿ ಆನೆಗಳಿಗೆ ವಿಶೇಷ ಅಲಂಕಾರ
ಇದಕ್ಕಾಗಿ ಬೊಂಬಿನಿಂದ ಮಾಡಿದ ವಿಶೇಷ ಬ್ರಷ್ ಬಳಸಿದ್ದು, ಆನೆಗಳಿಗೆ ಸ್ನಾನ ಮಾಡಿಸಿದ ಬಳಿಕ ಸಂಪೂರ್ಣವಾಗಿ ದೇಹ ಒಣಗಲು ಬಿಟ್ಟು, ಆ ನಂತರ ಮೈಮೇಲಿನ ಬಿಳಿ ಚುಕ್ಕಿಗಳನ್ನು ಕಪ್ಪು ಬಣದಿಂದ ಮುಚ್ಚಲಾಗುತ್ತದೆ. ಆ ಚುಕ್ಕಿಗಳು ಸೊಂಡಿಲು ಮತ್ತು ಕಿವಿ ಭಾಗದಲ್ಲಿ ಹೆಚ್ಚಾಗಿರುತ್ತವೆ. ಪ್ರತಿ ಆನೆಯ ಗಾತ್ರಕ್ಕೆ ತಕ್ಕಂತೆ ಚಿತ್ರಗಳು ಹಾಗೂ ಬಣ್ಣಗಳನ್ನು ಬಳಸಲಾಗುತ್ತದೆ.
ಇನ್ನು ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಮಧ್ಯಾಹ್ನ 2:30ಕ್ಕೆ ಚಿನ್ನದ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಸತತ ಎರಡನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲು ಕ್ಯಾಪ್ಟನ್ ಅಭಿಮನ್ಯು ಸಜ್ಜಾಗಿದ್ದು, ಈತನಿಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರಾ ಸಾಥ್ ನೀಡಲಿವೆ. ಉಳಿದಂತೆ ನಿಶಾನೆ ಆನೆಯಾಗಿ ಧನಂಜಯ್, ನೌಪತ್ ಆನೆಯಾಗಿ ಗೋಪಾಲಸ್ವಾಮಿ, ಸಾಲಾನೆಗಳಾಗಿ ಅಶ್ವತ್ಥಾಮ ಭಾಗಿಯಾಗಲಿವೆ.